Saturday, February 2, 2013

ಹವ್ಯಕ ಮಕ್ಕಳ ನಾಟಕ .

ಸಂಕೇತ ಶರ್ಮಾ, ಶರತ್ ಹೆಗಡೆ, ಅಭಿಷೇಕ್ ಹೆಗಡೆ, ಸುದರ್ಶನ್ ಹೆಗಡೆ, ಶಾಂತಕುಮಾರ .ವಿ , ನಿಶಾಂತ ಹೆಗಡೆ, ಕೃಷ್ಣಾನಂದ ಹೆಗಡೆ , ಗಣಪತಿ ಹೆಗಡೆ, ಭರತಕುಮಾರ   ಹೆಗಡೆ , ಗಣೇಶ್ ಭಟ್ಟ  , ನಾರಾಯಣ ಹೆಗಡೆ , ಗುರುಪ್ರಸಾದ ಹೆಗಡೆ .......... ಇದೇನ್ರೋ  ಹವ್ಯಕ  ಮಕ್ಕಳಿಗೆ ಜಾತಕ ಕೇಳ್ತಿದ್ರೇನ್ರೋ   ಎಂದ್ರಾ ?  ಹಾಗಲ್ಲ ಮಾರಾಯ್ರೇ.....   ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪುಸ್ತಕ, ಕಂಪ್ಯೂಟರ್ಸ್ ಜೊತೆ ವಿಹರಿಸುವ ಈ ಮಕ್ಕಳೆಲ್ಲ ಸೇರಿ ಒಂದು ನಾಟಕ ಮಾಡಿದ್ದೋ. ನಾಟಕವೋ ಅದೇನು ಮಹಾ , ದಿನಾ ಇನ್ನೇನು ಮಾಡ್ತಾ? ಓದ್ಯೇನೋ ಕೇಳಿದ್ರೆ ನಾಳೆ, ಪರೀಕ್ಷೆ   ಹೇಗಾತೋ ಕೇಳಿದ್ರೆ ಚೆನ್ನಾಗಾತು , ರಿಸಲ್ಟ್ ಬಂದಾಗ ಕೇಳಿದ್ರೆ - ಮುಂದಿನ ಸಾರಿ ಒಳ್ಳೆ ಮಾರ್ಕ್ ತೆಗಿತಿ - ಈಗ ನೀ ಸುಮ್ನಿರು , ಸಿ.ಈ.ಟಿ ರೆಂಕ್ ಬಂದಾಗ ಪಿ.ಯು.ಸಿ ನೋಡೆ ಅಮ್ಮ/ ಆಯಿ ತೊಂಭತ್ತಾರು , ತೊಂಭತ್ತೇಳು ಮಾರ್ಕ್ - ಸಿ.ಇ.ಟಿ ಎಲ್ಲವು ಹಾಗೇ ಮಾಡಿದ್ದು ಒಂದುವರೆ ಸಾವಿರದ ಮೇಲೆ ನಂಬರು ಹೀಗೆಲ್ಲ ನಾಟಕದ ಮಾತುಗಳನ್ನೇ ಕೇಳಿದ ಅಪ್ಪ ಅಮ್ಮ " ನಾಟಕ ಮಾಡದೆ ಇನ್ನೇನ್ ಮಾಡ್ತ್ಯ ಈಗಿನ ಮಕ್ಕ"  ಹೇಳುವದು ಸಾಮಾನ್ಯ. ಆದರೆ ಇಂದಿನ ನಾಟಕ ಅಂತಿರಲಿಲ್ಲ . ಹೇಗಿತ್ತು ಎಂದರೆ ಐವತ್ತು ಅರವತ್ತು ವರುಷ ಸಂದಿರುವವರೆಲ್ಲ ತಮ್ಮ ಪ್ರಾಯದ ದಿನಗಳಲ್ಲಿ ನಡೆದು ಬಂದ ಹುಡುಗಾಟದ ದಾರಿ ನೆನಪಿಸುವಂತಿತ್ತು. ಓಹೋ ಈ ಮಕ್ಕಗೆಲ್ಲ ನಾವ್ ಮಾಡಿದ್ದು ಹೇಗ್ ಗೊತ್ತಾತು, ನಾವ್ಯಾರಿಗೂ ಹೇಳ್ದಾಯಿಲ್ಲೆ  , ಬದಿಮನೆಯವಕ್ಕೆ ನಮ್ಮನೆ ಕಂಡರೆ ಅಷ್ಟಾಕ್ಕಷ್ಟೇ , ಹಾಗಾಗಿ ಅವ್ರೇನಾದ್ರೂ ಹೆಳ್ದ್ವೋ, ಎಂದು ನಾಟಕ ನೋಡಿ ನಗುತ್ತಿದ್ದ ಜನರು ಅಲ್ಲಲ್ಲಿ  "ಹೆಗಲು ಮುಟ್ಟಿ ನೋಡದ " ಎಂಬ ಗಾದೆಮಾತಿನಂತೆ ತಮ್ಮ ಅಂದಿನ ದಿನಗಳನ್ನು ನೆನಪಿಸಿಕೊಂಡಿರಬಹುದು. ಅಂದ ಹಾಗೆ ಈ ಮಕ್ಕಳೆಲ್ಲ ಇಂಜಿನಿಯರಿಂಗ್ ಓದುತ್ತಿರುವ ಮಕ್ಕಳು. ಹವ್ಯಕ ಹಾಸ್ಟೆಲ್ನಲ್ಲಿ  ತಂಗಿರುವ ಈ ಮಕ್ಕಳು , ಇಂದು ಹವ್ಯಕ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಹವ್ಯಕ ಹುಡುಗಿಯರು ಇತರೆ ಸಮಾಜದ ಗಂಡುಮಕ್ಕಳ ಜೊತೆ ಓಡಿಹೋಗುವದು, ಹಳ್ಳಿಗಳಲ್ಲಿ  ಶಾಲಾ , ಕಾಲೇಜು ಗಂಡು  ಮಕ್ಕಳು ವರ್ತಿಸುವ ರೀತಿ  , ಹಳ್ಳಿಯ ಹಿರಿಯ ಜನಗಳು  ಅಗಂತುಕರನ್ನು   ಎಷ್ಟು ಸುಲಭವಾಗಿ ನಂಬಿ ಮೋಸಹೊಗುತ್ತಾರೆ ಇತ್ಯಾದಿ ವಿಷಯವನ್ನಿಟ್ಟು ಅರ್ಧ ಘಂಟೆಯಲ್ಲಿ ಮಾರ್ಮಿಕವಾಗಿ, ಸರಳ ವೇಷ ಭೂಷಣಗಳೊಂದಿಗೆ   , ಮನಸ್ಸಿಗೆ ನಾಟುವಂತೆ , ಅಲ್ಲಲ್ಲಿ ಕಚಗುಳಿ ಇಡುವ ನೈಜವಾದ  ಸಂಭಾಷಣೆಗಳೊಂದಿಗೆ , ಹವ್ಯಕ ಭಾಷೆಯಲ್ಲಿ  ಪ್ರಸ್ತುತಪಡಿಸಿದ ನಾಟಕ ಪ್ರತಿಯೊಬ್ಬರನ್ನೂ ರಂಜಿಸುವದರ ಜೊತೆಗೆ ಪ್ರಭಾವಿತವಾಗಿ ನಿನ್ನೆಯ, ಇಂದಿನ , ನಾಳಿನ ಹವ್ಯಕರ ಸಮಸ್ಯೆಗಳಿಗೆ ಹವ್ಯಕರೇ ಹೇಗೆ ಕಾರಣ ಎಂಬ ಅಂಶವನ್ನು ಅರಿತೋ ಅರಿಯದೆಯೋ ಅನಾವರಣಗೊಳಿಸಿತ್ತು  . 

ಈ ನಾಟಕದ ಎಲ್ಲ ಪಾತ್ರಧಾರಿಗಳು ಅತಿ ಉತ್ತಮವಾದ ಅಭಿನಯ ನೀಡಿದರು.  ಹೆಸರಿಸಲೇಬೇಕಾದ ನೈಜ ಅಭಿನಯ ಮತ್ತು ಮಾತುಗಳು,  ಭರತಕುಮಾರ ಹೆಗಡೆ ಮತ್ತು ನಾರಾಯಣ ಹೆಗಡೆ ಕ್ರಮವಾಗಿ ಓಡಿ ಹೋಗುವ  ಹವೀಕ ಹುಡುಗಿ ಮತ್ತು ಓಡಿಸಿಕೊಂಡು ಹೋಗುವ  ಸಾಬರ ಹುಡುಗ ಪಾತ್ರಗಳು. ಇನ್ನೂ ಹೆಚ್ಚಿನ  ಕಲಾತ್ಮಕ ಅಭಿನಯ ಉಂಡಾಡಿ ಗುಂಡ ಹವೀಕ ಹುಡುಗರ ಪಾತ್ರಮಾಡಿದವರು ಮಾಡಬಹುದಿತ್ತು. ಶರತ್ ಮತ್ತು ಸಂಕೇತ್ ಸೇರಿ ಬರೆದ ಈ ನಾಟಕದ ಮಾತುಗಳು ನೈಜವಾಗಿ ಹವ್ಯಕರ ಜನ ಜೀವನವನ್ನು ಪ್ರತಿನಿಧಿಸಿದೆ. ನಿರೂಪಣೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat.blogspot.com

Feb 02 , 2013.

No comments:

Post a Comment