Saturday, February 16, 2013

ಹಣ ಮಾಡುವದರ ಜೊತೆ , ಸಮಾಜಮುಖಿಯಾಗುತ್ತಿರುವ ಪತ್ರಿಕಾ ಪ್ರಪಂಚ.


ಹಣ ಮಾಡುವದರ ಜೊತೆ , ಸಮಾಜಮುಖಿಯಾಗುತ್ತಿರುವ ಪತ್ರಿಕಾ ಪ್ರಪಂಚ.
============================================

 ವಿಜಯವಾಣಿ ಪತ್ರಿಕೆ ಹಾಗೂ ಸ್ಥಳೀಯ ಕಾರ್ಪೊರೇಟರ್  ರ.ಆಂಜನಪ್ಪ ಸೇರಿ ಸ್ಥಳೀಯ ಸಮಸ್ಯೆಗಳ ಕುರಿತು  ನಾಗರಿಕ ಅಹವಾಲುಗಳನ್ನು ಕೇಳುವ ಎರಡು   ತಾಸುಗಳ ಕಾರ್ಯಕ್ರಮ ಕೆಂಗೇರಿ ಉಪನಗರದ ಬ್ರಾಹ್ಮಣ ಸಭಾ ದಲ್ಲಿ ಏರ್ಪಡಿಸಿದ್ದರು.  ಕರ್ನಾಟಕ ಸರಕಾರದ  ಆರೇಳು ಡಿಪಾರ್ಟ್ಮೆಂಟ್ ಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಕುಳಿತು ನಾಗರಿಕರ ಸಮಸ್ಯೆಗಳನ್ನು ಬಿಂಬಿಸುವ ಮಾತುಗಳನ್ನು ಆಲಿಸಿದರು.



ವಿಜಯವಾಣಿ ಪತ್ರಿಕೆಯ ಸಂಪಾದಕ ತಿಮ್ಮಪ್ಪ ಭಟ್ ರವರು ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಜಯವಾಣಿ ಪತ್ರಿಕೆ , ಪತ್ರಿಕಾ ರಂಗದ ಚಟುವಟಿಕೆಗಳ ಜೊತೆ ಜೊತೆಗೆ ತನ್ನ ಪತ್ರಿಕಾ ಓದುಗರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಈ ಹಿಂದೆ ಅಕ್ಕಿ ಬೆಲೆ ಅತಿ ಏರಿಕೆ ಕಂಡಾಗ , ಬೆಂಗಳೂರು ಕಸದ ಕೊಂಪೆಯಾದಾಗ ಪತ್ರಿಕೆ ಪ್ರಮುಖವಾಗಿ ಸಮಸ್ಯೆಗಳ ಕುರಿತು ವರದಿ ಮಾಡಿ, ಸಮ್ಮಂದಿಸಿದ ಸರಕಾರೀ ಅಂಗಕ್ಕೆ  ಸಮಸ್ಯೆಗಳ ತೀವ್ರತೆಯ ಅರಿವುಂಟುಮಾಡಿದೆ . ಅದೇ ವಿಚಾರದ ಮುಂದುವರಿದ ಭಾಗವಾಗಿ ಬೆಂಗಳೂರಿನ ಎಲ್ಲಾ ವಿಭಾಗಗಳಲ್ಲಿ ನಾಗರಿಕ ಸಮಸ್ಯೆಯ ಕುರಿತು ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸಿ, ಜನರ ಸಮಸ್ಯೆಗಳನ್ನು ಅರಿಯುವದರ ಜೊತೆಗೆ , ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲಿ ಅಧಿಕಾರಿಗಳೊಂದಿಗೆ, ಸರಕಾರದೊಂದಿಗೆ follow -up action  plan   ರೂಪಿಸಿರುವದಾಗಿ ತಿಳಿಸಿದರು.




ನಾಗರಿಕರು ಒಬ್ಬೊಬ್ಬರಾಗಿ ದಿನನಿತ್ಯ ಸರಕಾರದ ವಿವಿಧ ಅಂಗಗಳಿಂದ ಅಂದರೆ  BBMP , BWSSB ,Police , revenue    ಮುಂತಾದ ವಿಭಾಗಗಳಿಂದ ಉಂಟಾಗುವ ಸಮಸ್ಯೆಗಳು , ಅಧಿಕಾರಿ - ನೌಕರ ವರ್ಗದ ಸಕಾರಾತ್ಮಕವಾಗಿ ಸ್ಪಂದಿಸದ ಧೋರಣೆಗಳು ಕುರಿತಾಗಿ ಎಳೆ ಎಳೆಯಾಗಿ ಬಿಡಿಸಿ ಮಾತನಾಡಿದರು. ಪಾದಚಾರಿಗಳ ಬಳಕೆಗೆ ಸಿಗದ  footpath  ಗಳು , ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಾಣದ ಪೋಲಿಸ್ ಪೇದೆಗಳು , ನಗೆ ಕೂಟದ ಸಮೀಪ ಬೇಕಾದ   ಶೌಚಾಲಯ, ಯಾವ ಮೇಲ್ವಿಚಾರಣೆಯಿಲ್ಲದ ಉದ್ಯಾನವನಗಳು, ಅರ್ಧಂಬರ್ಧ ಮುಗಿದು ಹಾಗೆಯೇ ನಿಂತು ಜನರಿಗೆ ತೊಂದರೆ ಕೊಡುತ್ತಿರುವ ಪಾಳುಬಿದ್ದಂತಿರುವ ಕಟ್ಟಡಗಳು, ಸ್ಥಳೀಯ ಜನಸಂಖ್ಯಾ ಬೆಳವಣಿಗೆಗಳಿಗೆ ಸ್ಪಂದಿಸದ BMTC, ಹೆಚ್ಚಿದ ಕಾರು ಸಂಖ್ಯೆಗನುಗುಣವಾಗಿ ಪಾರ್ಕಿಂಗ್ ಸ್ಥಳ ಲಭ್ಯವಿಲ್ಲದ ಕಾರಣ ರಸ್ತೆಯನ್ನೇ ಆಕ್ರಮಿಸಿರುವ ಮೋಟಾರ್ ಕಾರುಗಳು, ಶವ ಸಂಸ್ಕಾರಕ್ಕಾಗಿ ಲಭ್ಯಗೊಳ್ಳದ electric  crematorium , ಬೀದಿ ನಾಯಿಗಳ ಕಾಟ, ನಿಗದಿತ ಸ್ಥಳದಲ್ಲಿ ನಿಲ್ಲದ ಬಸ್ಸುಗಳು, ಕಸದ ಸಮಸ್ಯೆ, ಅಗಸರಿಗೆ ನೀರಿನ ಸಮಸ್ಯೆ, ಹದಿನೆಂಟರಿಂದ ಇಪ್ಪತ್ತೈದು  ವಯಸ್ಸಿನ ಹದಿಹರೆಯದ ಗಂಡು ಮಕ್ಕಳು ರಾತ್ರೆ ಹತ್ತರ ನಂತರ ಮಾಡುವ ಗಲಾಟೆಗಳಿಗೆ ಬ್ರೇಕ್ ಹಾಕಲು ಪೋಲಿಸ್ ವ್ಯವಸ್ಥೆ, ಸುಸಜ್ಜಿತವಾದ ವಾಚನಾಲಯ, ಕ್ರೀಡಾಂಗಣ , ತರಕಾರಿ ಮಾರುಕಟ್ಟೆ ,  ಅಧಾರ ಕಾರ್ಡ್ ವಿತರಣೆಗೆ ಸೂಕ್ತ ವ್ಯವಸ್ಥೆ, ಖಾಲಿ ಸೈಟ್ ಗಳಿಂದಾಗುವ ತೊಂದರೆಗಳು , ವೈಯಕ್ತಿಕವಾಗಿ ದ್ವೇಷ ಸಾಧಿಸಲು ರಾತ್ರೆ ಸಮಯ ಬಂದು ಮೀಟರ್ ಒಡೆದು ಹಾಕುವ ಮೀಟರ್ ರೀಡರ್ ತೊಂದರೆ , ಎರಡು   ಮೂರು ಜನ   ವಾಸಿಸುವ ಮನೆಗಳಿಗೆ ನೀಡಿದ ಹತ್ತು ಹದಿನೈದು ಸಾವಿರ ರೂಪಾಯಿಗಳ ನೀರಿನ ಬಿಲ್ಲುಗಳು , ಸಮಸ್ಯೆ ಪರಿಹರಿಸದ BWSSB , ಸೊಳ್ಳೆ ಸಮಸ್ಯೆಗಳು, ಸ್ಲಂ ಸಮಸ್ಯೆಗಳನ್ನು ಯಾರೊಬ್ಬರು ಕೇಳುತ್ತಿಲ್ಲ, ಗಮನವೀಯುವದಿಲ್ಲ ಎಂಬ ಪುಕಾರು, ಕುಡಿಯುವ ನೀರನ್ನು ಬಿಲ್ಡಿಂಗ್ ಕಟ್ಟುವವರಿಗೆ ಕೊಟ್ಟು ದುಡ್ಡು ಮಾಡುತ್ತಿರುವ watermen  ಗಳು , ಬಿಲ್ ಕಟ್ಟಲು ಬೇಕಾದ ಹೆಚ್ಚಿನ ಸಂಖ್ಯೆಯ   ಏಟಿಎಂ ಗಳು, ಅಂಗನವಾಡಿ , ಅಂಬೇಡ್ಕರ್ ಭವನಗಳ ಹೆಚ್ಚಿನ ಅವಶ್ಯಕತೆ,  ಬೆಳಗಿನ ಜಾವ ವಾಕಿಂಗ್ ಮಾಡುವವರ ಚೈನ್ ಹರಿಯುವವರನ್ನು ಮಟ್ಟ ಹಾಕಲು ಬೇಕಾದ  ಪೋಲಿಸ್ ವ್ಯವಸ್ಥೆ, ಮಧ್ಯ ಮಾರಾಟ ಅಂಗಡಿಗಳು ಹೆಚ್ಚಿ ಆರಂಭವಾಗಿರುವ ಸಮಸ್ಯೆಗಳು, BBMP  ಯಲ್ಲಿ  ಹೆಚ್ಚಿರುವ ಮಧ್ಯವರ್ತಿಗಳ ಕಾಟ, ಸರಕಾರೇತರ ಜನಗಳು ಮನೆ ಮನೆಗೆ ಬಂದು ಸರಕಾರದ ಹೆಸರು ಹೇಳಿ ವಸೂಲಿ ಮಾಡುತ್ತಿರುವ ಅನ್ಯಾಯದ ಧಂದೆ, ನಾಲ್ಕು ಮನೆಗಳಿಗೆ ನೀರು ಬರುತ್ತಿದೆ, ಐದನೇ ಮನೆಗೆ ನೀರು ಬರುವದಿಲ್ಲ , ಯಾಕ್ರೀ ಎಂದು ಸಹಜವಾಗಿ, ಮುಗ್ಧವಾಗಿ ಕಾರ್ಪೊರೇಟರ್ ಎದುರು  ನಿಂತು ಅರ್ಭಟಿಸುವ ಧೀರ ಮಹಿಳೆಯರ ಸಮಸ್ಯೆಗಳು, ಪೋಲಾಗುತ್ತಿರುವ ನೀರನ್ನು ನಿಲ್ಲಿಸಿದರೆ ಸಮಸ್ಯೆ ಪರಿಹಾರವಾಗುವದು ಎಂಬ ಸಲಹೆ ನೀಡಿ  ಬೆನ್ನು ತಟ್ಟಿಸಿಕೊಳ್ಳಬಯಸುವ   ನಾಗರಿಕರು,  ಫುಟ್ path  ಗುಂಡಿ ಮುಚ್ಚಿಲ್ಲ ಯಾಕೆ ಎಂದು ಪ್ರಶ್ನಿಸುವ ನಾಗರಿಕರು,  BBMP ಡಾಕ್ಟರ್ ಹೆಗಡೆ ಎಂದೂ ಫೋನಿಗೆ ಸಿಗುವದಿಲ್ಲ ಎಂಬ ಸಮಸ್ಯೆ, ಶ್ರೇಯಾ ಆಸ್ಪತ್ರೆ ಎದುರಿಗೆ ಎರಡು ವರ್ಷಗಳಿಂದ ರಾಶಿ ರಾಶಿ ಬಿದ್ದಿರುವ ಮರಳು, ಮಣ್ಣು , ಆಸ್ಪತ್ರೆಯ ಚರಟ ಉಂಟು ಮಾಡುವ ಸಮಸ್ಯೆಗಳು , Bulk  Waste  Disposal  problems  ,  BBMP  rain  water  harvesting ಎಂದು ಚರಂಡಿಗಳಲ್ಲಿ ಹೊಂಡ ಹೊಡೆದು ನಿಷ್ಪ್ರಯೋಜಕವಾಗಿರುವ ಕಾರ್ಯಗಳು, ಕಾರ್ಪೊರೇಟರ್ ಜನ ಸಾಮಾನ್ಯರಿಗೆ ಸಿಗಲು ಒಂದು ಸಾರ್ವಜನಿಕ ಕಾರ್ಯಾಲಯ ಬೇಕು ಎಂಬ ಬೇಡಿಕೆ, ಸಾರ್ವಜನಿಕ ಕಾರ್ಯಕ್ರಮಗಳಾದ ಅಣ್ಣಮ್ಮ ದೇವಿ ಉತ್ಸವ ಮುಂತಾದವುಗಳಲ್ಲಿ ಪೋಲುಮಾಡುವ ಸಾರ್ವಜನಿಕ ವಿದ್ಯುತ್ ಹಾಗು ನೀರು, ಒಹ್... , ಒಹ್ .... ಒಂದೇ ......  ಎರಡೇ ............ ಸಮಸ್ಯೆಗಳ ಸಾಲು ಸಾಲು ತೆರೆದುಕೊಂಡಿತು.      



ಸಾಲು ಸಾಲು ಸಮಸ್ಯೆಗಳನ್ನು ಕೇಳಿಸಿಕೊಳ್ಳುತ್ತ ಮಧ್ಯೆ ಮಧ್ಯೆ ಉಪಸಂಪಾದಕ ಕೋಣೆಮನೆಯವರು ಇದು ನಿರಂತರ ಕಾರ್ಯಕ್ರಮ , ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೂ ಬಿಡುವದಿಲ್ಲ ಎಂಬ ಆಶ್ವಾಸನೆ ನೀಡುತ್ತ, ಹೊಸ ಹೊಸ ಸಮಸ್ಯೆಗಳು ತೆರೆದುಕೊಂಡಾಗ ವಿಜಯವಾಣಿಯ newsblr@vijayavaani.in  ಗೆ ಪತ್ರ ಬರೆಯಿರಿ ಎಂದು ಜನಸಾಮಾನ್ಯರಲ್ಲಿ ಕನಸು ಬಿತ್ತಿದರು.




 ಎಲ್ಲ ಸಮಸ್ಯೆಗಳನ್ನು ಕೇಳಿಸಿಕೊಂಡ ಸ್ಥಳೀಯ ಕಾರ್ಪೊರೇಟರ್ ಆಂಜನಪ್ಪ ರವರು, ನಾನು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ, ಸರಕಾರೀ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ, BBMP ಮೀಟಿಂಗ್ ಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಜಾರಿಗೆ ಬರುತ್ತಿಲ್ಲ, ಆದರೂ  ಇವೆಲ್ಲ ಪರಿಸ್ಥಿತಿಗಳ ಮಧ್ಯೆಯೂ ಕ್ರೀಡಾಂಗಣ ಉಳಿಸಿಕೊಂಡು ಅಭಿವ್ರದ್ಧಿ ಮಾಡುತ್ತಿದ್ದೇವೆ, ಹೊಸಕೆರೆ ಹಳ್ಳಿ ಕೆರೆಯ ಸ್ವಚ್ಚತೆ ಕಾರ್ಯ ನಡೆಯುತ್ತಿದೆ , ತಮ್ಮೆಲ್ಲರ ಸಹಕಾರ ಬೇಕು ಎಂದು ಮಾತು ಮುಗಿಸಿದರು.




ಸಂಪಾದಕ ತಿಮ್ಮಪ್ಪ ಭಟ್ ರವರು ಪುನಃ ಮಾತನಾಡಿ , ನಾವೀಗ ಬದಲಾವಣೆಯ ಪರ್ವ ಕಾಲದಲ್ಲಿದ್ದೇವೆ, ನಾಗರಿಕ ಸಮಾಜವಾಗಿ ಬದುಕಲು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲೇಬೇಕು, ಈಗ ಈ ಸಮಸ್ಯೆಗಳನ್ನು ಪರಿಹರಿಸಿದರೆ ಮುಂದಿನ ಜನಾಂಗ ಸುವ್ಯವಸ್ಥಿತವಾಗಿ ಬದುಕಲು ಅನುವು ಮಾಡಿಕೊಟ್ಟಂತಾಗುತ್ತದೆ.  ಆ ದಿಶೆಯಲ್ಲಿ ಪತ್ರಿಕೋದ್ಯಮ, ವರದಿಗಳನ್ನು ಮಾಡುವ ಚಟುವಟಿಕೆಯೊಂದಿಗೆ , ಆಚೆ ತನ್ನನ್ನು ತೆರೆದುಕೊಂಡು ಅಭಿವ್ರದ್ಧಿಯ ಹರಿಕಾರನಾಗುವ ದಿಶೆಯಲ್ಲಿ ನಾವು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲಿದ್ದೇವೆ.  ತಾವೆಲ್ಲಾ ಸ್ಪಂದಿಸಿ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತನ್ನಿ, ನಾವು ಪರಿಹಾರ ಕಂಡುಕೊಳ್ಳಲು ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ತದನಂತರ ಏನಾಯಿತೆಂದು ವಿಚಾರಿಸುತ್ತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದೇ ತೀರುತ್ತೇವೆ ಎಂಬ ವಿಶ್ವಾಸವನ್ನಿತ್ತರು.




ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat .blogspot.com
February 16, 2013.

No comments:

Post a Comment