Sunday, February 3, 2013

ಹವಿಗನ್ನಡ ನಾಟಕ " ಆಸ್ತಿ ದಕ್ಕಿದ್ದು ಯಾರಿಗೆ ? "

 ಹವಿಗನ್ನಡ ನಾಟಕ " ಆಸ್ತಿ ದಕ್ಕಿದ್ದು ಯಾರಿಗೆ ? "


ಬೆಂಗಳೂರಿನ ಯಾವುದೇ ಮೂಲೆಯಲ್ಲಿದ್ದು ಹವ್ಯಕ ಮಹಾಸಭೆಯ ಸಭಾಭವನದಲ್ಲಿ ನಿನ್ನೆ ನಡೆದ ಹವಿಗನ್ನಡ ನಾಟಕಕ್ಕೆ ಬೈಂದ್ರಿಲ್ಲೆ ಎಂದರೆ ನೀವೇನೋ ಕಳ್ಕಂಡ್ರಿ ಎಂದೇ ಅರ್ಥ. ಹೇಗೆ ಎಂದರೆ ನೀವೇಷ್ಟೇ ನಿತ್ಯಜೀವನದಲ್ಲಿ ಮೇಲೇರಿರಿ -  ಇಲ್ಲೇ ಕೆಳಗಣ ಕಿಬ್ಳಿಲೇ ಇದ್ದಿರಿ, ತಾಯ್ನುಡಿ , ನಲ್ನುಡಿ, ಜೇನ್ ನುಡಿ , ಚೆನ್ನುಡಿ , ಅಂಬೆಗಾಲಿಕ್ಕಿ ನಾವ್ ಆಚೆ ತೂರಿದ್ದನ್ನ ನಾವೇ ಹೆಕ್ಕಿ ಕಣ್ಣರಳಿಸಿ ಹಲ್ಕಿರಿದಾಗ   ಥು .. ಥೂ .... ಏನ್ ಕರ್ಮಾನೋ, ಎಲ್ಲೋಗ್ ಸತ್ರೋ ...... ಎಲ್ಲಾ ಆನೇ ನೋಡ್ಕಳಾಕು , ಖರ್ಮ ಖರ್ಮ ....... ಎಂದ ಆಯಿಗೆ / ಅಬ್ಬೆಗೆ  , ಬೆಬ್ಬೆ ............. ದೆಬ್ಬೆ .......... ನಗು ನೀಡಿ , ಮೊದಲ ಅಕ್ಷರ ಆ ..... ಯೀ........ , ಅ ........ಬ್ಬೇ.............  ಎಂಬಲ್ಲಿಂದ ಆರಂಭವಾದ ನಮ್ಮ ನುಡಿ ಹವಿಗನ್ನಡದಲ್ಲಿ ನಾಟಕದ ಮಾತುಗಳು , ಹೋರಾಟ, ದುಃಖ , ಸಂತೋಷ , ಹಾಸ್ಯ ಎಲ್ಲವಕ್ಕೂ ಏನೋ ಹವಿಗನ್ನಡದ ಲೇಪನವಿದ್ದಂತೆ ಅನಿಸಿ , ಬಾಲ್ಯದಲ್ಲಿ ನೋಡಿದ, ನಾಟಕ ನೋಡುವ ರೂಢಿ ಇರುವವರಿಗೆ ಇತ್ತೀಚೆ ನೋಡಿದ ನಾಟಕಕ್ಕಿಂತ ಇನ್ನೇನೋ ವಿಭಿನ್ನ ರುಚಿ ನೀಡುವ ನಾಟಕ  ನೋಡುವ  ಅವಕಾಶದಿಂದ ವಂಚಿತರಾದಿರಿ.


ಗಾಳಿ ಸತ್ಯನಾರಾಯಣ ಭಟ್ರು , ಅದೇ ನಿಮ್ಮನೆ ಮಾಣಿ ಗಾಳಿ ಭಟ್ರು ಕವಳದ ಮೇಲೆ ಕವಳ ಜಗಿದು, ಪೇಪರ್ ಮೇಲೆ ಪೇಪರ್ ಹರ್ದ್ ಎಸ್ದು , ಮುಂದಿನ ಅಂಕ ಎಂಥ ಬರ್ಯೇಕು ಹೇಳಿ ತಲೆ ಓಡ್ದಿದ್ದಾಗ   ಸಿಟ್ಟ ಬಂದು ಪೆನ್ ಬಿಸಾಡಿ , ಪೆನ್ ತಪ್ಪಲೆ ತಡ ಮಾಡ್ದ ಮಗನ ಮೇಲೆ ಎಗರಾಡಿ, ಚಲೋ ಬರ್ದ್ನನೆ ಎಂದು ಶ್ರೀಮತಿಗೆ ಪುಸಲಾಯ್ಸಿ ರಾತ್ರಿ - ಹಗಲು ಎಲ್ಲಾ ಮನೆ ಒಳಗೆ ಹೆರ್ಗೆ , ಆಚೆ ಈಚೆ ಸುತ್ತಾಡಿ , ಹೊತ್ ಹೊತ್ಗೆ ಊಟ ಮಾಡ್ದೆ ಹೆಂಡ್ತಿನೂ ಕಾಯ್ಸಿ ಬರ್ದ ನಾಟಕ, ನೋಡೋ ಹಾಂಗಿತ್ತು ಎಂದರೆ ನಿಂಗೋಕೆಲ್ಲ ಹಾಗೆ ಅರ್ಥ ಅಪ್ಪುಲೇ ಸಾಧ್ಯ ಇಲ್ಲೇ.  ಸಣ್ಣಕ್ಕಿದ್ದಾಗ ನಾವು, ನೀವು ನೋಡ್ದ ಯಾವ್ ನಾಟಕದ ಕಂಪನಿ ನಾಟಕಕ್ಕೂ ಕಡಮೆ ಇಲ್ಲ್ಯೊ ಭಾವಾ .......  ಹೇಳಾಂಗಿತ್ತು    ಗಾಳಿ ಭಾವನ ನಾಟ್ಕ.



ಎಲ್ಲೋ ಸಿದ್ದಾಪುರದ ಬದಿ ತೋಟದ ಮನೆ ಬದಿ  ಹೆಗ್ಡೇರ್ರ   ಹಿಡ್ಕಬೈಂದ್ವಕು ಹೇಳಿ ಕಣ್ಣ  ಅಗ್ಲಾ ಮಾಡ್ಕಂಡ್   ನೋಡ್ದ್ರೆ.....  ನಮ್ಮ  ಕೆ. ಏಸ್. ಎಫ್. ಸಿ   ಜಿ ಜಿ ಹೆಗ್ಡೇರು . ಚಂದಕ್ಕೆ ಕಚ್ಚೆ ಪಂಚೆ ಹಾಕ್ಕಂಡು ಮುಖದಲ್ಲೆಲ್ಲಾ ಚಿಂತೆ ತುಮ್ಬ್ಕಂಡು ಪ್ರಾಯ್ದಕಾಲದಲ್ಲಿ ಘಟ್ಟದ ಮೇಲೋಗಿ ಕೊಟ್ಟ್ಕೊನೆ ಮಾಡಿ, ಅದಿದು ಚಾಕರಿ ಮಾಡಿ , ಇದ್ದ ಹತ್ತ ಗುಂಟೆ ತ್ವಾಟದಲ್ಲಿ ಜೀವನ ಮಾಡ್ಕೋತಾ , ಹೆರಿಹೆಂಡ್ತಿ ಸತ್ತೋದಾಗ ಕಿರಿ ಹೆಂಡ್ತಿ ಮಾಡ್ಕಂಡು ಹೇರಿ ಹೆಂಡ್ತಿ ಮಗನ್ನ ಚಲೋ ಓದ್ಸಿ ಮುಂಬೈನಲ್ಲಿ ಕೆಲಸ ಮಾಡ್ತಾ ಮನೆ ಕಡೆ ಬಾರದೆ ಇದ್ದ ಮಗನ ಚಿಂತೆ ತುಂಬ್ಕಂಡು ಇದ್ರೆ ,  ಮನೆಲಿದ್ದ ತಿಜೋರಿ ಮೇಲೆ ಕಣ್ಣಿಟ್ಟು  ಅಪ್ಪಂಗೆ   ಗೊತ್ತಾಗದ ರೀತಿಲಿ , ಗಂಡಂಗೆ ಗಮನಕ್ಕೆ ಬರದಿದ್ದ ತೆರದಲ್ಲಿ  ತಮ್ಮಷ್ಟಕ್ಕೆ   ತಾವೇ ದುಡ್ಡು, ಕಾಸು ಸೇರ್ಸೊ ಎರಡನೆ ಹೆಂಡ್ತಿ ಮಗ ಮತ್ತು ಈ ಎರಡನೆ ಹೆಂಡ್ತಿ ಜೊತೆ ಇಳಿ ವಯಸ್ಸಿನಲ್ಲಿ ಸಂಸಾರ ದೂಡುತ್ತಿರೋ ಗಣಪಯ್ಯ .  ನಮ್ಮ  ಜಿ .ಜಿ.ಹೆಗಡೇರು ಗಣಪಯ್ಯನ ಪಾತ್ರದಲ್ಲಿ  ದಿನ ನಿತ್ಯ ನಾಟಕದ ಪಾತ್ರಾ ಮಾಡೊ ಕಂಪನಿ ನಾಟಕದ ಪಾತ್ರಧಾರಿಗಳಿಗೆ ಸಡ್ಡು ಹೊಡ್ಯೋ ರೀತಿ ಡೈಲಾಗ್ ಡೆಲಿವರಿ , ಸಹವರ್ತಿ ಪಾತ್ರಧಾರಿಗಳಿಗೆ ಸಪ್ಪೋರ್ಟ್ ಮಾಡ್ತಿದ್ರು  .........     ಅಣ್ಣಯ್ಯಾ, ಮತ್ತೊಂದ್ ಚಾನ್ಸ್ ಸಿಕ್ಕದಾಗ ತಪ್ಪಸಕಳಡಿ ಮತ್ತೆ  ಹೂಂ.....ssssss .


ಎರಡನೆ ಹೆಂಡ್ತಿ ಹೆಳ್ದ್ನಲೆ ಅಕ್ಕ...., ಅದು ಮಾದ್ರಿ ಹೇಳಿ ಹೆಸ್ರಿಟ್ಕಂಜೆ.ಎ .....  ಮಾದ್ರಿ ಅಂದ್ರೆ ಮಾದ್ರಿ ಇದ್ದಾಗೆ ಇದ್ದಾಗೇ..........  ಇತ್ತು ನೋಡು ಮತ್ತೆ ............ ನಾಟ್ಕ ಮುಗ್ದಮೇಲೆ ಚಲೋ ಮಾಡಿದ್ಯೇ ತಂಗೀ ......  ನಿಂಗೆಲ್ಲಾತೇ ..... ಹೇಳಿ ಮಾತಾಡ್ಸೇಕು ಮಾಡ್ದೆ   ............  ನಂ ಬದಿ ಕೂತ ಮಾಣಿ ಹೇಳ್ದೋ ...  ಅದು ಹೆಂಗ್ಸಲ್ದೆ ಅಕ್ಕಾ .......... ಅಂವ ರಾಧಾಕೃಷ್ಣ ಬೆಳೆಯೂರು ಹೇಳಿ , ಯಕ್ಷಗಾನ ಕುಣಿತಿಲ್ಯನೇ ..... ಅವೇ ಕಂಡ್ಯ ........... ನಂಗಂತೂ ಅವ ಮಾಡಿದ್ದು ಬಾಳಾ ಇಷ್ಟಾಗೋತು ........... ಸಾಬಣ್ಣಣ್ಗೆ  ಫಲ ಗುತ್ತಿಗೆ ಕದ್ದ್ಮುಚ್ಚಿ ಕೊಟ್ಟಿದ್ದ ಹೆಳೋಕಾದ್ರೆ   ಚೆಂದಿ ಮುಖ ಮಾಡಿದ್ದೋ ನೋಡು .......



ಇನ್ನು ಪ್ರಶಾಂತ ಮೂರುರು ಹೇಳೊ ಮಾಣಿ ಜಾತ್ರೆ ಟೆಂಟ್ ಬಾಗಲಲ್ಲಿ ಟಿಕೆಟ್ ಕೊಡ್ತಿದ್ದದ್ದು, ಜಾತ್ರೆಯಲ್ಲಿ ಪಾತ್ರೆ ಅಂಗಡಿ , ಹೂವಿನ , ಪ್ಲಾಸ್ಟಿಕ್ ವ್ಯಾಪಾರಿಗೋ ಎಲ್ಲ ಚಲೋ ಚಲೋ ಅಭಿನಯ ಮಾಡಿದ್ದ. ನೀನಾಸಂನಲ್ಲಿ ಪಳಗಿದ ಮಾಧವ , ಕಿರಿಹೆಂಡತಿಯ ಮಗ ಶಂಕರನಾಗಿ , ಅತಿ ಸರಳವಾಗಿ ಯಾವುದೇ ಲೋಪಗಳು ಕಾಣಿಸದಂತೆ ಅಭಿನಯಿಸಿದ್ದು ಗಮನಸೆಳೆಯಿತು.  



ಈ ನಾಟಕದಲ್ಲಿ ಶಂಭಣ್ಣ ಪಾತ್ರ , ನಾಟಕದ ಖೂಳನಾಯಕನ ಪಾತ್ರ. ಅಂದರೆ ಶಕುನಿ ಇದ್ದಂತೆ. ಎರಡನೇ ಹೆಂಡತಿ ಮತ್ತು ಅವಳ ಮಗನಿಗೆ ದುರ್ಭೋಧೆ ಮಾಡಿ , ಆಸ್ತಿ - ತಿಜೋರಿ ಮೇಲೆ ಕಾಕ ದೃಷ್ಟಿ ಬೀಳುವಂತೆ  ಜಗಳ , ಭಿನ್ನಾಭಿಪ್ರಾಯ ಪ್ರಚೋದಿಸುವ ಈ ಪಾತ್ರ ಮಾಡಿದವರು ಸದಾನಂದ ಹೆಗಡೆ.  ವೇಷ ಭೂಷಣಗಳಲ್ಲಿ  ಮಾಸ್ಟರ್ ಹಿರಿಯಣ್ಣಯ್ಯ ನವರನ್ನು ಅನುಸರಿಸುವ ಪ್ರಯತ್ನ ಮಾಡಿದಂತೆ ಅನಿಸಿತು. ಈ ದಿಶೆಯಲ್ಲಿ  ಸಫಲತೆಯನ್ನು ಕಂಡ ಸದಾನಂದ ಹೆಗಡೆಯವರು , ಪಾತ್ರ ಪೋಷಣೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಭಾವಿಯಾದ  ಧ್ವನಿಯ  ಏರಿಳಿತಗಳಿಂದ , ಕೊಂಕು ದ್ವನಿ ವ್ಯಕ್ತಪಡಿಸಿ ,  ಸ್ವಲ್ಪ ಮಾತಿನ ಮಲ್ಲನಾಗಿ ಎಲ್ಲರ ಮನ ಗೆಲ್ಲಬಹುದಾದ ಅವಕಾಶಗಳನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದು.




ಹಿರೇ ಹೆಂಡತಿ ಮಗ ಸುರೇಶನಾಗಿ ಅಭಿನಯಿಸಿದ ಪ್ರಕಾಶ್ ಕಲಸಿ ಡೈಲೊಗ  ದೆಲಿವೆರಿಯಲ್ಲಿ  ಮತ್ತು ಅಭಿನಯದಲ್ಲಿ ಇನ್ನೂ  ಪಳಗಬೇಕಾಗಿದೆ, ಪೂರ್ವ ತಾಲೀಮು ಸಾಕಷ್ಟು ಆದಂತಿಲ್ಲ.  ಮುಂಬೈ ನಿವಾಸಿ ಸುರೇಶನಾಗಿದ್ದರಿಂದ ಓವರಕೊeಟ್ , ಟೈ ಧರಿಸಬಹುದಿತ್ತು.   ಜಿ.ಜಿ. ಹೆಗಡೆಯವರ ಮುಖದ ವರ್ಣಿಕೆಯಲ್ಲಿ  ಇಳಿವಯಸ್ಸು ಸೂಕ್ತ ಬಣ್ಣಗಳಿಂದ ಇನ್ನೂ ಹೆಚ್ಚಿನ ಶೋಭೆ ತಂದಿದ್ದರೆ ಅವರ ಅಭಿನಯ ಇನ್ನೂ ಪ್ರೌಢವಾಗಿ ಹೊರಹೊಮ್ಮುತ್ತಿತ್ತು. ಒಂದೆರಡು ಸರ್ತಿ ಜಿ.ಜಿ. ಹಗಡೆಯವರು ಹವಿಗನ್ನಡದ ಬದಲು ಶುದ್ಧ ಕನ್ನಡ ಬಳಸಿದ್ದು ಆಕ್ಷೇಪಣೀಯವಾದರೂ , ಎತ್ತಿ ತೋರ್ಪಡಿಸುವಂತಹದ್ದೇನಲ್ಲ. 



ನಾಟಕದಲ್ಲಿ ಸಾಗರ ಜಾತ್ರೆಯ ಸಂಯೋಜನೆ, ಹಿನ್ನೆಲೆ ಸಂಗೀತ, ಜಾತ್ರೆಯ ಗೌಜು ಗದ್ದಲ ಬಹು ನೈಜವಾಗಿ  ಜಾತ್ರೆಯಲ್ಲಿದ್ದೇವೋ ಅನಿಸುವಂತಿತ್ತು.  ಡಾನ್ಸ್ ನಡೆಯುವಾಗ ಶಂಭಣ್ಣ, ಶಂಕರ ಪ್ರೇಕ್ಷಕರ ಎದುರು ಸಾಲಿನಲ್ಲಿ ಕುಳಿತು , ಡಾನ್ಸ್ ಎಂಜಾಯ್ ಮಾಡುವವರು ಮಾಡುವ ಗದ್ದಲ, ಪುಂಡಾಟಿಕೆಗಳನ್ನು ತೋರಿಸಿದ್ದರೆ ಇನ್ನೂ ಪ್ರಭಾವಿಯಾಗುತ್ತಿತ್ತೇನೊ !! ಜಾತ್ರೆಯ ಗೊಂಬೆ ಕುಣಿತವನ್ನು ಅತ್ಯದ್ಭುತವಾಗಿ ಗಾಳಿ ಭಟ್ರು , ಅವರ ಮಗ ಅಚ್ಯುತ್ ಭಟ್ ಪ್ರಸ್ತುತಪಡಿಸಿದರು. ವಿವಿಧ ಮುಖ ವರ್ಣಿಕೆಗಳನ್ನು ಕ್ಷಣದಲ್ಲಿಯೇ  ಅಚ್ಚುಕಟ್ಟಾಗಿ ಬದಲಾಯಿಸುತ್ತ , ಪ್ರೇಕ್ಷಕರಿಗೆ   ಹಿಮ್ಮುಖವಾಗಿ, ಮುಮ್ಮುಖವಾಗಿ ಆಂಗಿಕ ಹಾವ ಭಾವಗಳ ಪ್ರದರ್ಶನ  ಮಾಡುತ್ತ , ಒಮ್ಮೊಮ್ಮೆ ಪ್ರೇಕ್ಷಕರೇ, ನರ್ತಿಸುವವರು ನಮ್ಮತ್ತ ಮುಖ ಮಾಡಿ ನರ್ತಿಸುತ್ತಿದ್ದಾರೆಯೇ ಅಥವಾ ಬೆನ್ನು ಮಾಡಿ ಅಂದರೆ ಹಿಮ್ಮುಖವಾಗಿ ನರ್ತಿಸುತ್ತಿದ್ದಾರೆಯೇ  ಎಂಬ ಯೋಚನೆಮಾಡಲಾಗದ ರೀತಿಯಲ್ಲಿ ಪರಿಪಕ್ವವಾಗಿ ನರ್ತನ ನೀಡಿದರು. ಈ ಡಾನ್ಸ್ ಗೆ ನೀಡಿದ ವ್ಯಾಖ್ಯಾನದ   ಅವಶ್ಯಕತೆ ಇರಲಿಲ್ಲ . ವ್ಯಾಖ್ಯಾನ ರಸಾಭಾಸ , ರಸಭಂಗ   ಉಂಟುಮಾಡಿತು. ಅಲ್ಲದೆ ಡಾನ್ಸ್ ಬಹು ಹೊತ್ತು ನಡೆದಿದ್ದರಿಂದ , ಏಕತಾನತೆ ಮೂಡಿ , ಸಮಯ ಡಾನ್ಸ್ ಗೆ ಜಾಸ್ತಿಯಾಯಿತೆನಿಸಿತು. ಇದೆ ಸಮಯದಲ್ಲಿ ಇನ್ನೊಂದು ಗುಡಗುಡಿ ಮಂಡಲದಂತಹದನ್ನು ತೋರಿಸಬಹುದಿತ್ತು .



ಇನ್ನೊಂದು ಆಕರ್ಷಣೀಯವಾಗಿ ಮೂಡಿಬಂದ ಪಾತ್ರ ಕೊನೆಗೌಡ. ಅಡಿಕೆ ಕೊನೆ ಕೊಯ್ಯುವ ಕೆಲಸದವ. ವೇ.ಮೂ. ರಾಮಚಂದ್ರ ಭಟ್ ರ ಸುಪುತ್ರ ಮಂಜು  ತುಂಬಾ ಅಚ್ಚುಕಟ್ಟಾಗಿ ಈ ಪಾತ್ರ ನಿರ್ವಹಿಸಿದರು. ಅಡಿಕೆ ಬೆಳೆಯುವ ಹಳ್ಳಿಗಳಲ್ಲಿ , ಹಳ್ಳಿಗಳ ಸಮೀಪವಿರುವ ಪೇಟೆಗಳಲ್ಲಿ  ಈ ನಾಟಕ ಅಭಿನಯಿಸಿದರೆ ಮತ್ತು ಮಂಜು ಈ ಪಾತ್ರ ನಿರ್ವಹಿಸಿದರೆ,  ಅತಿ ಬೇಡಿಕೆಯಿರುವ ಕೊನೆಗೌಡನ ಕೊರತೆಯನುಭವಿಸುತ್ತಿರುವ  ತೋಟದ ಮಾಲೀಕರು ಈ ಕೊನೆ ಗೌಡನನ್ನು ಎತ್ತಿ ಕೊಂಡೊಯ್ದಾರು . ಮಂಜು   ಹುಷಾರು !!!!!!


ನಾಟಕದ ಅಂತ್ಯ ಇನ್ನೂ ಸ್ವಲ್ಪ ಪ್ರಭಾವಿಯಾಗಿ ಆಯೋಜಿಸಬೇಕಾಗಿದೆ. ಪ್ರೇಕ್ಷಕ ಹೊರಡುವಾಗ ನಾಟಕ ಹೇಳಬಯಸಿದ ತಥ್ಯವನ್ನು ಚಿಂತನೆಗೆ ಹಚ್ಚುತ್ತ ಸಾಗುವಂತೆ ಮಾಡಲು  ನಿರ್ದೇಶಕ ಯೋಚಿಸಬೇಕು. ಇದು ಗಾಳಿಯವರ ಮೊದಲ್ನೇ ಸಾಹಸ . ಸಾಹಸದಲ್ಲಿ ಗೆದ್ದಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ.


ಹವ್ಯಕ ಪ್ರಾಂಗಣ ತುಂಬಿ ತುಳುಕುತ್ತಿತ್ತು. ಹವ್ಯಕೇತರರೂ   ಪ್ರೇಕ್ಷಕ ವೃಂದದಲ್ಲಿದ್ದುದು , ಅವರೆಲ್ಲ ನಾಟಕವನ್ನು ತುಂಬು ಮನಸ್ಸಿನಿಂದ ಸವಿಯುತ್ತಿದ್ದುದೂ ( ನಾಟಕ ಪೂರ್ತಿ ಹವಿಗನ್ನಡ ಭಾಷೆಯಲ್ಲಿದ್ದರೂ   ಸಹ ) ಅಲ್ಲಲ್ಲಿ ಕಾಣಬರುತ್ತಿತ್ತು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Feb  03 , 2013 .

No comments:

Post a Comment