Tuesday, November 19, 2013

About : Shree Akhila Havyaka Mahasabha ® Bangalore.

About  :   Shree Akhila Havyaka Mahasabha ® Bangalore.


ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಮಲ್ಲೇಶ್ವರದಲ್ಲಿರುವ ಕಟ್ಟಡವನ್ನು ಉರುಳಿಸಿ ನೆಲಸಮ ಮಾಡಿ ಇಟ್ಟಿದ್ದು ನಿಮ್ಮೆಲ್ಲರ ಗಮನದಲ್ಲಿದೆ ತಾನೇ?


ಕಟ್ಟಡದ ಪುನರ್ ನಿರ್ಮಾಣಕ್ಕೆ ನಿಮ್ಮೆಲ್ಲರಲ್ಲಿ ಹಣದ ಸಹಾಯ ಕೇಳಲು ಬರುತ್ತಿದ್ದಾರೆ, ಬರುವವರಿದ್ದಾರೆ ತಾನೇ? ಆಗ ಪದಾಧಿಕಾರಿಗಳಿಗೆ ಈ ಪ್ರಶ್ನೆಗಳನ್ನು ಕೇಳಲು ಮರೆಯದಿರಿ:


೧. ಸಾಕಷ್ಟು ಮೊತ್ತದ  ಆದಾಯವನ್ನು ತರುತ್ತಿರುವ ಕಟ್ಟಡವನ್ನು ಪುನರನಿರ್ಮಾಣಕ್ಕೆ ಬೇಕಾದ ಹಣ ಸಂಗ್ರಹವಾಗುವ ಮುನ್ನ ಕೆಡವುವಂತಹ ಅವಶ್ಯಕತೆ ಏನಿತ್ತು?  ವಸತಿಗೃಹದಲ್ಲಿರುವ ವಿಧ್ಯಾರ್ಥಿಗಳನ್ನು ಅವಧಿಗೆ ಮುನ್ನ ತೆರವುಗೊಳಿಸುವ ಅವಶ್ಯಕತೆ ಯಾಕಿತ್ತು?



೨.  ಕಟ್ಟಡ ನಕ್ಷೆ ತಯಾರಿ ಮಾಡಿ ಪೂರ್ವಾನುಮತಿ ಪಡೆಯುವ ಹಂತದಲ್ಲಿ ಎಡವಿದ್ದೇಕೆ?  ಅಲ್ಲಲ್ಲಿ ಕೇಳಿಬಂದಂತೆ ಒಮ್ಮೆ ಅರವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಪಡೆದ ಪೂರ್ವಾನುಮತಿಯನ್ನು ಪುನಃ ಪರಿಶೀಲನೆಗೊಳಪಡಿಸಿ ಮತ್ತೆ ನಲವತ್ತೈದು ಸಾವಿರ ರೂಪಾಯಿ ಖರ್ಚು ಮಾಡುವ ಪ್ರಸಂಗವನ್ನು ತಂದಿತ್ತವರು ಯಾರು ಎಂಬುದನ್ನೇಕೆ ಸಾರ್ವಜನಿಕ ಪಡಿಸಲಿಲ್ಲ?  ಈ ರೀತಿ ಅಜಾಗರೂಕತೆಯಿಂದ ಸಮಾಜ ಬಾಂಧವರ ಹಣ ವ್ಯರ್ಥವಾದರೂ ಆ ರೀತಿಯ ಜನರನ್ನೇ ಏಕೆ ಅವಲಂಬಿಸಿ ಜವಾಬ್ದಾರಿ ಸ್ಥಾನದಲ್ಲಿ ಮುಂದುವರಿಸುತ್ತೀರಿ? ಇಲ್ಲಿ ಪದಾಧಿಕಾರಿಗಳ ಸ್ವ ಹಿತ ಅಡಗಿರುವದಾದರೂ ಏನು


೩.  ೨೦೧೩ ರಲ್ಲಿ ನಡೆದ ಚುನಾವಣೆಗೆ ಮತ್ತು ವಾರ್ಷಿಕ ಮಹಾಸಭೆಗೆ ಪೋಲಿಸ್ ರಕ್ಷಣೆ ಪಡೆಯುವಂತೆ ಸಂದರ್ಭಗಳನ್ನು ತಂದಿತ್ತ ಪದಾಧಿಕಾರಿಗಳ ಆಡಳಿತ ರೀತಿ ಹೇಸಿಗೆ ಹುಟ್ಟಿಸುವಂತಿಲ್ಲವೇ? ಜಗತ್ತಿನಲ್ಲೆಲ್ಲ ಸುಭಗರು, ಸೌಮ್ಯ ಮನೋಭಾವದ ಜನಾಂಗ , ಸುಸಂಕೃತರು, ವಿದ್ಯಾವಂತರು, ಸಹೃದಯಿಗಳು , ಶಾಂತಿಪ್ರಿಯರು ಎಂದೆಲ್ಲ ಶತಶತಮಾನಗಳಿಂದ ಹೆಸರುವಾಸಿಯಾದ ಸಮಾಜಕ್ಕೆ ಕಳಂಕ ತಂದಿರಲ್ಲವೇ


೪. ಏನಕೇನ ಪ್ರಕಾರೇಣ ಖುರ್ಚಿಯನ್ನುಳಿಸಿಕೊಳ್ಳಬೇಕು , ಗುಪ್ತ ಗುಪ್ತವಾಗಿ ಬಚ್ಚಿಟ್ಟ ಮಾಹಿತಿಗಳು ಹೊರಬರಬಾರದು ಎಂದು ತಮ್ಮ ಕೇರಿಯ, ಊರಿನ , ಯಾವುದೇ ಮೀಟಿಂಗ ಗಳಿಗೆ ಬರದ, ಬಂದರೂ ಎಲ್ಲ ಸುಮ್ಮನೆ ಹ್ನೂ ಎನ್ನಬಹುದಾದವರನ್ನೇ ಆಯ್ದು ಆಯ್ದು ಅಧಿಕಾರ ಬಲದಿಂದ ಸ್ಥಾನವನ್ನುಳಿಸಿಕೊಳ್ಳುವ ಹಪಾ ಹಪಿ ಯಿಂದ ಒಟ್ಟಾರೆ ಸಮಾಜಕ್ಕೆ ಹಾನಿಯಾಗುತ್ತಿದೆಯಲ್ಲವೇ


೫.  ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿಮ್ಮ ಕಾರ್ಯ ರೀತಿ ಕುರಿತು ಆಸಕ್ತಿ ವಹಿಸಿ ವಿಚಾರಿಸಿದರೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನೇ ಹೊಂದಿಲ್ಲ. ಕೇವಲ ಕಾನೂನಿಗೋಸ್ಕರವಾಗಿ ಕಣ್ಣುಮುಚ್ಚಾಲೆಯ ಲೆಕ್ಕ  ಪತ್ರಗಳು , ಆಂತರಿಕ ವರದಿ , ವಾರ್ಷಿಕ ಸಭೆ ಎಂದು ಅಧಿಕಾರದ ದರ್ಪವನ್ನು ತೋರ್ಪಡಿಸುತ್ತೀರಿ. ಮಾತನಾಡುವವನ ಧ್ವನಿ  ಅಡಗಿಸುವ ತಂತ್ರಗಳನ್ನೆಲ್ಲ ಕಾರ್ಯಗತ ಮಾಡಿದ್ದೀರಿ ಎಂದು ಸ್ವಾಭಾವಿಕವಾಗಿ ತೋರ್ಪಡುವದು. ನಮ್ಮ ಸಮಾಜಕ್ಕೆ ಇವೆಲ್ಲ ಶೋಭೆ ತರಬಲ್ಲುದೇ ?


೬. ಒಟ್ಟಾರೆ ದೇಶದ ಜನಸಂಖ್ಯೆಯನ್ನು ಗಮನಿಸಿದರೆ ನಮ್ಮ ಸಮಾಜ ಕಡಿಮೆ ಜನ  ಸಂಖ್ಯೆಯನ್ನು ಹೊಂದಿದೆ. ಈ ಸಮಾಜದಲ್ಲೇ ಹತ್ತಾರು ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿವೆ. ಅದೇ ರೀತಿ ವಿವಿಧ ರೀತಿಯ ಶಿಕ್ಷಣ ಪಡೆದ , ವಿವಿಧ ರೀತಿಯ ಉದ್ಯೋಗ ಕೈಗೊಂಡಿರುವ ಸಮಾಜಬಾಂಧವರನ್ನು ಒಗ್ಗೂಡಿಸುವ ಯಾವ ಕಾರ್ಯಗಳೂ ಈ ಸಂಸ್ಥೆಯಿಂದ ತೋರಿಬರುತ್ತಿಲ್ಲ.  ಶಾಲೆಯೊಂದರ ಚಟುವಟಿಕೆಗಳಂತೆ ಆಟೋಟ, ವರ್ಷದಲ್ಲಿ ಹತ್ತಾರು ವಿವಾಹ ಮಾಹಿತಿ ಬೈಠಕ್ಕಗಳು , ವರ್ಷಕ್ಕೊಮ್ಮೆ ಪುಸ್ತಕಗಳನ್ನು ಕೊಳ್ಳಲೂ  ಸಾಲದಾದಂತ ವಿಧ್ಯಾರ್ಥಿ ವೇತನಗಳು ಇವುಗಳನ್ನು ನೆಚ್ಚಿ ಚಟುವಟಿಕೆಗಳನ್ನು ಕೈಗೊಳ್ಳುವ ನಿಮ್ಮ ಮುಂದಾಳತ್ವವನ್ನು ಏಕೆ ಮತ್ತು ಹೇಗೆ ಮೆಚ್ಚಬೇಕು ? ಹಣಕಾಸು ವ್ಯವಹಾರದ ಸೂಕ್ತ ರೀತಿಯ ಪಾರದರ್ಶಕತೆ , ಎಲ್ಲ ರೀತಿಯ ಔದ್ಯೋಗಿಕ  ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಮಾಜ ಬಾಂಧವರ ಪ್ರತಿನಿಧಿತ್ವ ಆಡಳಿತ ಮಂಡಳಿಯಲ್ಲಿ ಇಲ್ಲದಿರುವಿಕೆ , ಹತ್ತಾರು ವರ್ಷಗಳಿಂದ ಅದೇ ನಿರ್ದೇಶಕರು ಮುಂದುವರಿದಿರುವಿಕೆ ಇತ್ಯಾದಿ ಅಂಷಗಳನ್ನೆಲ್ಲ ಗಣನೆಗೆ ತೆಗೆದುಕೊಂಡಾಗ ಪ್ರಸಕ್ತ ಮುಂದಾಳತ್ವದಲ್ಲಿ ಸಮಾಜ ಬಾಂಧವರಿಗೆಲ್ಲ  ವಿಶ್ವಾಸದ  ಕೊರತೆ ಸಹಜವಲ್ಲವೇ ? ಇಲ್ಲದಿದ್ದರೆ ಅರವತ್ತೆರಡು   ವರ್ಷಗಳ ಇತಿಹಾಸವಿರುವ  ಈ ಸಂಸ್ತೆ ಪ್ರವರ್ಧಮಾನಕ್ಕೆ ಬರದಿರುತ್ತಿತ್ತೇ ?


೭. ಸಮಾಜದಲ್ಲಿ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರು , ಈ ರೀತಿ ಜನಗಳಿಗೆ ಸಾಮಾಜಿಕ ಸಂಸ್ಥೆಗಳಿಂದ ಸೂಕ್ತ ಸಹಾಯ ಸೌಲಭ್ಯಗಳ ಅವಶ್ಯಕತೆಯಿರುತ್ತದೆ. ಈಗ ಹಾಲಿ ನೀವು ನಡೆಸುತ್ತಿರುವ ಯಾವ ವಿಧ್ಯಾರ್ಥಿನಿಲಯಗಳಲ್ಲಿ ಎಷ್ಟು ಅಸಹಾಯಕ ಬಡ ಮಕ್ಕಳಿಗೆ ಉಚಿತ ಸೌಲಭ್ಯ  ನೀಡಿದ್ದೀರಿ? ಸಮಾಜ ಬಾಂಧವರಿಂದ ಸಂಗ್ರಹಿಸಿದ ಹಣದಿಂದ  ವಿಧ್ಯಾರ್ಥಿನಿಲಯಗಳನ್ನು ಕಟ್ಟಿ ಉಳ್ಳವರ ಮಕ್ಕಳಿಗೆ ಸೌಲಭ್ಯ  ಒದಗಿಸಿ ಆದಾಯದ ಮೂಲ ವರ್ಧಿಸಬೇಕೆಂಬ ನಿಮ್ಮ ಧೋರಣೆಯನ್ನು ನಾವ್ಯಾಕೆ ಅನುಮೋದಿಸಿ ಹಣಕಾಸಿನ ದೇಣಿಗೆ ನೀಡಬೇಕು?


  ಈ ರೀತಿ ಹತ್ತಾರು ಪ್ರಶ್ನೆಗಳನ್ನು ಕೇಳುವ ಅಧಿಕಾರ , ಜವಾಬ್ದಾರಿ ಎಲ್ಲ ಸಾಮಾನ್ಯ ಸದಸ್ಯರಿಗೆ ಇರುತ್ತದೆ. ಅದೇ ರೀತಿ ಸಾಮಾನ್ಯ ಸದಸ್ಯರು ಜಾಗ್ರತರಾಗಿದ್ದಲ್ಲಿ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುವ ಅರಿವು ಉಂಟಾಗುತ್ತದೆ. ಸಮಾಜ ಅಭಿವೃದ್ಧಿ ಕಾಣುತ್ತದೆ. ಅಭಿವೃದ್ಧಿಯಾದ ಸಮಾಜ ಸುಖ , ನೆಮ್ಮದಿಗಳಿಂದ  ಮಿನುಗುತ್ತದೆ. ತಪ್ಪಿದಲ್ಲಿ ಪದಾಧಿಕಾರಿಗಳಷ್ಟೇ ಮಿನುಗುತ್ತಾರೆ ಮತ್ತು ಒಮ್ಮೆ ಮಿನುಗುವ ಬೆಳಕಿನ ಅಭಿಲಾಷೆ ಪಡೆದರೆ ಇನ್ಯಾರೂ ಹತ್ತಿರ ಸುಳಿಯದಂತೆ ವ್ಯೂಹ ರಚಿಸುತ್ತಿರುತ್ತಾರೆ. 


ಸದಸ್ಯರಾಗಿದ್ದವರ ಮನೆಗಳಿಗೆಲ್ಲ ಬಂದ ಹವ್ಯಕ ಪತ್ರಿಕೆ ಸಂಚಿಕೆಯಲ್ಲಿರುವ ಪದಾಧಿಕಾರಿಗಳ ಗುಣ ವಿಶೇಷತೆಗಳನ್ನು ಕಂಡುಕೊಳ್ಳಿ . ನಿಮಗೆಲ್ಲ ನನಗಿಂತ ಹೆಚ್ಚಿನ ಅರಿವು ಇದೆ. ನಿಮ್ಮ ಭೆಟ್ಟಿಗೆ ಪದಾಧಿಕಾರಿಗಳು ಬಂದಾಗ ನಮ್ಮೂರಿನವ, ನಮ್ಮ ಕೇರಿಯವ, ನಮ್ಮ ಮಗ, ನಮ್ಮ ಬಾಂಧವ ಎಂಬುದನ್ನು ನೆನಪಿಸಿಕೊಂಡು ಟೀ , ಕಾಫಿ ಯೊಂದಿಗೆ ಸತ್ಕರಿಸಿ. ದೇಣಿಗೆಯ ಆಶ್ವಾಸನೆ ನೀಡುವ ಮುನ್ನ ಈ  ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಅವರೊಂದಿಗೆ ಕೂಲಂಕುಶವಾಗಿ ಪ್ರಶ್ನಿಸಿ , ಸಮಾಜದಲ್ಲಿ ಸಂಘಟನೆಗೆ ಸ್ಪಂದಿಸಿ ಎಂಬ ಅರಿಕೆ. 


ನಮ್ಮ ಸಮಾಜ ಬಾಂಧವರ ಸಂಖ್ಯೆ ನಾಲ್ಕರಿಂದ ಐದು ಲಕ್ಷ ಎಂದು ಒಂದು ಅಂಬೋಣ. ಅಂದರೆ ಸಾಮಾನ್ಯವಾಗಿ ನಲವತ್ತೈದರಿಂದ ಅರವತ್ತು ಸಾವಿರ ಕುಟುಂಬಗಳಿರಬಹುದು. ಈ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಸದಸ್ಯ ಸಂಖ್ಯೆ  ಕೇವಲ ಹದಿನಾರು , ಹದಿನೇಳು ಸಾವಿರಗಳು ಮಾತ್ರ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ. ಹೆಚ್ಚು ಹೆಚ್ಚು ಸೂಕ್ತವಾದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡು , ಜವಾಬ್ದಾರಿಯುತ ಪದಾಧಿಕಾರಿಗಳನ್ನು ಸಂಘಟನೆಗೆ ನೀಡಿ ಎಂಬ ಬಿನ್ನಹ. 


ಈ ಅಹವಾಲನ್ನು ಎಲ್ಲ ಹವ್ಯಕರಿಗೆ, ಎಲ್ಲ ಹವ್ಯಕ ಕುಟುಂಬಗಳಿಗೆ ತಲುಪಿಸುವ  ಜವಾಬ್ದಾರಿ  ತಮ್ಮದೆಲ್ಲರದ್ದಾಗಿದೆ. ಪ್ರಯತ್ನಪೂರ್ವಕವಾಗಿ ಈ ವಿಚಾರಗಳನ್ನು ಹೆಚ್ಚು  ಹೆಚ್ಚು ಪ್ರಚಾರ ಮಾಡಿ, ಪದಾಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಸಮಾಜ ಬಾಂಧವರಲ್ಲೆಲ್ಲಾ ಬೆಳೆಸಿ ಎಂಬ ಅರಿಕೆಯೊಂದಿಗೆ,


ಹರಿಹರ . ಎಸ್.  ಭಟ್ , ಬೆಂಗಳೂರು. 
ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

ನವೆಂಬರ್ ೨೦, ೨೦೧೩.