Tuesday, July 2, 2013

ಸಾಮಾಜಿಕ, ಸಾಮೂಹಿಕ ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.

ಸಾಮಾಜಿಕ, ಸಾಮೂಹಿಕ  ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.



ಈಗಿನ ಸಿನೆಮಾಗಳು , ಟಿ.ವಿ ಶೋಗಳು ಜನಪ್ರಿಯತೆಯನ್ನು ಪಡೆಯಲು, ಹೆಚ್ಚು ಹಣ ಗಳಿಸಲು ಆಯ್ದುಕೊಂಡಿರುವ ದಾರಿಯೆಂದರೆ ಯಾವುದಾದರೊಂದು ಕೊಂಟ್ರೊವರ್ಸಿಯನ್ನು ಹುಟ್ಟುಹಾಕುವದು. ಇದು ಜನಸಾಮಾನ್ಯರೆಲ್ಲ ಗಮನದಲ್ಲಿರುವ ಪ್ರಸ್ತುತ ಕಾಲಘಟ್ಟದ ಬೆಳವಣಿಗೆಯಾಗಿದೆ. ಹಿಂದೆಲ್ಲ ಜನಮಾನಸದಲ್ಲಿ ದೀರ್ಘಕಾಲ   ನೆಲೆನಿಲ್ಲುವಂತಹ ಸಿನೇಮಾ, ಟಿ.ವಿ ಶೋಗಳನ್ನು ತೆಗೆಯಲು ಹೆಚ್ಚಿನ ಮುತುವರ್ಜಿ   ನೀಡಲಾಗುತ್ತಿತ್ತು.  ಇಂದಿನ ವಿಶೇಶ ಪರಿಣಿತಿಯತ್ತ ಸಾಗಿರುವ ತಂತ್ರಜ್ಞಾನದ ದಿನಗಳು ಆ ರೀತಿ ಜನಮಾನಸದಲ್ಲಿ ದೀರ್ಘಾವಧಿಗೆ ನೆನಪುಗಳಾಗಿ ನಿಲ್ಲುವಂತಹ ರಂಜನೆಯ ಜೊತೆಗೆ ಸಮಾಜಕ್ಕೆ ದಾರಿದೀಪವಾಗಬಲ್ಲ ಕಾರ್ಯಕ್ರಮಗಳನ್ನು ನೀಡಲು ಪೂರಕವಾಗಿರಬೇಕಿತ್ತು. ಆದರೆ ಇಂದು ಅಯೋಗ್ಯರೆಲ್ಲ ಯೋಗ್ಯರ ಮುಸುಕುಧಾರಿಗಳಾಗಿ ಈ ಕಾಲಮಾನಕ್ಕೆ ವರವಾಗಿರುವ ತಂತ್ರಜ್ಞಾನವನ್ನು ಶಾಪವಾಗಿಸಿ, ಸಾಮಾಜಿಕ ಜೀವನ ಶೈಲಿ, ಸಾಮಾಜಿಕ ನಿತ್ಯಜೀವನ , ಮನುಷ್ಯನ ಜೀವಿತದ ಉದ್ದೇಶ ಇವುಗಳನ್ನೆಲ್ಲಾ ತಿರುಚಿ, ಬಿಚ್ಚು - ಕಚ್ಚು,  ಕುಣಿ - ಮಿಣಿ  ಇವುಗಳನ್ನೇ ಜೀವನ ಮೌಲ್ಯಗಳಾಗಿ ಬಿಂಬಿಸುತ್ತಾ ಹೊರಟಿರುವದು ಶೋಚನೀಯ.



ಈಗಷ್ಟೇ ಅವಿರತವಾಗಿ 2 ,160  ಗಂಟೆಗಳಷ್ಟು ಮನರಂಜನೀಯ ವಾಗಿ ನಡೆದ ರಿಯಾಲಿಟಿ ಶೋ ವೊಂದನ್ನು ಪರಾಮರ್ಶಿಸಿದರೆ ಗೋಚರಿಸುವ ಅಂಶಗಳೆಂದರೆ,  ಜೀವನದಲ್ಲಿ ತಮ್ಮ ಅಚಾತುರ್ಯದಿಂದ ಕೊಂಟ್ರೊವರ್ಸಿಗಳನ್ನು ಹರಡಿಕೊಂಡು ಆ ಕೊಂಟ್ರೊವರ್ಸಿಗಳ ಸಿಕ್ಕುಗಳಿಂದ ಹೊರಬರಲು ತಮ್ಮ ಇಮೇಜ್ ಬಿಲ್ಡಿಂಗ್ ಗಾಗಿ ಒದ್ದಾಡುತ್ತಿದ್ದವರಿಗೆ , ಮುಳುಗುವವನಿಗೆ ಆಸರೆಯಾಗಿ ಹುಲ್ಲುಕಡ್ಡಿ ಬಂದಾಗ ಅದನ್ನೇ ತಬ್ಬಿ ದಂತೆ ಈ ಬಡಾ ಬಾಸನ್ನು ಅಪ್ಪಿ , ಮನ ಬಿಚ್ಚಿ , ಹುಚ್ಚುಚ್ಚಾಗಿ ದಿನಗಳೆದಂತೆ ತಬ್ಬುವದೇ ಜೀವನ, ತಬ್ಬಿ ತಬ್ಬಿ ನೋಡುಗರ ಎದೆಬಡಿತ ಹೆಚ್ಚಿಸಿದಷ್ಟೂ , ತಮ್ಮ ಕೊಂಟ್ರೊವರ್ಸಿಗಳಿಂದ ಆಚೆ ಬಂದಂತನಿಸಿ  ನೆಮ್ಮದಿ ಪಡೆಯುವದರಲ್ಲೇ ಸಾರ್ಥ್ಯಕ್ಯ  ಕಂಡ  ಮನೆ ಸೇರಿದ, ಮನೆಯಾಚೆ ಬಂದ , ಇನಾಮು ಪಡೆದ, ಕಪ್ ಎತ್ತಿದ, ಕಪ್ಪಗಾಗಿ ಜೊಲ್ಲು ಸುರಿಸಿದ, ಸೋರಿದ ಜೊಲ್ಲನ್ನು ಮರೆಮಾಚಿ ತೋರಗೊಡದ ಕೊಂಟ್ರೊವರ್ಸಿಗಳಿಗೆ, ಹಿಂದಿನ ದಶಕಗಳಲ್ಲಿ ಮೆರೆದ ಆ ರಂಜನಾ ಜಗತ್ತಿನ ಮುದಿ   ಹುಲಿ ಗಳಿಗೆ ತಾವು - ತಮ್ಮ  ಕ್ರಿಯೆಗಳು ಸಾಮಾಜಿಕ ಜೀವನಕ್ಕೆ, ಯುವಜನಾಂಗಕ್ಕೆ ಎಂತಹ ಸಂದೇಶ ನೀಡುತ್ತಿದ್ದೇವೆ , ನೀಡುತ್ತಿವೆ  ಎಂಬ ಪರಿವೆಯೇ ಇಲ್ಲದಂತಿರುವದು ಖೇದನೀಯ.    



ಈ ರೀತಿ ರಂಜನೆಯ ಬದುಕಿನ ಪರಿಣಾಮವಾಗಿ ಅಮಾಯಕ , ಅನನುಭವಿ ಯುವ ಜೀವಗಳು ಜೀವನ ಸಾರ್ಥಕತೆ ಅಥವಾ ನಿತ್ಯ ಜೀವನ ಸಾಗಿಸಲು, ಪೂರ್ಣ ಬದುಕೊಂದನ್ನು ಕಂಡುಕೊಳ್ಳಲು ವ್ಯಯಿಸಬೇಕಾದ ಕಾಲಾವಕಾಶವನ್ನು ದೂರ ಮಾಡಿ , ಸಂಪೂರ್ಣವಾಗಿ ಬಿಚ್ಚು- ಕಚ್ಚು, ಕುಣಿ - ಮಿಣಿ ಜೀವನದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಅತ್ತ ಆ ರೀತಿ ಗುಂಪುಗಳಲ್ಲಿ ಯಶಸ್ಸನ್ನು ಕಾಣದೆ , ಇತ್ತ ಸಹಜ ಸಿದ್ಧ ಜೀವನ ಪದ್ದತಿಯಿಂದ ದೂರಾಗಿ ಯೌವನದಲ್ಲೇ ನಿರಾಶದಾಯಕರಾಗಿ ,  ತಮ್ಮ ಜೀವನವನ್ನೆ ನಿರಾಶೆಯಿಂದ ಕೊನೆಗೊಳಿಸುವ ಹಂತ ತಲುಪುತ್ತಿರುವದು ಎಲ್ಲೆಡ ವೇದ್ಯ ಸಂಗತಿಯಾಗಿದೆ.



ಈ ನಡುವೆ ಇನ್ನೊಂದು ವಿಷಾದನೀಯ  ವಿಷಯವೆಂದರೆ ಸಾತ್ವಿಕ ಸಮಾಜದಲ್ಲೂ ಈ ರೀತಿಯ ಮನರಂಜನೆಯತ್ತ ಆಕರ್ಷಿತರಾಗುತ್ತಿರುವವರ   ಸಂಖ್ಯೆ   ಗಣನೀಯವಾಗಿ ಹೆಚ್ಚುತ್ತಿದೆ. ಇಂದಿನ ಕಾಂಚಾಣದ ಕುಣಿತ, ಜನ ಸಮೂಹದಿಂದ ಸಿಗುವ ಜನಪ್ರಿಯತೆ  ಇವುಗಳತ್ತ ಆಕರ್ಷಿತರಾಗಿ, ತಮ್ಮ ಜೀವನ ಕಾಲದಲ್ಲಿ ಬಂದೊದಗಿರದ  ಆಸ್ತಿ - ಪಾಸ್ತಿ ,  ಜನಪ್ರಿಯತೆ ತಮ್ಮ ಮಕ್ಕಳ ಕಾಲದಲ್ಲಾದರೂ, ತಮ್ಮ ಮಕ್ಕಳಿಂದಲಾದರೂ ತಮಗೆ ಬರಲಿ ಎಂಬ ಸ್ವಾರ್ಥದಿಂದ , ಅನಾನುಕೂಲದಲ್ಲೇ ಅನುಕೂಲ ಕಲ್ಪಿಸಿ , ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ - ಜುಟ್ಟಿಗೆ ಮಲ್ಲಿಗೆ ಎಂಬಂತೆ , ಮಕ್ಕಳನ್ನು ಆಧುನಿಕ ಶಾಲೆಗಳಿಗೆ ಕಳಿಸಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತ,  ಅತ್ತ ಪಾಶ್ಚಿಮಾತ್ಯರಾಗುವ ಧೈರ್ಯ - ಸ್ಥೈರ್ಯವಿಲ್ಲದೆ, ಇತ್ತ ಪೌರಾತ್ಯ ಸಂಸ್ಕಾರಗಳನ್ನು ಆಡಂಬರಾತ್ಮಕವಾಗಿ ಅನುಸರಿಸುತ್ತ , ಬಿ.ಪಿ - ಶುಗರ್ - ಹಾರ್ಟ್ ಅಟೆಕ್     ಗಳೆಂಬ ರಾಕ್ಷಸರ ಕಾಟವನ್ನು ತಾಳಲಾಗದೆ , ಅಯ್ಯೋ ಜೀವನವೇ ......... ಎಂದು ದಿನ ದೂಡುವವರೊಂದೆಡೆಯಾದರೆ, ತಮ್ಮ ಯೋಚನಾ ಶಕ್ತಿಯನ್ನೇ ಕಳೆದುಕೊಂಡು ಜೀವನಕ್ಕೇ ಅಂತ್ಯ ತಂದೊಡ್ಡಿಕೊಳ್ಳುವ ಮಂದಿ ಇನ್ನೊಂದೆಡೆ ಕಾಣಬರುತ್ತಾರೆ.

                                                *********************