Sunday, March 31, 2013

ಬ ಲ ಸುರೇಶ - " ಕಾದ್ಗೆ ಪಂಚಾತ್ಗೆ "


ಬ ಲ ಸುರೇಶ ರವರ ದಿಗ್ದರ್ಶನದಲ್ಲಿ ಸಂಪನ್ನಗೊಂಡ ಹವ್ಯಕ ಭಾಷೆಯಲ್ಲಿ ವಿರಚಿತ ನಾಟಕ " ಕಾದ್ಗೆ ಪಂಚಾತ್ಗೆ "  ನೋಡಿದೆ.



ಬ ಲ ಸುರೇಶ ಬಹು ಸರಳ ಜೀವಿಗಳು , ಪರಿಚಯವಿರಲಿ ಇಲ್ಲದಿರಲಿ ಎದುರಿಗೆ ಬಂದವರನ್ನೆಲ್ಲಾ ಮುಗುಳ್ನಗೆಯಿಂದ ಆಕರ್ಷಿಸುವವರು. ಧಾರಾವಾಹಿಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ,ಬಹುಜನಪ್ರಿಯರು.



ಇನ್ನೊಂದು  ದೃಷ್ಟಿಕೋನದಿಂದ  ನೋಡಿದಾಗ ಧಾರಾವಾಹಿ ನಿರ್ದೇಶಕರೊಬ್ಬರು ಇಷ್ಟೊಂದು   ಜನಪ್ರಿಯತೆ ಸಾಧಿಸುತ್ತಿದ್ದಾರೆಂದರೆ ನಮ್ಮ ಸಮಾಜದಲ್ಲಿ ಬಿಡುವಿನ ವೇಳೆಯನ್ನು ಹೊಂದಿದ , ಧಾರಾವಾಹಿಗಳನ್ನು ವೀಕ್ಷಿಸಲು ಸಮಯ ಹೊಂದಾಣಿಕೆಮಾಡಿಕೊಳ್ಳಬಲ್ಲ ಅಂದರೆ ಕೆಲಸ ಕಡಿಮೆ  ಮತ್ತು  ಧಾರವಾಹಿ ವೀಕ್ಷಣೆಯಲ್ಲಿ  ಜಾಸ್ತಿ ತೊಡಗಿಕೊಳ್ಳುವ ಸಂಖ್ಯಾಬಲ  ಇದೆ ಎಂದಾಯಿತು.   ಇದು ವಿಷಾದನೀಯ ವಿಷಯ ಯಾಕೆಂದರೆ ಇಂದು ನಗರಗಳಲ್ಲಿ ಮನೆಯ ಪ್ರೌಢರೆಲ್ಲರೂ  ಆದಾಯ ತರುವ ದುಡಿಮೆಯಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇದೆ.  ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಸಾಕಷ್ಟು ದುಡಿದು ಸೇರಿಸಿಟ್ಟುಕೊಂಡವರಿಗೆ   ಈ ಮಾತು ಅನ್ವಯ ವಾಗದಿದ್ದರೂ , ಈ ದಿನಗಳಲ್ಲಿ ಬೆಂಗಳೂರಿನಂತಹ ಶಹರಗಳಲ್ಲಿ ಸತಿಪತಿಗಳಿಬ್ಬರೂ ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.  ಈ ಅನಿವಾರ್ಯತೆಗೆ ಹೊಂದಿಕೊಳ್ಳಲಾಗದ ಕುಟುಂಬಗಳ  ಸಾಮರಸ್ಯ  ಜೀವನಕ್ಕೆ ತೊಡಕಾಗುವ ಈ ಕಾಲದ ಈ ಸಂದರ್ಭದಲ್ಲಿ  ಬ ಲ ಸುರೇಶರಂತೆ ಧಾರಾವಾಹಿ   ನಿರ್ದೇಶಕರುಗಳು , ಯಶಸ್ವಿಯಾಗುತ್ತಿರುವದು ವೈಯಕ್ತಿಕ ಶ್ರೇಯೋಭಿವೃದ್ಧಿಯಾದರೂ , ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಹಾನಿಕರ ಎಂಬ  ಅಭಿಪ್ರಾಯ ಚಿಂತನೀಯ ವಿಷಯ.




ಈ ಪ್ರದರ್ಶನ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಲ್ಲಲೂ ಸ್ಥಳವಿರದಷ್ಟು ಸಂಖ್ಯೆಯಲ್ಲಿ ಸೇರಿದ ಜನಸಮೂಹ, ಎಲ್ಲರೂ ಮುಕ್ಕಾಲು ಭಾಗ ನಾಟಕವನ್ನು ನೋಡಿ ಆನಂದಿಸಿದ್ದು, ಆಗಾಗ ಸುರಿಯುತ್ತಿದ್ದ ಮಳೆ ಅಂದರೆ ಚಪ್ಪಾಳೆಗಳ ಮಳೆ , ಹೆಚ್ಚಿನ ಎಲ್ಲ ಪಾತ್ರಧಾರಿಗಳ ಪ್ರೌಢ , ಸಹಜ ಅಭಿನಯ , ಸೂಕ್ತ ರಂಗ ಸಜ್ಜಿಕೆ , ಹವ್ಯಕರ ವಸತಿ ಪ್ರದೇಶಗಳಲ್ಲಿರುವ ವಿಭಿನ್ನ ಮಾತಿನ ಶೈಲಿಗಳು, ಆಚಾರ - ವಿಚಾರಗಳು , ೧೯೭೦ ರ ದಶಕದಿಂದ ಈ ವರೆಗೆ ಹವ್ಯಕರ ನೆಲೆಗಳಲ್ಲಿ ಬಂದಿರುವ ಬದಲಾವಣೆಗಳು, ಹವ್ಯಕ ಮನೋಧರ್ಮದಲ್ಲಿ ಕಂಡುಬರುವ ವಿಕಾರಗಳು .......... ಇತ್ಯಾದಿ ವಿಷಯಗಳಲ್ಲಿರುವ  ನೇತ್ಯಾತ್ಮಕ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ಪ್ರಸ್ತುತಪಡಿಸಿದ ನಾಟಕ , ಎಲ್ಲರಿಗೂ ಕ್ಷಣಮಾತ್ರದ ಮನೋರಂಜನಾ ವಸ್ತುವಾಯಿತೆಂಬುದರಲ್ಲಿ ಎರಡು ಮಾತಿಲ್ಲ.




ಅಂದಿನಿಂದ ಇಂದಿನವರೆಗೆ ತೋರಿಬಂದ ಬದಲಾವಣೆಗಳನ್ನು , ಅದರಲ್ಲೂ ವಿಬಿನ್ನ ಭೌಗೋಳಿಕ ಸನ್ನಿವೇಶಗಳು, ಜೀವನದ ಅನಿವಾರ್ಯತೆಗಳು, ವಿಭಿನ್ನ ಭಾಷಾ ಬಳಕೆಗಳು , ತೋರಿಬಂದ - ತೋರಿಬರುತ್ತಿರುವ ಸಾಂಪ್ರದಾಯಿಕ ಬದಲಾವಣೆಗಳು ಇವನ್ನೆಲ್ಲ ನಿಶ್ಚಿತ ಅವಧಿಯಲ್ಲಿ ರಂಗದ ಮೇಲೆ ತರುವದು ಸುಲಭದ ಮಾತಲ್ಲ. ಇವನ್ನೆಲ್ಲ ಒಳಗೊಂಡ ಈ ಪ್ರಯೋಗ ಯಶಸ್ವಿಯಾಗಲು , ವಿಭಿನ್ನ ಪ್ರಾದೇಶಿಕತೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ ಬ ಲ ಸುರೇಶರ ಜೊತೆಗಿರುವ  ಮಿತ್ರರ ಪಾತ್ರ ಬಹು ಶ್ಲಾಘನೀಯ.    ಆದರೆ ಈ ನಾಟಕ ಪ್ರಯೋಗದ ಅವಧಿಯಲ್ಲೆಲ್ಲೂ ಆ ಗೆಳೆಯರನ್ನು , ಗೆಳೆಯರ ಶ್ರಮವನ್ನು ಸ್ಮರಿಸಿದಂತೆ   ತೋರಿಬಂದಿಲ್ಲ.  ಏಕೆಂದರೆ ಒಂದು ಪ್ರಾದೇಶಿಕ ಹಿನ್ನೆಲೆಯಿಂದ ಬಂದು, ಯಾವುದೇ ಪ್ರಮಾಣದಲ್ಲಿ ಜನ ಮಾನಸದಲ್ಲಿ ಬೆರೆತರೂ, ಉದ್ಯೋಗದಲ್ಲಿ ಯಶಸ್ವಿಯಾದರೂ, ಜನಪ್ರಿಯರಾದರೂ , ಕೊರತೆಯೇ ಕಾಣದಂತೆ ವ್ಯಕ್ತಿಯೊಬ್ಬ ಹಲವು ಪ್ರಾದೇಶಿಕ ಜನಜೀವನದ ೧೯೭೦ ರ ದಶಕದಿಂದ ಈ ವರೆಗಿನ ಭಾಷಾ ಬಿನ್ನತೆ, ಅಂದಿನಿಂದ ಇಂದಿನ ವರೆಗಿನ ಭಾಷಾ ಪ್ರಯೋಗಗಳು ಇವನ್ನೆಲ್ಲ ದೋಷರಹಿತವಾಗಿ ಡೈಲಾಗ್ ಬರೆಯುವದೆಂದರೆ ನಂಬಲಸಾದ್ಯ. ಅದಕ್ಕೇ ಹೇಳಿದ್ದು ಈ ಯಶಸ್ಸಿನ ಹಿಂದೆ ಪ್ರತಿ ಭೌಗೋಳಿಕ ಹಿನ್ನೆಲೆಯಿಂದ ಬಂದ ಗೆಳೆಯರ ಶ್ರಮ ಇರಲೇಬೇಕು, ಹಾಗಾಗಿ ಬ ಲ ಸುರೇಶರ ಈ ಪ್ರಯೋಗದ ಯಶಸ್ಸಿನಲ್ಲಿ ಇರುವ ಆ ಮಿತ್ರರ ಶ್ರಮವೂ ಗುರುತಿಸಬೇಕಾದದ್ದೇ.




ಜನಮಾನಸದಲ್ಲಿ ಅಚ್ಚೊತ್ತಿರುವ ಕಲಾಪ್ರಕಾರಗಳಲ್ಲಿ ನಾಟಕವೂ ಒಂದು. ಯಾವುದೇ ಕಲಾಪ್ರಕಾರಗಳ ಉದ್ದೇಶ ಕೇವಲ ಮನರಂಜನೆಯೊಂದೇ ಅಲ್ಲ. ಅನೂಚಾನಾಗಿ ಇಪ್ಪತ್ತನೇ ಶತಮಾನದ ಮಧ್ಯದ ಅವಧಿಯವರೆಗೂ ಮನರಂಜನೆಯ ಜೊತೆ ಜೊತೆಗೆ ಸಮಾಜ ಸುಧಾರಣೆ, ವ್ಯಕ್ತಿಯ ವ್ಯಕ್ತಿತ್ವ ಸುಧಾರಣೆ ... ಇತ್ಯಾದಿ ಧನಾತ್ಮಕ ಅಂಶಗಳಿಗೆ ನಾಟಕಗಳೂ, ಇತರೆ ಕಲಾ ಮಾಧ್ಯಮಗಳೂ   ಒತ್ತು ನೀಡಿ ಸಮಾಜದ , ವ್ಯಕ್ತಿಯ ಔನ್ಯತ್ಯಕ್ಕೆ ಪೂರಕವಾಗಿದ್ದವು.  ಇತ್ತೀಚಿನ  ದಶಮಾನಗಳಲ್ಲಿ ಸಿನೇಮಾ, ಟೀ.ವಿ ಧಾರಾವಾಹಿಗಳು ಕಲಾಪ್ರಕಾರಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಸಮಾಜವನ್ನು, ವ್ಯಕ್ತಿಯ ವ್ಯಕ್ತಿತ್ವವನ್ನು  , ಸಾಮಾಜಿಕ ಅಭಿರುಚಿಯನ್ನು ಅಧೋಗತಿಗೆ ಕೊಂಡೊಯ್ಯುತ್ತಿವೆ. ಊಟಕ್ಕಿರಬೇಕಾದ ಉಪ್ಪಿನಕಾಯಿ ಬಾಳೆಯನ್ನೆಲ್ಲಾ ಆವರಿಸಿಕೊಂಡು , ಊಟದ ಸವಿಯನ್ನೇ ಹಾಳುಗೆಡವುವಂದದಿ , ಇಂದು ಈ ಧಾರಾವಾಹಿಗಳು , ಅವುಗಳ ಅಣ್ಣ ತಮ್ಮದಿರು -  ಅಕ್ಕ ತಂಗಿಯರಂತಿರುವ ಇತರೆ ಕಲಾಪ್ರಕಾರಗಳು ನೇತ್ಯಾತ್ಮಕ ಅಂಶಗಳನ್ನೇ ಬಂಡವಾಳವನ್ನಾಗಿಸಿ   ಸಾಗುತ್ತಿರುವ ಸ್ಥಿತಿ ಅತಿ ಶೋಚನೀಯ.



ಬ  ಲ  ಸುರೇಶ  ರಂತಹ   ಹವ್ಯಕ ಸಮಾಜದ ಯಶಸ್ವಿ ವ್ಯಕ್ತಿಗಳು ಸಮಾಜದ ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ.  ಸ್ವ ಶ್ರಮದಿಂದಲೂ , ಆ ಪರಮಾತ್ಮನ ಅನುಗ್ರಹದಿಂದಲೂ ಆರ್ಥಿಕವಾಗಿ ಬಲಾಡ್ಯರಾದ ಮತ್ತು ಸಮಾಜದ ವಿವಿಧ ಹುದ್ದೆಗಳಲ್ಲಿ ವಿರಾಜಮಾನರಾದ ಹವ್ಯಕ ಮುಕುಟಮಣಿಗಳು ಇಂದಿನ ಅತಿ ಅವಶ್ಯಕತೆಗಳಾದ , ಹವ್ಯಕ ಯುವಜನಾಂಗ ಅಂದರೆ ಹನ್ನೆರಡರಿಂದ ಇಪ್ಪತ್ತೈದು ವಯಸ್ಸಿನ ಯುವಕ ಯುವತಿಯರು , ನಮ್ಮ ಹವ್ಯಕರ ಮೂಲ ಸಂಸ್ಕೃತಿಯಾದ ವೇದ ಪಾರಾಯಣ ಇತ್ಯಾದಿ ಅಭ್ಯಸಿಸುತ್ತಾ ಇಂದಿನ ಸಾರ್ವಜನಿಕ ಶಿಕ್ಷಣವನ್ನು ಕಲಿಯುತ್ತ ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಲು ಸಹಾಯವಾಗಬಲ್ಲ, ಎರಡರಿಂದ ಐದು ಸಾವಿರ ಯುವಕ ಯುವತಿಯರು ಉಚಿತವಾಗಿ ವಾಸ್ತವ್ಯ ಹೊಂದಿ (hostel), ಸೂಕ್ತ ಶಿಕ್ಷಣ ಪಡೆದು  ಅಧುನಿಕ ಪ್ರಪಂಚಕ್ಕೆ ತೆರೆದುಕೊಳ್ಳುವ ಅವಕಾಶಕ್ಕೆ ಅನುಕೂಲವಾಗುವಂತಹ , ಸಾರ್ವಕಾಲಿಕವಾಗಿಯೂ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳುವಂತಹ  Free  Hotsel   , Free Education  ನಂತಹ ಸಾಮಾಜಿಕ ವ್ಯವಸ್ಥೆಯ ಆಸ್ತಿ ನಿರ್ಮಿಸಲು   ಅನುವುಗೊಳ್ಳಬೇಕು.  ಅಲ್ಲಲ್ಲಿ ತೋರಿ ಬರುವ ಅನುಕಂಪ ( lip  sympathy  ) , paid  hotsel  ಮುಂತಾದ ವ್ಯವಸ್ಥೆಗಳು ಉಳ್ಳವರಿಗಷ್ಟೇ ಅನುಕೂಲ ವಿನಃ, ಅರ್ಥಿಕ ಸಂಕಷ್ಟದಲ್ಲಿರುವ , ಬಹುದೂರ ಹಳ್ಳಿಗಳಲ್ಲಿರುವ ಹವ್ಯಕ ಬಾಂಧವರಿಗಲ್ಲ.  ಬಹುಪಾಲು ಹಳ್ಳಿಗಳಲ್ಲಿ  ಹತ್ತು ಗುಂಟೆ - ಮೂವತ್ತು ಗುಂಟೆ ಜಮೀನಿರುವ ಹವ್ಯಕ ಬಾಂಧವರು , ಶಹರಗಳಲ್ಲಿದ್ದು ದಿನ  ನಿತ್ಯದ ಕನಿಷ್ಟ ಅವಶ್ಯಕತೆಗಳನ್ನು ಪೂರೈಸಿ ಬದುಕಲು ಶ್ರಮಿಸುತ್ತಿರುವ ಹವ್ಯಕ ಬಾಂಧವರು .......... ಇವರಿಗೆಲ್ಲ ಅನುಕೂಲವಾಗಬಲ್ಲ ವ್ಯವಸ್ಥೆಯ ನಿರ್ಮಾಣಕ್ಕೆ ಬ ಲ ಸುರೇಶರಂತಹ   ಯಶಸ್ವಿ ವ್ಯಕ್ತಿಗಳು ಮನಸ್ಸು ಮಾಡಬೇಕು, ಮುಂದಾಳತ್ವ ಪಡೆಯಬೇಕು, ಇದು ಇಂದಿನ ಅತಿ ಅವಶ್ಯಕತೆಗಳಲ್ಲೊಂದಾಗಿದೆ.




ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 31, 2013.

Saturday, March 30, 2013

ಮಲ್ಲೇಶ್ವರದ ಹವ್ಯಕ ಮಹಾಸಭೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿರಾಜಮಾನನಾಗಿರುವ, ಸರ್ವ ಜನರ ಸಂಕಷ್ಟ ಪರಿಹರಿಸುವ ಶ್ರೀ ಸಿದ್ಧಿವಿನಾಯಕನ ಪ್ರತಿಷ್ಟಾಪನೆಯ ವಾರ್ಷಿಕೋತ್ಸವ


ಇಂದು (30 .03 .2013  ) ಮಲ್ಲೇಶ್ವರದ ಹವ್ಯಕ ಮಹಾಸಭೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ   ವಿರಾಜಮಾನನಾಗಿರುವ, ಸರ್ವ ಜನರ ಸಂಕಷ್ಟ ಪರಿಹರಿಸುವ ಶ್ರೀ ಸಿದ್ಧಿವಿನಾಯಕನ ಪ್ರತಿಷ್ಟಾಪನೆಯ ವಾರ್ಷಿಕೋತ್ಸವ.  ನಿಮಗೆಲ್ಲಾ ತಿಳಿದಿರುವ ವಿಚಾರ.





ನಿಮಗೆ ನನ್ನದೊಂದು ನೇರ ಪ್ರಶ್ನೆ. ಹವ್ಯಕ ಮಹಾಸಭೆಯ ಮುಖ ಪತ್ರಿಕೆಯಲ್ಲಿ ಸಾಕಷ್ಟು ಮುಂಚಿತವಾಗಿ ಪ್ರಕಟನೆ ಕೊಟ್ಟು , ಸರ್ವರೂ ಬರಬೇಕೆಂದು ಮಹಾಸಭೆಯ ಪದಾಧಿಕಾರಿಗಳೆಲ್ಲ  ನಿಮ್ಮನ್ನು ಆತ್ಮೀಯವಾಗಿ ಕರೆದಾಗ ಬೆಂಗಳೂರು ಹವ್ಯಕ ಬಾಂಧವರಿಗೆ , ಬರಲಾರದಂತಹ ಮಹತ್ಕಾರ್ಯಗಳೇನಿದ್ದೀತು   ಎಂಬ ವಿಚಾರ ಹೊಳೆದು ಹೋಯಿತು. ಹವ್ಯಕ ಬಾಂಧವರ್ಯಾರೂ ಬರಲಿಲ್ಲ ಎಂದಲ್ಲ , ಬಂದಿದ್ದ ಎರಡು ನೂರು - ಮೂರು ನೂರು ಹವ್ಯಕರಿಗೇ ಸಮಾಜದ ಕಾರ್ಯಕ್ರಮಗಳು ಸೀಮಿತವಾಗಿರಬೇಕೆ?  ಪ್ರತಿಯೊಬ್ಬರಿಗೂ ಅವರದೇ ಆದ ದಿನದ ಚಟುವಟಿಕೆಗಳಿರುವದು ಸಾಮಾನ್ಯ.  ಕೆಲಸಕ್ಕೆ ಹೋಗುವವರು ರಜಾ ಹಾಕಬೇಕಾದೀತು, ಅಂಗಡಿ ಇಟ್ಟಿರುವವರು ಸ್ವಲ್ಪ ಮೊದಲು ಅಂಗಡಿ ಮುಚ್ಚಬೇಕಾದೀತು ಇಲ್ಲ ಇನ್ನೊಬ್ಬರಿಗೆ ಸ್ವಲ್ಪ ಜವಾಬ್ದಾರಿ ನೀಡಿ ಬರಬೇಕಾದೀತು , ವಕೀಲರಾದರೆ ಕೇಸಿಗೆ ವಾಯಿದೆ ಕೇಳಬೇಕಾದೀತು , ಹೀಗೆ ಹತ್ತು ಹಲವಾರು ಪ್ರಸಂಗಗಳಿದ್ದೀತು. ಆದರೆ ಪ್ರತಿಯೊಬ್ಬರೂ ಅನಿವಾರ್ಯವಾಗಿ ಬರಲೇಬೇಕಾದ ಕಾರ್ಯಕ್ರಮವಲ್ಲವೇ?




ವರ್ತಮಾನದಲ್ಲಿ ಕಿರೀಟವಿಲ್ಲದವರು ಬರುತ್ತಿಲ್ಲವೆಂಬುದು ಅರ್ಧ ಸತ್ಯವೇ ವಿನಃ ಪೂರ್ಣಸತ್ಯವಲ್ಲ. ಕಿರೀಟ ಹೊತ್ತವರು ಕುಣಿಯುವದನ್ನು, ಕಿರೀಟ ಕಳಚಿಟ್ಟವರು ಬರುತ್ತಿಲ್ಲಎಂಬ ಮಾತನ್ನು  ನಾವು ಮನೆಯಲ್ಲಿ ಕುಳಿತು ಚಿಂತನೆಗೆ ಹಚ್ಚಿದರೆ ಸಮಾಜ ಸುಧಾರಿಸೀತೆ?  ಕಿರೀಟ ಕಟ್ಟಿರುವವರನ್ನು, ಕಿರೀಟ ಕಳಚಿಟ್ಟವರನ್ನು ಪ್ರಶ್ನಿಸಿ ಕುಣಿಸಬೇಕಾದವರು ಸಾಮಾನ್ಯ ಸದಸ್ಯರಲ್ಲವೇ?  ಸಾಮಾನ್ಯ ಸದಸ್ಯರಾದ ನಾವೇ ತಟಸ್ಥರಾದರೆ, ಕುಣಿಯುವವರನ್ನು ಹಾಗಲ್ಲ ಹೀಗೆ ಎಂದು ತಿದ್ದಿ ತೀಡಿ ಮುನ್ನಡೆಸಬೇಕಾದ   ನಾವು- ನೀವು ಅಂದರೆ ಸಾಮಾನ್ಯ ಸದಸ್ಯರು ಹೆಚ್ಚು ಹೆಚ್ಚು ಭಾಗವಹಿಸುವಿಕೆ ತೋರಬೇಕಲ್ಲವೇ? ನಾವೇ ಸಮಾಜ, ನಮಗೇ ಸಮಾಜ. ಅಷ್ಟೇ ಅಲ್ಲ ಇಂದು ಎಲ್ಲ ಸಮಾಜದವರು ಸಂಘಟಿತರಾಗಿ ಹೋರಾಡಿ ಹಕ್ಕು ಪಡೆಯುವದು ಸಾಮಾನ್ಯವಾಗಿರುವಾಗ, ನಾವಿಂದು ಸಂಘಟಿತರಾಗಿ ಸುಸಮ್ರದ್ಧ ಸಮಾಜವೊಂದನ್ನು ನಮ್ಮ ಮುಂದಿನ ಜನಾಂಗಕ್ಕೆ ನೀಡುವ ಅವಶ್ಯಕತೆ ಇದೆಯಲ್ಲವೇ?  




ಇಂದು ನಿನ್ನೆಯಂತಿಲ್ಲ, ನಾಳೆ ಇಂದಿನಂತಿರುವದಿಲ್ಲ.  ಬದಲಾವಣೆ ಜಗದ ನಿಯಮ. ಬದಲಾವಣೆ ಯಾರನ್ನೂ ಹೇಳಿ ಕೇಳಿ ಬರುವದಿಲ್ಲ. ಆದರೆ ಬರುವ ಬದಲಾವಣೆಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಿ ಎಂದಲ್ಲವೇ ಮನುಷ್ಯನ ಮಸ್ತಿಷ್ಕದಲ್ಲಿ ಮಿದುಳಿರುವದು?  ಹವ್ಯಕ ಪಿಂಡಗಳು ಈ ಶತಮಾನದ ಬಿರುಗಾಳಿಗಳನ್ನೆಲ್ಲ ಮೆಟ್ಟಿ ನಿಂತು ಇಂದು ಬದುಕುತ್ತಿವೆ. ಆದರೆ ಬರಲಿರುವ ಬಿರುಗಾಳಿಯ ಸೂಚನೆಯಾದ ಇಂದಿನ ಕುಳಿರ್ಗಾಳಿ   ಹೇಗಿದೆಯೆಂದರೆ ರಾಜಕಾರಣಿಗಳೆಲ್ಲ ಸಮಾಜವನ್ನು ಜಾತೀಯತೆಯ ವಿಷಬೀಜದಿಂದ ಚ್ಚಿದ್ರ ಚ್ಚಿದ್ರ ಮಾಡಿ , ಕೊಚ್ಚಿ ಕಡಿ ಸಂಸ್ಕ್ರತಿಯನ್ನು ಭಾರತೀಯ ಸಮಾಜದಲ್ಲಿ ಹರಡುತ್ತಿದ್ದಾರೆ. ಇದೇ ಬೆಳವಣಿಗೆಗಳು ಮುಂದೊಂದು ದಿನ ಮನುಷ್ಯ ಮನುಷ್ಯನನ್ನು ಅಟ್ಟಾಡಿಸಿ ಕೊಲ್ಲುವ ಬದಲಾವಣೆಗಳಿಗೆ ನೂಕೀತು.  ನಮ್ಮ ಸಮಾಜ ಸಂಘಟಿತವಾಗಿಲ್ಲದಿದ್ದರೆ ಆಗ ನಮ್ಮ ಮುಂದಿನ ಮರಿಗಳು ಹೇಗೆ ಬದುಕಿಯಾವು? ಮುನ್ನೆಚ್ಚರಿಕೆಯಾಗಿ ಈಗಲೇ ನಮ್ಮ  ಸಮಾಜವನ್ನು ಸಂಘಟಿಸಬೇಕಲ್ಲವೇ? ಈ ಜವಾಬ್ದಾರಿ ಪ್ರತಿಯೊಬ್ಬ ಸಾಮಾನ್ಯ ಸದಸ್ಯನ ಮೇಲೂ ಇದೆಯಲ್ಲವೇ? ಅದಕ್ಕಾಗಿಯೇ ಕೇಳಿದ್ದು, ನೇರ ಪ್ರಶ್ನೆ , ಇಂದು ನೀವ್ಯಾಕೆ ಬರಲಿಲ್ಲ ?




ನೋಡಿ ಇಂದು ಏನಾಗುತ್ತಿದೆ ? ಒಂದು ಉದಾಹರಣೆಯೊಂದಿಗೆ ಹೇಳುವದಾದರೆ ಕೆಲವು ಚುರುಕು ನಡೆಯ ಮಹಿಳೆಯರು ಸೇರಿ ಒಂದು ವರುಷದಿಂದ ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ಮಹಿಳೆಯರಿಗೆ ಅನುಕೂಲಕರವಾದ , ಮನಸ್ಸಿಗೆ ಮುದ ನೀಡುವಂತಹ ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮ ಸಂಘಟನೆಯಿಂದ ಹೇಳುವದಾದರೆ ಯಶಸ್ವಿಯಾಗಿದ್ದಾರೆ. ಪತ್ರಿಕೆಯಲ್ಲಿ ವರದಿ ಬಂದಿದೆ. ಆದರೆ ಕಾರ್ಯಕ್ರಮಕ್ಕೆ ಬಂದು ಕೈ ತಟ್ಟಿ ಪ್ರೋತ್ಸಾಹಿಸಿ ಪ್ರಯೋಜನ ಪಡೆಯಬೇಕಾದ ನೀವೆಷ್ಟು ಸಹಕರಿಸಿದ್ದೀರಿ? ಯೋಚಿಸಬೇಕಲ್ಲವೇ? ಯಾವುದೋ ಒಂದು ಸ್ತ್ರೀ ಪ್ರಸೂತಿ ತಜ್ಞೆ ವೈದ್ಯೆ ಬಂದು , ಪ್ರಸೂತಿಯ ಸಮಯದಲ್ಲಿ ಅರಿಯಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕುರಿತು ತಿಳಿಹೇಳಿದರೆ , ಪ್ರಯೋಜನ ಕಿರೀಟ ಕಟ್ಟಿದವರಿಗಷ್ಟೇನಾ? ಪ್ರತಿಯೊಬ್ಬ ಸಾಮಾನ್ಯ ಸದಸ್ಯರೂ ಪ್ರಯೋಜನ ಪಡೆಯಲಿ ಎಂದು ತಾನೇ ಈ ರೀತಿ  ಕಾರ್ಯಕ್ರಮಗಳನ್ನು ಆಯೋಜಿಸುವದು? ಅಜ್ಜಿಯಿರಲಿ, ಅತ್ತೆಯಿರಲಿ , ಕುಮಾರಿಯಿರಲಿ , ಸೋಮಾರಿಯಿರಲಿ ತಿಳಿದ ಜ್ಞಾನ ಅನುಕೂಲಕ್ಕೆ ಬಂದೀತಲ್ಲವೆ?  ವಿಷಾದದ ಸಂಗತಿಯೆಂದರೆ ಈ ಯಶಸ್ವಿ ಕಾರ್ಯಕ್ರಮ ಸಾಮಾನ್ಯ ಸದಸ್ಯರ ಭಾಗವಹಿಸುವಿಕೆಯ ಕೊರತೆಯಿಂದ , ಮುಂದಿನ ಒಂದೇ ಒಂದು ಕಾರ್ಯಕ್ರಮದೊಂದಿಗೆ ಮುಕ್ತಾಯ ಕಾಣುತ್ತಿದೆ. ಈ ವಿಷಯ ಗೀತಕ್ಕ ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದುದನ್ನು   ಕೇಳಿಸಿಕೊಂಡಾಗ ವಿಷಾದವೆನಿಸಿತು .




ಇಂದು ಮಹಾಸಭೆಯಲ್ಲಿ ಮಿತ್ರರೊಬ್ಬರು ನನಗೆ ನೇರವಾಗಿ  ಜನ ಬಪ್ಪಾಗೆ / ಬಪ್ಪ ಹಾಂಗೆ   ಮಾಡ್ರೋ , ಹರಿಹರ ಭಟ್ರೇ , ಹಾಗೇನಾದ್ರು ಬರಿರೋ ಎಂದರು.  ನಾನೇನು ಹೇಳಿದೆ ಗೊತ್ತಾ?, ನೀವೆಲ್ಲ ಅಂದರೆ ಕಿರೀಟ ಕಟ್ಟಿಕೊಂಡವರು,  ಸಾಮಾನ್ಯ ಸದಸ್ಯರ ಪರಿಚಯವಿರಲಿ, ಇಲ್ಲದಿರಲಿ ಮಹಾಸಭೆಯ ಆವರಣದಲ್ಲಿ ಅವರನ್ನೆಲ್ಲಾ ನೀವೆ ಮೊದಲ್ಗೊಂಡು ಮಾತನಾಡಿಸಲು ಆರಂಭಿಸಿ, ಒಮ್ಮೆ ಬಂದವನು ಇನ್ನೊಮ್ಮೆ ಬರುತ್ತಾನೆ, ಬರದಿರುವವನನ್ನು ಪ್ರೋತ್ಸಾಹಿಸಿ ಕರೆತರುತ್ತಾನೆ, ಹವ್ಯಕರು ನಮ್ಮ ಮನೆಗೆ ಯಾರೇ ಬಂದರೂ ಪರಿಚಯವುಳ್ಳವರು, ಪರಿಚಯವಿಲ್ಲದವರು  ಎಂದು ಯೋಚಿಸದೆ ಯಾವ ರೀತಿ ಪೂರ್ಣ ಮನಸ್ಸಿನಿಂದ   ಸ್ವಾಗತಿಸುತ್ತೇವೋ ಆರೀತಿ ಮಾತನಾಡಿಸಿ ನೋಡಿ , ಅದೇ  ಪ್ರತಿಯೊಬ್ಬನನ್ನೂ ಚುಂಬಕದಂತೆ ಆಕರ್ಶಿಸಿ ಹವ್ಯಕ ಮಹಾಸಭೆಯ ಕಾರ್ಯಕ್ರಮಗಳಿಗೆ ತುಂಬು ಹೃದಯದ ಸಹಕಾರವನ್ನು ನೀಡುತ್ತದೆ ಎಂದೆನು.  ನೀವೇನಂತೀರಿ ?




ಅಂದ ಹಾಗೆ ನಮ್ಮ ವರ್ತಮಾನದ ಅಧ್ಯಕ್ಷರು ಚಟುವಟಿಕೆ ಆರಂಭಿಸಿದಾಗಿನಿಂದ  ಮುಖಪತ್ರಿಕೆಯ  paper  quality  ಯಲ್ಲಿ ಗುಣಾತ್ಮಕ ಬದಲಾವಣೆ ಬಂದಿರುವದನ್ನು ಗಮನಿಸಿರುತ್ತೀರಿ.  ನೀವಿಂದು ಕಾರ್ಯಕ್ರಮಕ್ಕೆ ಬಂದಿದ್ದರೆ,  ಊಟಕ್ಕೆ ಕುಳಿತ ಪ್ರತಿಯೊಬ್ಬರನ್ನೂ ಅಧ್ಯಕ್ಷರು, ಮನೆಯ ಯಜಮಾನನಂತೆ ಆಪ್ತವಾಗಿ, ನಗುಮುಖದೊಂದಿಗೆ ಮಾತನಾಡಿಸುತ್ತ ಸಾಗುತ್ತಿರುವದನ್ನ್ನು ನೋಡಿದಾಗ ಹವ್ಯಕರ ಮದುವೆ, ಮುಂಜಿ ಕಾರ್ಯಗಳ ನೆನಪು ತರಿಸುತ್ತಿತ್ತು.  ಅವರ ಜೊತೆ ಜೊತೆಗೆ ಕೆಲವು ಪ್ರತಿನಿಧಿಗಳು ಆಪ್ತವಾಗಿ ಕುಡಿಯುವ ಸಾರು ಎಂದವರಿಗೆ ಓಡೋಡಿ ಕುಡಿಯುವ ಸಾರು, ಪಲ್ಯ ಎಂದೊಡನೆ ಪಲ್ಯ ಇತ್ಯಾದಿ ಸರಬರಾಜು ಮಾಡುತ್ತಿದ್ದುದನ್ನು ನೋಡಿದರೆ,  ಕಿರೀಟ ಕಟ್ಟಿರುವವರೆಲ್ಲಾ ಈ ರೀತಿ ಅಧ್ಯಕ್ಷರಿಗೆ ಸಹಕಾರವಿತ್ತರೆ, ಹವ್ಯಕ ಸಮಾಜ ಸಂಘಟನೆ ಯಶಸ್ವಿಯಾಗೇಯಾಗುತ್ತದೆ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಆಯಾಸವಿಲ್ಲದೇ, ಉಳಿದ ಸಮಾಜದವರು ನಮ್ಮನ್ನು ಆದರ್ಶವಾಗಿ ಒಪ್ಪಿಕೊಳ್ಳುವದರಲ್ಲಿ ಸಂದೇಹವೇ ಬೇಡ, ಎನಿಸಿತು.  ಅಂತೆಯೇ ನಮ್ಮ ಸಮಾಜದ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿರುವ ಸ್ಥಳೀಯ ಪ್ರಜಾಪ್ರತಿನಿಧಿ ಡಾ.ಅಶ್ವಥನಾರಾಯಣ ಗೌಡಾ ಅವರನ್ನು ಇಂದಿನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರೋತ್ಸಾಹಿಸಿ, ಕರೆತಂದು ಅವರ ಉಪಸ್ಥಿತಿಯನ್ನು ವ್ಯವಸ್ಥೆಗೊಳಿಸಿದ ನಮ್ಮ ಹಿಂದಿನ ವರ್ಷದ ಗೌರವ ಪ್ರಧಾನ ಕಾರ್ಯದರ್ಶಿ ಮಂಜುನಾಥ ರಾವ್ , ಊಟದ ಸಮಯದಲ್ಲಿ ಸಾತ್ವಿಕ ವಾತಾವರಣವನ್ನು ಕಲ್ಪಿಸಲು ಚೂರ್ಣಿಕೆ, ಗ್ರಂಥ , ಶ್ಲೋಕ ಗಳನ್ನು ಹೇಳುವಂತೆ ಎಲ್ಲರನ್ನು ಪ್ರೋತ್ಸಾಹಿಸಿದ ಶ್ರೀಕಾಂತ್ ಹೆಗಡೆ, ಅಂತ್ರವಳ್ಳಿ  ಮುಂತಾದವರ ಕಾರ್ಯ ಶ್ಲಾಘನೀಯ. ಇನ್ನೂ ಸ್ಮರಣೀಯವೆಂದರೆ ನಮ್ಮ ಮಾಜಿ ಅಧ್ಯಕ್ಷರ ಭಾಗವಹಿಸುವಿಕೆ.  ದೂರದ ಶಿರಸಿಯಿಂದ ಬಂದು , ಈ ಇಳಿವಯಸ್ಸಿನಲ್ಲೂ , ಯುವಕರನ್ನು ನಾಚಿಸುವಂತೆ ಆಚೀಚೆ ಓಡಾಡುತ್ತ ಎಲ್ಲರೊಡನೆ ಬೆರೆಯುತ್ತಾ ನಗು ಮುಖದ ನಮ್ಮ ಮಾಜಿ ಅಧ್ಯಕ್ಷರಾದ ಜಿ.ವಿ.ಹೆಗಡೆ ಕಾನಗೋಡ್ ಇವರ ಉದಾಹರಣೆಯೇ ಬೆಂಗಳೂರು ವಾಸಿಯಾಗಿರುವ ಪ್ರತಿಯೊಬ್ಬ ಹವ್ಯಕನನ್ನೂ ಸಮಾಜ ಚಟುವಟಿಕೆಗಳತ್ತ ತರಲೇಬೇಕು ಎಂದರೆ ಅತಿಶಯೋಕ್ತಿಯಾಗಲಾರದು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com

Sunday, March 24, 2013


ನಮ್ಮ ಕನ್ನಡ ಸಾಹಿತಿಗಳು ಮಾಡುತ್ತಿರುವದೇನು?


ಸಭೆ, ಸಮಾರಂಭ, ಚರ್ಚೆ, ಭಾಷಣಗಳಲ್ಲಷ್ಟೇ ಕನ್ನಡ ಕನ್ನಡ ಎಂದು ಕನ್ನಡದ ಅಭಿಮಾನ ತೋರ್ಪಡಿಸುವರು. ಹೆಚ್ಚಿನ ಕನ್ನಡ ಸಾಹಿತಿಗಳ ಕನ್ನಡ ಪ್ರೇಮ ಹೇಗಿದೆ ಎಂದರೆ, ಸುಲಭವಾಗಿ ಅರ್ಧ ಘಂಟೆ ಚೊಕ್ಕ ಕನ್ನಡದಲ್ಲಿ ಮಾತನಾಡಲಾರದೆ , ಮಧ್ಯೆ ಮಧ್ಯೆ ಇಂಗ್ಲಿಶ್ ಮೊರೆಹೋಗಿ , ಕನ್ನಡ ಕನ್ನಡ ಎಂದು ಅರಚುವರು. ಅರಚುವರು ಎಂದು ಹೇಳಿದ್ದೇಕೆಂದರೆ, ಭಾಷಾಭಿಮಾನಿಯೊಬ್ಬ  ಸಂವಹನೆಗೆ ತೊಡಗಪ್ರಯತ್ನಿಸಿದರೆ ತಮ್ಮ ದೊಡ್ಡತನ ಪ್ರದರ್ಶಿಸಿ , ಇನ್ನೊಮ್ಮೆ ಮಾತನಾಡೋಣ ಎಂದೋ, ಇಂಗ್ಲಿಶ್ ಮಾತುಗಳನ್ನು ಬಳಸಿ ತಾನೊಬ್ಬ ಧೀಮಂತ ಎಂದೋ ಪ್ರದರ್ಶನ ಮಾಡುವರು.



ಯಾವುದೋ ಪ್ರಶಸ್ತಿಯನ್ನು ಲಕ್ಷದಲ್ಲಿಟ್ಟು ಸಾಹಿತ್ಯ ಬರೆಯುವ ಸಾಹಿತಿಗಳೇ ತುಂಬಿಹೋಗಿದ್ದಾರೆ. ಪ್ರಶಸ್ತಿಗಾಗಿ ಯಾವುದೋ ರಾಜಕಾರಣಿ, ಅಧಿಕಾರಿಯ ಬಾಗಿಲು ತಟ್ಟುತ್ತ ಇನ್ನೊಬ್ಬ ಸಾಹಿತಿಯ ಕಾಲೆಳೆಯುವದರಲ್ಲೇನೂ ನಾಚಿಕೆಪಟ್ಟುಕೊಳ್ಳುವದಿಲ್ಲ . ಈ ರೀತಿ ಎಲ್ಲೆಡೆ corruption ತುಂಬಿದೆಯಲ್ಲಾ ಎಂದರೆ, ದೇಶಾವರೀ ನಗೆ ಬೀರಿ , " we are all corrupt " ಎಂದು ಮುಖ ಗಂಟಿಕ್ಕಿ ಮೌನಕ್ಕೆ ಶರಣಾಗುವರು. ಒಬ್ಬ ರಾಜಕಾರಣಿ ಹೆಸರು ಹೇಳಿ , ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸಾರ್ವಜನಿಕವಾಗಿ ಕರೆ ನೀಡುವರು. ವಿಚಿತ್ರವೆಂದರೆ ಅದೇ ರಾಜಕಾರಣಿ , ಭಾಷಣದಲ್ಲಿ " ನಾನೇನೂ ಸುಭಗನಲ್ಲ " ಎಂದು ಅಲ್ವತ್ತುಕೊಳ್ಳುವನು. ಈ ರೀತಿ ಸಾಗಿದೆ ನಮ್ಮ ಕನ್ನಡ ಸಾಹಿತಿಗಳ ಸಾಹಿತ್ಯ ತೇರು.



ಮಾತು ಮಾತಿಗೆ ಸರಕಾರ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ಉಳಿದ ದಕ್ಷಿಣ ಭಾಶೆಗಳಿಗಿಂತ ನಾವು ತಂತ್ರಜ್ಞಾನ ಅಳವಡಿಕೆಯಲ್ಲಿ ತುಂಬಾ ಹಿಂದಿದ್ದೇವೆ. ಕಂಡ ಕಂಡ ಕಡೆ ಸಿಕ್ಕಿದ ಅವಕಾಶಗಳನ್ನೆಲ್ಲಾ ಉಪಯೋಗಿಸಿ ಸರಕಾರದತ್ತ ಬೆರಳು ತೋರಿಸಿ, ಸುಖ ನಿದ್ರೆ ಮಾಡುತ್ತಾರೆ.  ಒಂದು ನೂರು ಸಾಹಿತಿಗಳು ಕಚ್ಚೆ ಪಂಚೆ ಬಿಗಿದು, ಪ್ಯಾಂಟ್ ಶರ್ಟ್ ಏರಿಸಿ ವಿಧಾನಸೌಧಕ್ಕೆ ಹತ್ತಾರು ಬಾರಿ ನಡೆದರೆ ಸರಕಾರ ಈ ಕೆಲಸ ಮಾಡಲಿಕ್ಕಿಲ್ಲವೇ? ಬೆಕ್ಕಿಗೆ ಯಾರು ಘಂಟೆ ಕಟ್ಟಬೇಕು?  ಭಯ -  ಮುಂದಿನ ಪ್ರಶಸ್ತಿಗೆ ಅದೇ ರಾಜಕೀಯ ಪುಢಾರಿ, ವಿಧಾನ ಸೌಧದ ಮಂತ್ರಿ, ಸರಕಾರೀ ಅಧಿಕಾರಿಗಳ ಬಾಲ ಹಿಡಿಯಬೇಕಲ್ಲವೆ? ಹಾಗಾಗಿ ಸಿಕ್ಕಿದ ಸಭೆಗಳಲ್ಲೆಲ್ಲ, ವಾಹಿನಿಯವರು ತಮ್ಮ ಮುಖಕ್ಕೆ ಮೈಕ್ ಹಿಡಿದಾಗಲೆಲ್ಲಾ ಕನ್ನಡ ..... ಕನ್ನಡ ಎಂದು ಅರ್ಭಟಿಸುವದು, ಮತ್ತೆ ಮೊಮ್ಮಕ್ಕಳನ್ನು ಲಕ್ಷ , ಲಕ್ಷ ರೂಪಾಯಿ ಸುರಿದು ಬೆಂಗಳೂರಿನಲ್ಲಿಯೇ   ಅತಿ ವಿಖ್ಯಾತ ಇಂಗ್ಲಿಶ್ ಮಾಧ್ಯಮ ಶಾಲೆಗೇ ಸೇರಿಸುವದು  ನಡೆದೇ ಇದೆ .  ಈ ರೀತಿ ಸಮಷ್ಟಿಗೆ ಕನ್ನಡ ಭೋಧಿಸುವ ಭಾಷಣದ ಸಾಹಿತಿಗಳ ಗುಂಪು  , ವೈಯಕ್ತಿಕ ಜೀವನದಲ್ಲಿ ಕನ್ನಡ ಅಳವಡಿಸಿಕೊಳ್ಳದ ವರೆಗೆ ಕನ್ನಡಕ್ಕಿದೇ  ಗತಿ?  



ನಮ್ಮ ಸಾಹಿತಿಗಳು ಕನ್ನಡದಾಚೆಯವನೊಬ್ಬ ಅತಿಥಿಯೆಂದರೆ, ಆತನ ಅನುಕೂಲಕ್ಕಾಗಿ ಸಭೆಯಲ್ಲಿರುವ ನೂರಾರು ಕನ್ನಡಿಗರನ್ನು ಅವಗಣಿಸಿ ಇಂಗ್ಲಿಷ್ನಲ್ಲಿ ಭಾಷಣ  ಮಾಡುತ್ತಾರೆ. ಅದೇ ಅತಿಥಿ ತನಗೆ ಇಂಗ್ಲಿಶ್  ಬರುವದಿಲ್ಲ ಎಂದು ತನ್ನ ಮಾತೃ ಭಾಷೆಯಲ್ಲಿ ಮಾತನಾಡುತ್ತಾರೆ. ನಾಚಿಕೆ , ನಜ್ಜು ಇಲ್ಲದ ನಮ್ಮ ಸಾಹಿತಿಗಳು , ನಾಳೆ ಅವನೇ ಪ್ರಶಸ್ತಿ   ಪುರಸ್ಕಾರಗಳನ್ನು   ನಿರ್ಧರಿಸುವ ಮಂಡಳಿಯಲ್ಲಿದ್ದಾನು ಎಂಬ ದುರಾಲೋಚನೆಯಿಂದ ಅಥವಾ ದೂರಾಲೊಚನೆಯಿಂದ  ತಮ್ಮ ಮಾತೃ ಭಾಷೆಗೆ ಅವಮಾನ ಮಾಡುತ್ತಾರೆ. ಮತ್ತೆ  ಅದೇ ಮನೋಭಾವದ ಸಾಹಿತಿಗಳೇ  ಸಮಾಜದಲ್ಲಿ ವಿಜ್ರಂಭಿಸುತ್ತಾರೆ.  ಹೀಗೆ ನಡೆದಿದೆ ಕನ್ನಡ ಸಾಹಿತ್ಯ ಸಂತೆ.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 24 , 2013.

Saturday, March 23, 2013


Dr. C. N. Ramachandran ರವರ ಜೊತೆ ನಿನ್ನೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಟ್ಟಿದ್ದ ಕಾರ್ಯಕ್ರಮ " ಕನ್ನಡ ಸಾಹಿತ್ಯ ಉತ್ಸವ" ದಲ್ಲಿ, CNR ಜೊತೆ  ಮಾತನಾಡುವ ಅವಕಾಶ ಸಿಕ್ಕಿತ್ತು. ಸಾಹಿತ್ಯದ ಆರಂಭ ಹೇಗಾಯಿತು ಎಂದು ಚರ್ಚಿಸುತ್ತ,  ಮೌಖಿಕ ಸಾಹಿತ್ಯ ಕುಶ ಲವರಿಂದ ಆರಂಭವಾಯಿತು ಎಂಬ ಅವರ ಮಾತಿನ ಎಳೆಯನ್ನು ಹಿಡಿದು ,"  ಸರ್, ಕುಶ ಲವ ತ್ರೇತಾಯುಗದ ವಿಷಯವಾಯಿತು, ನಾರದ ಮಹರ್ಷಿಗಳು ಸತ್ಯಯುಗದಲ್ಲಿ ಹೇಳಿದ್ದೆಲ್ಲ ......." ಎಂದೊಡನೆ ಮೈಮೇಲೆ ಬಿಸಿ ನೀರು ಚೆಲ್ಲಿದಂತೆ , " ಅವೆಲ್ಲಾ ನಿಜವಲ್ಲಾ, ಪುರಾಣಗಳು ಸತ್ಯವಲ್ಲ, ......" ಎಂದರು.



" ಹೌದು ಸರ್, ಸತ್ಯವಲ್ಲ ಎಂದೇ ಒಪ್ಪಿಕೊಂಡರೂ  , ರಾಮಾಯಣದ ಉದಾಹರಣೆ   ಕೊಟ್ಟಾಗ, ಇದೂ ಅಂದರೆ ನಾರದರ ವಿಷಯವನ್ನೂ ಗಮನಿಸಬೇಕಲ್ಲವೇ? ಎಂದರೆ .......... " ಇವೆಲ್ಲ ಯಾವುದೂ ಸತ್ಯವಲ್ಲ, ನಾನು ನಂಬುವುದಿಲ್ಲ ........" ಎಂದು ನನ್ನ ಮಾತನ್ನೇ ತಿರಸ್ಕರಿಸಿಬಿಟ್ಟರು. ....  ನಾನು ಬಿಡಬೇಕಲ್ಲ ?...... " ಸರ್ ಹಾಗಿದ್ದರೆ ಇತಿಹಾಸ ಸಾಹಿತ್ಯವೇ? " ಎಂದೊಡನೆ , ಇತಿಹಾಸ ಸಾಹಿತ್ಯ ಪ್ರಕಾರವಲ್ಲ, ಕಾದಂಬರಿಗಳಲ್ಲಿ ಬರೆಯುವ ಇತಿಹಾಸದ ಸಂಗತಿಗಳು ಸಾಹಿತ್ಯ ಎಂದು , ಗೋಜು ಗೋಜಲಾಗಿ ಹೇಳಿದರು.



 " ಸರ್ ಇವೆಲ್ಲಾ conflicts of thoughts , ಅಲ್ಲವೇ?  ಎಂದು ನಾನು ಮುಂದುವರಿದಾಗ, ಇಪ್ಪತ್ತೈದು - ಮೂವತ್ತು ವಯಸ್ಸಿನ ಮಹಾಶಯನೊಬ್ಬ ಮಧ್ಯೆ ಪ್ರವೇಶಿಸಿ ,  CNR ಬಚಾವೋ ಕಾರ್ಯ ಕೈಗೊಂಡನು.



ವಿಚಿತ್ರ ಸಂಘಟಕರು. ಸಾಹಿತಿಗಳಿಗೆ ಇಪ್ಪತ್ತು ನಿಮಿಷ ಮಾತನಾಡಿ ಎಂದು ಮೂರು ಸಾಹಿತಿಗಳಿಗೆ ಮಾತನಾಡಲು ಅವಕಾಶ ನೀಡಿ , "ಈಗ ಪ್ರೇಕ್ಷಕರೊಡನೆ ಸಂವಾದ " ಎಂದು ಐದಾರು ಪ್ರಶ್ನೆಗಳಾದೊಡನೆ , ಸಮಯ ಮಿತಿ ಮುಗಿದೋಯಿತು ಎಂದು ಕಾರ್ಯಕ್ರಮ ಮುಗಿಸುವವರು. ಅಂದ ಹಾಗೆ ಕಾರ್ಯಕ್ರಮ ನಾಳೆಯೂ ಇದೆ, ಬಂದು ನೋಡಿ ಕಾರ್ಯಕ್ರಮದ ವೈವಿಧ್ಯ .  ಒಳ್ಳೆ ಊಟ , ಕಾಫಿ - ಟೀ ವ್ಯವಸ್ಥೆ ಇರುತ್ತದೆ. ಐದಾರು ತಾಸಿನ ಕಾರ್ಯಕ್ರಮಕ್ಕೆ ಹತ್ತಾರು ಲಕ್ಷಗಳನ್ನು ಸುರಿದು, ವಿಡಿಯೋ - ಫೋಟೊ ಗಳನ್ನೇ ಭರ್ಜರಿಯಾಗಿಸಿ , ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ   ಕಾರ್ಯಕ್ರಮಕ್ಕೆ ಸಾಹಿತಿಗಳೇ, ಸಾಹಿತ್ಯ ಪ್ರಿಯರೆ ಇಲ್ಲ, ಎಲ್ಲ  All India Radio, Prasaara Bhaarati ನೌಕರರ  ಸಮ್ಮೇಳನ , ಸಾಹಿತ್ಯದ ಸೋಗಿನಲ್ಲಿ !!!!!!!!



ಇಂದೂ ನಡೆಯುತ್ತಿದೆ, ನಾಳೆಯೂ ಇದೆ.
Organised by Prasar Bharati
(Broadcasting Corporation of India)
All India Radio
from 22nd March 2013 to 24th March 2013

ಸ್ಥಳ: ಖಿಂಚಾ ಹಾಲ್ , ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರೋಡ್.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಬರಹಗಾರ.
www.hariharbhat.blogspot.com
March 23 , 2013.

Friday, March 22, 2013


ಬಸ್ ಗಳಲ್ಲಿ ಚಿಲ್ಲರೆ ಅಭಾವ, ದಿನನಿತ್ಯದ ಗೋಳು. ಇಲ್ಲಿದೆ ಸುಲಭ ಪರಿಹಾರ.
-------------------------------------------------------------------


ಮೊದಲೇ ಹಣ ನೀಡಿ ಖರೀದಿಸಬೇಕಾದ ಟಿಕೆಟ್ ಗಳನ್ನು ಮುದ್ರಿಸಿ ಜನಗಳಿಗೆ ಮಾರಬೇಕು. ಒಂದು, ಎರಡು, ಮೂರು,ನಾಲ್ಕು,ಐದು ರೂಪಾಯಿಯ ಮುಖಬೆಲೆಯ ಟಿಕೆಟ್ಗಳನ್ನು ಒಂದು ನೂರರ ಕಟ್ಟಿನಂತೆ ಮಾಡಿ ಮಾರಬಹುದು. ಈ ಟಿಕೆಟ್ಗಳು ಎಡ ಮತ್ತು ಬಲದ ಎರಡು ಭಾಗ ಹೊಂದಿದ್ದು, ಮಧ್ಯೆ ಚಿಕ್ಕ ಚಿಕ್ಕ ಕಿಂಡಿಗಳಿಂದ   ಬೇರ್ಪಟ್ಟಿರಬೇಕು . ಈ ಟಿಕೆಟ್ಗಳನ್ನು ಅನುಕೂಲಕರವಾಗಿ ಮಾರಲು ನಿರ್ವಾಹಕರ ಕಡೆ ಸದಾ ಲಬ್ಯವಿರಬೇಕು.


ಜನರು ಬಸ್ ಏರಿದಾಗ ನಿಗದಿಪಡಿಸಿದ ಮೊತ್ತದ ಟಿಕೆಟ್ನ ಒಂದು ಭಾಗವನ್ನು ಅಂದರೆ ಎಡ ಭಾಗವನ್ನು  ನಿರ್ವಾಹಕರಿಗೆ ನೀಡಬೇಕು ಅಂತೆಯೇ ಇಳಿಯುವಾಗಲೂ ಇನ್ನೊಂದು ಭಾಗವನ್ನು ಅಂದರೆ ಬಲ ಭಾಗವನ್ನು  ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಸ್ಥಳದಲ್ಲೇ ಒಂದು ನೂರು ರೂಪಾಯಿ ದಂಡ ನೀಡಬೇಕು. ವಾಹನದಲ್ಲಿ ಸಿ ಸಿ ಟಿ .ವಿ ಅಳವಡಿಸಿರಬೇಕು.   ಟಿಕೆಟ್ ನ ಎರಡೂ ಭಾಗ ತನ್ನ  ಕೈ ಸೇರಿದಾಗ ನಿರ್ವಾಹಕ ಅವೆರಡೂ ತುಂಡುಗಳನ್ನು ಹರಿದು ಹಾಕಬೇಕು.



 ನಿರ್ವಾಹಕರು, ಜನರು ಹೊಂದಾಣಿಕೆ ಮಾಡಿಕೊಂಡು ಸಂಸ್ಥೆಗೆ ಮಾಡಬಹುದಾದ ಮೋಸಗಳನ್ನು ಸಿ.ಸಿ.ಟಿ.ವಿ ಅಳವಡಿಕೆಯಿಂದ ತಡೆಗಟ್ಟಬಹುದು. ಅಲ್ಲದೆ ನಿರ್ವಾಹಕರಿಂದಾಗುವ  ಮೋಸ ತಡೆಯುವ ಬಗ್ಗೆ ಇರುವ ಅಧಿಕಾರಿ ವರ್ಗದ ಅವಶ್ಯಕತೆಯನ್ನೇ ಹೋಗಲಾಡಿಸಿ, ಸಂಸ್ಥೆಗೆ ಹೆಚ್ಚಿನ ವೆಚ್ಚಗಳನ್ನು ಉಳಿತಾಯಮಾಡಬಹುದು. ಸಿ ಸಿ ಟಿ ವಿ ಅಳವಡಿಕೆಯಿಂದ ಸ್ತ್ರೀ ದೌರ್ಜನ್ಯಗಳನ್ನೂ ತಡೆಯಬಹುದು.



ಇನ್ನು ಟಿಕೆಟ್ ಗಳನ್ನೇ ನಕಲು ಮಾಡಿ ಮುದ್ರಿಸಿ ಹಣ ಮಾಡುವ ಜಾಲ ಹುಟ್ಟಿಕೊಳ್ಳಬಹುದೆಂಬ ಭಯವೊಂದಿದೆ. ಅದಕ್ಕೆ ಇಂದಿನ ಹೊಲೋಗ್ರಾಂ ತಂತ್ರಾಂಶ ಅಳವಡಿಸಿಕೊಂಡರೆ ಆ ಭಯವೂ ಸಹಜವಾಗಿ ದೂರವಾಗುವದು.



ಇವೆಲ್ಲಾ ಸ್ವಲ್ಪ ಓದಿದ ಜನಸಾಮಾನ್ಯರಿಗೆ ತೋರಿಬರುವ ವಿಚಾರಗಳು. ಆದರೆ ಈ ವಿಚಾರಗಳು ವಿಷಯ ನಿರ್ಣಾಯಕರಾಗಿರುವ ಅಧಿಕಾರಿ ವರ್ಗದವರಿಗೆ ಹಿಡಿಸಬೇಕಲ್ಲಾ?  ಈ ರೀತಿ ವಿಚಾರಧಾರೆಯ ಅಧಿಕಾರಿಗಳು ಸೂಕ್ತ ಸ್ಥಳದಲ್ಲಿ ವರ್ಗಾವಣೆಯಾದಾಗ ನಿಜಕ್ಕೂ ಜನ ಸಾಮಾನ್ಯನ ಹಿತ ಕಾಪಾಡುವಂತಾದೀತು.


ಹರಿಹರ  ಭಟ್ , ಬೆಂಗಳೂರು .
ಚಿಂತಕ, ವಿಮರ್ಶಕ, ಹವ್ಯಾಸಿ ಬರಹಗಾರ.
www.hariharbhat.blogspot.com
March 23, 2013.


*********************************************************************************

Reduce passenger inconveniences in BMTC
==================================


The BMTC can implement a plan to eliminate the difficulties of providing coins in the form of change to passengers and also reduce the pilferage in the collection on various trips of BMTC buses. There can be huge savings in the form of elimination of inspectors cadre of employees. They should provide CCTVs in the buses that would reduce the crimes / inconveniences to the women passengers and also bring a transperancy in the supervision on the bus conductors and drivers.


They should provide with the conductors a  prepaid bunch of tickets. It can be in the denominations of rupee one, two, three , four and five. A bunch of ten tickets can be sold at various places , as well should be made available with the conductors for sale. The passenger should buy these bunch of tickets according to  his / her requirements.


When a passenger boards a bus should give one part of the ticket to the conductor and the conductor should collect the other part of the ticket when that passenger gets down from the bus. The conductor has to destroy both the parts of the ticket and hence would not  be reused. If the passenger fails to produce the other part of the ticket or found to be misguiding the conductor to save the fare, the conductor should penalise that passenger with rupees one hundred.


The CCTV would protect the institution from the frauds against an arrangement between a passenger and conductor. Moreover the inspector is not required to superwise over the service of the conductor as the CCTV provides even time recordings of the activities in the particular bus. The modern technology of hologram can be used to overcome any chances of fraud in printing  the tickets and to avoid duplication of tickets.


The simple steps of policy makers can bring a drastic change in the convenience to the passengers. This can result in huge savings to BMTC and would be a helpful step in reducing pilferages.


Harihar Bhat, Bangalore
freelance journalist.
www.hariharbhat.blogspot.com
March 23, 2013.

ಭಾರತೀಯ ವಿದ್ಯಾಭವನ , ರೇಸ್ ಕೋರ್ಸ್ ರೋಡ್ ನ ಆವರಣದಲ್ಲಿ  ಧಾರ್ಸ್ಟ್ಯದಿಂದ  ಸುಲಿಗೆ.
======================================================


ಭಾರತೀಯ ವಿದ್ಯಾಭವನದಲ್ಲಿ  ಏರ್ಪಾಡಾದ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ.  ಮಧ್ಯೆ ಟೀ ಕುಡಿಯೋಣ ಎನಿಸಿ ಅದೇ ಆವರಣದಲ್ಲಿರುವ ಕ್ಯಾಂಟೀನ್ ಪ್ರವೇಶಿಸಿದೆ. ಟೀ ಒಂದು ಕೊಡಿ ಎಂದಾಗ ಹನ್ನೆರಡು ರೂಪಾಯಿ ಎಂದನು. ಸರಿ ಒಳ್ಳೆ ಟೀ ಇದ್ದೀತು ಎಂದು ಬಿಲ್ ಪಡೆದು ಟಿ ತಗೊಂಡೆ. ಪೂರ್ತಿ ಆರಿ ಹೋದ ಟಿ, ಅಲ್ಲದೆ ರಸ್ತೆ ಬದಿಗಳಲ್ಲಿ ಅರ್ಧ ಟೀ ಎಂದು ಐದಾರು ರೂಪಾಯಿಗಳಿಗೆ ಸಿಗುವ ಟೀಗಿಂತಲೂ ಕೆಳಮಟ್ಟದ ಟೀ  ಮತ್ತು  ಕಡಿಮೆ ಪ್ರಮಾಣದ ಟೀ  ಅದಾಗಿತ್ತು.  ಇದೇನಾ ಹನ್ನೆರಡು ರೂಪಾಯಿ ಟೀ ಎಂದರೆ , ಹೌದು ಅದೇ , ಅಷ್ಟೇ ಎಂಬ ಅಹಂಕಾರದ ಉತ್ತರ .



ಯಾಕೆ ಹೀಗಿರಬಹುದು? ಕ್ಯಾಂಟೀನ್ ನಡೆಸುವವರಿಗೆ ಮಾನವೀಯತೆಯೇ ಇಲ್ಲವೇ?  ಕೇಳಿದಷ್ಟು ಹಣ ನೀಡಿ   ಟೀ ಕುಡಿಯಹೋದರೆ, ಯಾಕಪ್ಪ ಬಂದೆ ಎಂಬಂತಹ ಭಾವನೆಯಿಂದ ಹೊರಟುಬರಬೇಕೇ  ವಿನಃ ಬೇರೆ ದಾರಿಯಿಲ್ಲ.



ಭಾರತೀಯ ವಿಧ್ಯಾಭವನದಂತಹ ಶ್ರೇಷ್ಟ ಸಂಸ್ಥೆಯೊಂದರಲ್ಲಿ  , ಈ ರೀತಿ ವ್ಯವಹಾರಗಳು ನಡೆಯುವದು ಸಂಸ್ಥೆಗೆ  ಶೋಭೆ ತರಬಲ್ಲುದೇ?  ನೇರವಾಗಿ ದರೋಡೆಯ ರೂಪದಲ್ಲಿರುವ ಈ ಕ್ಯಾಂಟೀನ್ ಮೇಲೆ ಸಂಸ್ಥೆಗೆ   ಯಾವುದೇ ಹತೋಟಿಯಿಲ್ಲದಿರಬಹುದೇ ?  ಅಥವಾ ಸಭಂಧಿಸಿದವರ್ಯಾರಾದರೂ   ಪ್ರಶ್ನಿಸದಂತೆ , ಸರಕಾರೀ ಕಚೇರಿಗಳಂತೆ ತಮ್ಮನ್ನು ತಾವೇ ಮಾರಿಕೊಂಡಿರಬಹುದೇ ? ಎಂಬ ಜಿಜ್ಞಾಸೆ ಮನದಲ್ಲಿ ಮೂಡಿ ಬಂತು.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಬರಹಗಾರ.
www.hariharbhat.blogspot.com
March 22 ,  2013.

Sunday, March 17, 2013

NAMMA BENGALURU AWARDS


I have attended the fourth annual award ceremony of Namma BengaLuru and the presentation before the final gathering.  It is fabulously organized event.

What I could observe is , the awardees , outstanding in their field of service maintain an arms distance in extending mutual  congratulations. The reserved status maintained with an expectation from the other to take the first step for an introduction with shake hand, kept the gap among the awardees till the end of the function.  Here I can quote with a wish and confidence that the quote would be taken in positive spirit, the example of Mr. Manivannan and  Dr. M A Salim.

I felt if the organizers could arrange a small get together or a high tea  and establish a friendly relation among the final awardees, that may help a lot to share the best brains experiences mutually among them and at large the society may benefit from their mutual team thoughts and work.

This is commonly seen human behavior, among economically upper strata of society citizens to maintain a distance from one another, and hence a small step by  Namma Bengaluru Balaga (team) as suggested here may go a long way in taking out the gap  there due to  status symbols.

The selection was from a list of 61000 service minded people, nominated by different citizens from the nook and corner of our Bangalore. It was short listed to 51 finalists by an honorable jury consisting of highly talented people of citizens in Bangalore. At the end it was the golden moment for the eleven outstanding, dedicated to serve, citizens of Bangalore, from the list of finalists, to be declared and awarded the prestigious  NAMMA BENGALURU  AWARDS  in recognition of their extraordinary contribution to the city of Bangalore.

The juries, processing the nominated 61,000 entries and short listing them to 51 have certainly done a herculean task, that needs admiration.  And might it not be that too easy to declare eleven awardees from these 51 gems.

All the organizers, juries, nominees, awardees deserve the appreciation from each of us in Bangalore.

Harihar Bhat, Bengaluru.
Freelance Journalist.
March  17 , 2013.

Friday, March 15, 2013


" ಹುಚ್ಚು ಮುಂಡೆ ಮದುವೇಲಿ , ಉಂಡವನೇ ಜಾಣ "
-------------------------------------------------------



"ಪರೀಕ್ಷೆಯ ಹಿಂದಿನ ದಿನ ಸೈಬರ್ ಕೆಫೆ , ಟ್ಯುಶನ್ ಕೇಂದ್ರ , ಝೆರಾಕ್ಷ   ಕೇಂದ್ರಗಳ ಬಳಿ ಹಾಗೂ ವಿಧ್ಯಾರ್ಥಿಗಳು ಗುಂಪು   ಗುಂಪು  ಸೇರುವ ಕಡೆಗಳಲ್ಲಿ ವೀಡಿಯೊ ಚಿತ್ರೀಕರಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಶಿಕ್ಷಣ ಮಂತ್ರಿ ವಿಶ್ವೇಶ್ವರ   ಕಾಗೇರಿಯವರ ಹೇಳಿಕೆ.




ಎತ್ತಿಗೆ ಜ್ವರ ಎಮ್ಮೆಗೆ ಬರ  ( ಔಷಧ ) ಎಂಬಂತಿದೆ ಈ ನಿರ್ಣಯ.  ತನ್ನ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಂದಲೇ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಬೇಕೆಂಬ ಸಾಮಾನ್ಯ ಜ್ಞಾನವನ್ನೂ  , ಮಂತ್ರಿಯಾದೊಡನೆ  ಎಲ್ಲ ರಾಜಕೀಯ ಪುಢಾರಿಗಳೂ  ಕಳೆದುಕೊಳ್ಳುವದು ಈ ದೇಶದ ದೌರ್ಭಾಗ್ಯ. ವ್ಯವಸ್ಥೆಯಲ್ಲಿ ಜವಾನನಿಂದ ಆರಂಭವಾಗಿ ಮಂತ್ರಿಯ ಅಧಿಕಾರಿಗಳ ತನಕ ಎಲ್ಲರ ಮೇಲೆ ಮಂತ್ರಿಯ ಹಿಡಿತ ಇರಬೇಕು ಎಂದು ಸೂಕ್ತ ಕಾನೂನುಗಳಿವೆ. ಅದೇ ರೀತಿ ಪ್ರತಿ ಅಧಿಕಾರಿಗೂ ತನ್ನ ಕೆಳಗಿನ ಅಧಿಕಾರಿಗಳು ಮತ್ತು ನೌಕರರ ಮೇಲೆ ಸೂಕ್ತ ಹಿಡಿತ ಸಾಧಿಸಲು ಬಲವಾದ ಕಾನೂನುಗಳಿವೆ. ಈ ಎಲ್ಲಾ ವ್ಯವಸ್ಥಿತ ಕಾನೂನುಗಳ ಹೊರತಾಗಿಯೂ , ಜವಾಬ್ದಾರಿಯುತ ಅಧಿಕಾರಿಯೊಬ್ಬನ ಬೇಜವಾಬ್ದಾರಿಯಿಂದಲೇ ಪ್ರಶ್ನೆ ಪತ್ರಿಕೆಗಳು , ನಿರ್ಧಿಷ್ಟ ಪರೀಕ್ಷಾ ಸಮಯಕ್ಕಿಂತ ಮೊದಲು ಆಚೆ ಬರುತ್ತದೆ ಅಂದರೆ ಲೀಕ್ ಆಗುತ್ತದೆ ಎಂದರೆ ದೋಷವಿರುವದು ನೌಕರ ವರ್ಗದ ಕಾರ್ಯಶೈಲಿಯಲ್ಲಿ ಅಥವಾ ನೌಕರವರ್ಗವನ್ನು ಸಂಭಾಳಿಸಿ ಕೆಲಸ ತೆಗೆದುಕೊಳ್ಳಲಾಗದ ಮಂತ್ರಿಯಲ್ಲಿ !!! . ಈ ರೀತಿ ತಮ್ಮ ಅಧೀನದಲ್ಲಿರುವ ಜನರಿಂದ ನಡೆಯುವ ಸಮಾಜ ದ್ರೋಹೀ ಕೆಲಸಗಳಿಗೆ ಕಡಿವಾಣ ಹಾಕುವದನ್ನು ಬಿಟ್ಟು , ಅಧಿಕಾರಿಗಳು ನೀಡಿದ ಹುಚ್ಚು ಹುಚ್ಚು ಸಲಹೆಗಳನ್ನು ಕಣ್ಣು ಮುಚ್ಚಿ ಸ್ವೀಕರಿಸುವದು ಅಜ್ಞಾನಿ , ಸಾಮಾನ್ಯ ವ್ಯವಹಾರ ಜ್ಞಾನವೂ ಇಲ್ಲದವನೊಬ್ಬನಿಗೆ  ಮಾತ್ರ ಸಾಧ್ಯ.




ವೀಡಿಯೊ ಚಿತ್ರೀಕರಣದಂತಹ ಸಾಮೂಹಿಕ ಸನ್ನಿಯನ್ನಾಧರಿಸದೆ  , ಪ್ರಶ್ನೆ ಪತ್ರಿಕೆಗಳ ತಯಾರಿಕೆ, ಅಚ್ಚು ಹಾಕುವಿಕೆ, ಸಂಗ್ರಹ ವಿಧಾನ, ಪರೀಕ್ಷಾ ಕೇಂದ್ರಗಳಿಗೆ ಸಾಗಾಣಿಕೆ ವಿಧಾನ ಗಳಲ್ಲಿ ಹೆಚ್ಚಿನ ಅನುಭವವಿರುವ ಅಧಿಕಾರಿಗಳನ್ನೇ ಆಯ್ದು , ಪ್ರತಿಯೊಂದು ಅನಪೇಕ್ಷಿತ ಬೆಳವಣಿಗೆಗಳಿಗೂ ಅವರನ್ನೇ ಜವಾಬ್ದಾರಿಯನ್ನಾಗಿ ಮಾಡಿದರೆ , ಸಹಜವಾಗಿಯೇ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುವದು ನಿಂತುಹೋಗುತ್ತವೆ. ಈ ರೀತಿ ಸರಳ ವಿಧಾನಗಳನ್ನೇಕೆ ಅನುಸರಿಸುತ್ತಿಲ್ಲ ಎಂದು ಅಧಿಕಾರಿಗಳನ್ನು  ಜವಾಬ್ದಾರಿಯುತ ಮಂತ್ರಿಯಾಗಿ ಪ್ರಶ್ನಿಸಿ, ಕಾರ್ಯ ಸಾಧಿಸುವದನ್ನು ಬಿಟ್ಟು, ಹೆಚ್ಚು ಹೆಚ್ಚು ಸಾರ್ವಜನಿಕ ಹಣ ಹೊಡೆಯಲು ಅನುಕೂಲವಾದ  , ಹುಚ್ಚು ಹುಚ್ಚು ವಿಧಾನಗಳನ್ನು ಅನುಸರಿಸಿದರೆ, ಮಂತ್ರಿಯ ನಡೆಗಳು , ' ಹಾವು ಸಾಯುವದಿಲ್ಲ, ಕೋಲು ಮುರಿಯುವದಿಲ್ಲ " ಎಂದತಾದೀತೇ ವಿನಃ ಸಮಸ್ಯೆಗೆ ಪರಿಹಾರ ಒದಗಿಸುವದಿಲ್ಲ.




ಹರಿಹರ  ಭಟ್ , ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 16, 2013.


Saturday, March 9, 2013


ಬೋರ್ ನೀರೆತ್ತಿ ಊರಿಗೆಲ್ಲಾ ಬಿಕರಿ.

http://epapervijayavani.in/Details.aspx?id=4435&boxid=3426546


ವರದಿ ಅಧಿಕಾರಿಗಳ , ರಾಜಕೀಯ ನೇತಾರರ ಕಣ್ಣು ತೆರೆಸಬೇಕಾಗಿದೆ.


ನಮ್ಮ ದೇಶದಲ್ಲಿ ಯಾವುದೇ ಪಟ್ಟಣ ಕ್ಕೆ ಹೋದರೂ ಕಣ್ಣಿಗೆ ರಾಚುವಂತೆ ಸಮಸ್ಯೆಗಳ ಆಗರವೇ ತೋರಿಬರುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರಾಜಕೀಯ, ಅಧಿಕಾರಿ ಶಾಹಿ ವ್ಯವಸ್ತೆಯೇ ಇದೆ. ಆದರೆ ವ್ಯವಸ್ಥೆ ಮಾತ್ರ ಸರಿದಾರಿಯಲ್ಲಿ ನಡೆಯುವದೇ ಇಲ್ಲ. ಎಲ್ಲ ಸೌಲಭ್ಯಗಳು ರಾಜಕಾರಣಿಯ, ಅಧಿಕಾರಿಯ ಸಾಮಿಪ್ಯ, ಸ್ನೇಹ , ಪ್ರಭಾವ ಇದ್ದವರಿಗಷ್ಟೇ ದೊರೆಯುತ್ತಿದೆ.


ಸಮಸೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಬೇಕಾದ ಅಧಿಕಾರಿಗಳೇ ತಮ್ಮ ಕಚೇರಿಗಳನ್ನು ಬಿಟ್ಟು ಆಚೆ ಬಂದು ಸಮಸ್ಯೆಗಳನ್ನರಿಯದೆ , ಸಾರ್ವಜನಿಕರು ದೂರು ನೀಡಲಿ ಎಂದು ನಿರೀಕ್ಷಿಸುವದು ಹಾಸ್ಯಾಸ್ಪದ. ಅವಶ್ಯಕವಾದ  ಸಿಬ್ಬಂದಿ, ವಾಹನಗಳು ಈ ಎಲ್ಲ ವ್ಯವಸ್ಥೆಯ ಹೊರತಾಗಿಯೂ , ಸಮಸ್ಯೆಗಳನ್ನು ಅಲ್ಲಲ್ಲೇ, ಆಗಾಗಲೇ ಪರಿಹರಿಸದೆ , ಸಮಸ್ಯೆ ಅಗಾಧವಾಗಿ ಬೆಳೆಯಲು ಅನುವು ಮಾಡಿ ಕೊಡುವವರು ಇಂದಿನ ಅಧಿಕಾರಿ ವರ್ಗ ಮತ್ತು ಅಧಿಕಾರಿ ವರ್ಗಗಳಿಗೆ ಸಮಸ್ಯೆ ಪರಿಹರಿಸಲು ಪೂರಕ ವಾತಾವರಣಕ್ಕೆ ಅಡೆ ತಡೆ ಒಡ್ಡುವ   ರಾಜಕೀಯ ವರ್ಗ. ಇಂದಿನ ಈ ರೀತಿ ಕಲುಷಿತ ವಾತಾವರಣ ಅಸಹನೀಯ ಮತ್ತು ಶೋಚನೀಯ. ಅಲ್ಲದೆ ಪ್ರತಿಯೊಬ್ಬರೂ ಖಂಡಿಸಿದಾಗ ಮಾತ್ರ ಸ್ವಲ್ಪ ಮಟ್ಟಿಗೆ ಪರಿಹಾರ ದೊರಕುವ ಸಾಧ್ಯತೆಗಳಿವೆ.


ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ನಡೆಸಲು   ಸರಕಾರೀ ಜಾಹೀರಾತುಗಳಿಂದ, ವ್ಯಾಪಾರೀ ಜಾಹೀರಾತುಗಳಿಂದ ಹಣ ಹೊಂದಿಸಬೇಕಾಗಿದೆ.  , ಯಾವುದೋ ಒಂದೆಡೆ ರಾಜಕಾರಣಿಗಳ , ಅಧಿಕಾರಿಗಳ ಜೊತೆ ಅನಿವಾರ್ಯ ಹೊಂದಾಣಿಕೆಯೊಂದಿಗೇ ಪತ್ರಿಕೆ ನಡೆಸುವದು ವಾಸ್ತವವಾಗಿದೆ. ಹೀಗಾಗಿ ಪತ್ರಿಕೆಗಳಲ್ಲಿ ವಸ್ತು ನಿಷ್ಟ ವರದಿಗಳು , ಸತ್ಯನಿಷ್ಟ ವರದಿಗಳು  ಕಾಣುವದು ಅಪರೂಪವಾಗಿದೆ.


ಆದರೂ ವಿಜಯವಾಣಿ ಪತ್ರಿಕೆ ಈ ಮೇಲಿನ ವರದಿ ಪ್ರಕಟಪಡಿಸಲು ಕೈಗೊಂಡ ನಿರ್ಣಯ ಬಹು ಶ್ಲಾಘನೀಯ ಅಲ್ಲದೆ ಎಲ್ಲಾ ಪತಿಕೆಗಳು ಅನುಸರಿಸಲು ಯೋಗ್ಯವಾದ ಹೆಜ್ಜೆ.  ದಿನ ನಿತ್ಯ ಈ ರೀತಿ ಹತ್ತಾರು ಸಮಸ್ಯೆಗಳು ಕಣ್ಣಿಗೆ ಬಡಿಯುತ್ತಿರುತ್ತಿವೆ. ಎಲ್ಲ ಸಮಸ್ಯೆಗಳನ್ನು ಜನರ, ಅಧಿಕಾರಿಗಳ, ರಾಜಕಾರಣಿಗಳ ಗಮನಕ್ಕೆ ತಂದು ಇನ್ನೂ ಹೆಚ್ಚಿನ ಪತ್ರಿಕಾ ಸೇವೆ ವಿಜಯವಾಣಿಯಿಂದ ದೊರೆಯಲಿ, ತನ್ಮೂಲಕ ವಿಜಯವಾಣಿ ಪತ್ರಿಕೆ ಕರ್ನಾಟಕದಲ್ಲಿ ನಂಬರ್ ಒನ್ ಆಗಲಿ ಎಂದು ಆಶಿಸುತ್ತೇನೆ / ಹಾರೈಸುತ್ತೇನೆ .


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www.hariharbhat.blogspot.com
March 10 , 2013.

Wednesday, March 6, 2013


http://karavalinews.wordpress.com/2013/03/04/siddique/


ಈ ರೀತಿಯ ಲೇಖನಗಳನ್ನು ಒಂದು ಗುಂಪು ಓದುವದು, ಮತ್ತದೇ ಗುಂಪು ತನ್ನ ಶಕ್ತಿಯನ್ನು ವರ್ಧಿಸುವತ್ತ ಪ್ರಯತ್ನಶೀಲವಾಗುವದು , ಈ ರೀತಿಯ ವಿಚಾರಧಾರೆಗೆ ಒಗ್ಗದ ಗುಂಪು ತನ್ನ ಶಕ್ತಿಯನ್ನು ವರ್ಧಿಸಲು ಪ್ರಯತ್ನಶೀಲವಾಗುವದು, ಒಟ್ಟಾರೆ ಅವಕಾಶ ಸಿಕ್ಕಾಗೆಲ್ಲ ಒಂದು ಮನೋಭಾವದವರು ಇನ್ನೊಂದು   ಮನೋಭಾವದವರನ್ನು ಹೆಣೆಯಲು ಅಂದರೆ ಹೊಡೆ ಪಡೆ ಮಾಡಲು ಪ್ರಯತ್ನಿಸುವದು, ನಾವೇ ದೇಶ ಕಟ್ಟುವವರು, ನೀವು ನಾವು ಹೇಳಿದಂತೆ ಕೇಳಿ ಎಂದು ಪರಸ್ಪರ ಕೆಸರೆರಚುವದು , ಇದೇ ರೀತಿ ಸಾಗಿದೆ ಜೀವನ, ಸಮಾಜ, ದೇಶ ಬ್ರಿಟಿಶ್ ದಾಸ್ಯದಿಂದ ಬಿಡುಗಡೆಯಾದ ಮೇಲೆ.



ಚುನಾವಣೆ ಎಂಬುದು ಪ್ರತಿನಿಧಿಯನ್ನಾರಿಸುವದು  , ಆ ಪ್ರತಿನಿಧಿ ಅಯ್ಕೆಯಾದೊಡನೆ ಸರ್ವ ಜನಾಂಗದ ಪ್ರತಿನಿಧಿಯಾಗುವದು ಎಂಬ ಉದಾತ್ತ ಧ್ಯೇಯ ಹೊಂದಿದೆ ನಮ್ಮ ಸಂವಿಧಾನ. ಆದರೆ ನಿಜ ಜೀವನದಲ್ಲಿ ಅಧಿಕಾರವನ್ನು ಒಂದು ಮನೋಭಾವದವರು ಇನ್ನೊಂದು ಮನೋಭಾವದವರನ್ನು ಹತ್ತಿಕ್ಕಲು ಉಪಯೋಗಿಸುವ ಆಯುಧವಾಗಿ ಬಳಸುತ್ತಿದ್ದಾರೆ.  ಈ ಘರ್ಷಣೆಯ ಘೋರ ಪರಿಣಾಮವನ್ನು ಅನುಭವಿಸುವವರು ಜನ ಸಾಮಾನ್ಯ ಅಮಾಯಕರು. ನಮ್ಮ ವ್ಯವಸ್ಥೆಯನ್ನೇ ತಿರುಗು ಮುರುಗು ಮಾಡುವಷ್ಟು ಪ್ರಭಲವಾಗಿ ಬೆಳೆದಿದ್ದಾರೆ ರಾಜಕೀಯದಲ್ಲಿರುವ ಜನಗಳು.



ಆರೋಪ ಪ್ರತ್ಯಾರೋಪಗಳು ಬದಲಾಗುವದಿಲ್ಲ. ಅಧಿಕಾರ ದುರುಪಯೋಗದ ಕ್ರೂರ ವಿಧಾನಗಳು ಬದಲಾಗುವದಿಲ್ಲ. ಅಧಿಕಾರ ದುರುಪಯೋಗದ ವಿಧಾನಗಳು ಬೆಳಕಿಗೆ  ಬಂದರೂ , ಯಾವುದೇ ರೀತಿಯಲ್ಲಿ    ತಪ್ಪು ಭಾವನೆಗಳೇ ಜಾಗೃತವಾಗದಷ್ಟು ಕೆಟ್ಟು ಹೋದ ಮನಸ್ಸುಗಳು  ಎಂದೂ  ಬದಲಾಗುವದಿಲ್ಲ. ಬದಲಾಗುವದೇನಿದ್ದರೂ ಅಧಿಕಾರ ನಡೆಸುವ ಜನಗಳು ಮಾತ್ರ. ಚುನಾವಣೆ  ಗೆಲ್ಲುವ ರಾಜಕೀಯ ಪಕ್ಷಗಳು ಮಾತ್ರ.  ಆ ಪ್ರಮಾಣದಲ್ಲಿ ನಮ್ಮ ವ್ಯವಸ್ಥೆಯ ದುರುಪಯೋಗವಾಗಿ ಇಂದು ಆಡಳಿತ   ಅಷ್ಟು ಜಡ್ಡುಗಟ್ಟಿ , sensitivity  ಯನ್ನೇ ಕಳೆದುಕೊಂಡಿದೆ.



ಈ ರೀತಿ ಲೇಖನಗಳನ್ನು ಎಲ್ಲ ಆಯಾಮಗಳಿಂದ ಯೋಚಿಸಿದಾಗ ಯಾವುದು ಸತ್ಯ, ಯಾವುದು ಅಸತ್ಯ ಎಂದ ಜನ ಸಾಮಾನ್ಯನಿಗೆ ನಿರ್ಧಾರ ಕಷ್ಟ. ಆರಕ್ಷಕರು, ಅಧಿಕಾರಿಗಳು ಎಲ್ಲರೂ ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟದಿಂದ ಬೇಸತ್ತು , ಅಸಾಹಯಕರಾಗಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಮುಖಂಡರುಗಳು , ಅವರ ಚೇಲಾಗಳು ಹೇಳುವ  ಮಾತಿಗೆ ಗೋಣು ಆಡಿಸುತ್ತ, ನ್ಯಾಯ - ಅನ್ಯಾಯಗಳ ಯೋಚನೆ ಬದಿಗಿಟ್ಟು, ಅಧಿಕಾರದಲ್ಲಿರುವವರು ಹೇಳಿದಂತೆ ನಡೆದುಕೊಳ್ಳುತ್ತ ತಮ್ಮ ತಮ್ಮ ಕಾರ್ಯದ ಹುದ್ದೆ, ಸ್ಥಳ ರಕ್ಷಿಸುತ್ತ ದಿನ ದೂಡುತ್ತಿದ್ದಾರೆ. ಈ ದಿಶೆಯಲ್ಲಿ ಒಳ್ಳೆಯ  ತಾಜಾ ಉದಾಹರಣೆಯೆಂದರೆ , ವಾರ್ತಾ ಪತ್ರಿಕೆಗಳಲ್ಲಿ ಓದಿದಂತೆ, ಶಾಸಕನನ್ನು ಸ್ಥಳೀಯ ವೈಯಕ್ತಿಕ ಕಾರ್ಯಕ್ರಮಕ್ಕೆ ಅವ್ಹಾನಿಸಲಿಲ್ಲವೆಂದು ಪೋಲಿಸ್ ಅಧಿಕಾರಿಗೆ ಆ ಶಾಸಕನು ಸೂಚನೆಯಿತ್ತು , ಆ ಸಂಘಟಕನನ್ನು  ಠಾಣೆಯಲ್ಲಿ ಕೂಡಿಟ್ಟು ಧೈಹಿಕ ಹಿಂಸೆ ನೀಡುವ ನೀಚ ಬುದ್ಧಿಯ ಶಾಸಕ .


ಇಂದು ಈ ಬೆಳವಣಿಗೆಗಳು ಸಮಾಜದ , ಪ್ರಜಾಪ್ರಭುತ್ವದ ಯಾವ ಅಂಗಗಳನ್ನೂ ಬಿಟ್ಟಿಲ್ಲ  , ನಾಲ್ಕನೆಯ ಅಂಗ ಪತ್ರಿಕಾ ಪ್ರಪಂಚವನ್ನೂ ಒಳಗೊಂಡು , ಎಂಬುದೇ ಅತೀ ಶೋಚನೀಯ  ಸಂಗತಿ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www.hariharbhat.blogspot.com
March 07,2013.

Saturday, March 2, 2013

ಹವ್ಯಕ ಪತ್ರಿಕೆ ಸಂಪಾದಕೀಯ


ಇಂದು ಹವ್ಯಕ ಪತ್ರಿಕೆ ಕೈ ಸೇರಿದೆ. ಸಂಪಾದಕೀಯ ಓದಿದೆ.



ನಮ್ಮ ಹುಳುಕು ಕೊಳಕುಗಳನ್ನು ಸಾರ್ವಜನಿಕವಾಗಿ ತೋರಿಕೊಳ್ಳಬಾರದು, ಆಕಾಶದತ್ತ ಮುಖ ಮಾಡಿ ಉಗುಳಿದರೆ ನಮ್ಮ ಮೇಲೆ ಬೀಳುವದು ಆ ಉಗುಳು ಎಂಬ ಮಾತುಗಳನ್ನು ಉಳಿದವರಿಗೆ ಉದಾಹರಿಸುವ ನಮ್ಮ ಶ್ರೀಕಾಂತ್ ಹೆಗಡೆಯವರು ಬರೆದ ಸಂಪಾದಕೀಯ ಓದಿ , ಅಯ್ಯೋ ಪಾಪ ನಮ್ಮ ಸಮಾಜ , ಸಮಾಜ ಸಂಘಟನೆ ಈ ಸ್ಥಿತಿ ಕಾಣುವಂತಾಗಿದೆಯಲ್ಲಾ ಎಂದು ಖೇದವಾಯಿತು. ಈ ಎಲ್ಲಾ ಮಾತುಗಳು ಸಂಪಾದಕರೊಬ್ಬರ ಅಭಿಪ್ರಾಯವಾದರೆ ಸಂಪಾದಕರು ಅಥವಾ ಸಂಪಾದಕೀಯ ಮಂಡಲಿಯ ಮಾತುಗಳಾದರೆ ಸಂಪಾದಕ ಮಂಡಲಿ ಒಟ್ಟಾರೆ ಯೋಚಿಸಬಹುದು ಜೊತೆಗೆ ಪ್ರತಿಕ್ರಿಯೆಗಳಿಗೂ ಸ್ವಾಗತ.



ನೀವೆಲ್ಲ ಈ ಸಂಪಾದಕೀಯ ಓದಿರಬಹುದು. ಓದಿಲ್ಲದಿದ್ದರೆ ಒಮ್ಮೆ ಓದಿ. ಬೆಳವಣಿಗೆ ಎಂಬುದು ನಿಂತ ನೀರಿನಂತಲ್ಲ. ಎಲ್ಲಿ ಒಳ್ಳೆಯ ಗುಣಗಳು, ಬದಲಾವಣೆಗಳಿಗೆ ಒಗ್ಗಿಕೊಳ್ಳುವ ಮನಸ್ಸುಗಳುಳ್ಳ  ಮುಂದಾಳತ್ವವಿರುವದೋ ಅಲ್ಲಿ, ಆ ಸಂಸ್ಥೆಗಳು ಬೆಳವಣಿಗೆಯ ಓಘ ಕಾಣುತ್ತವೆ. ಇಲ್ಲದಿದ್ದರೆ ಕಾಲ ಕ್ರಮೇಣ ಈ ರೀತಿ ಅಲವತ್ತುಕೊಳ್ಳುವ ಸ್ಥಿತಿ ತಲುಪುತ್ತವೆ .  ಆ ರೀತಿಯ ದನನೀಯ ಸ್ಥಿತಿಯಲ್ಲಿಯೂ ತನ್ನನ್ನು/ ತಮ್ಮನ್ನು ಹೊರತುಪಡಿಸಿ ಉಳಿದವರೆಡೆಗೆ ಆರೋಪದ ಬೆರಳು ತೋರುವದಿದೆಯಲ್ಲಾ ಅದು , ಇಂಗ್ಲಿಶ್ನಲ್ಲಿರುವ  ಗಾದೆ ಮಾತಿನಂತೆ " ಕೊನೆಯ ಮೊಳೆ ಹೊಡೆಯುವ ಕಾರ್ಯ ".  ಹೇಗೆ ಯೋಚಿಸೋಣ.



ನಾವು ನಮ್ಮ ಭವಿಷ್ಯವನ್ನು ಇಂದು ಕಾಣ ಹೊರಟಿರುವದು ಯಾವ ಜನಾಂಗ ( generation  ) ಅಂದರೆ ಇಂದು ಮೂವತ್ತರಿಂದ ಐವತ್ತು ವರ್ಷಗಳಲ್ಲಿರುವವರು, ಸಾಮಾನ್ಯವಾಗಿ ಮನೆಯಿಂದ ಹೊರದೂಡಲ್ಪಟ್ಟವರೋ , ಇಲ್ಲ ಹೊರ ಪ್ರಪಂಚದಲ್ಲಿ ಅವಕಾಶಗಳಿದ್ದು ಹೋಗಿ ನಿನ್ನ ಜೀವನ ಕಂಡುಕೋ , ಎಂದು ಹೊರದಬ್ಬಲ್ಪಟ್ಟವರೋ,  ಮನೆ ಮಾಣಿ ಪ್ರಯೊಜನಕ್ಕಿಲ್ಲೇ , ನಿದ್ದಂಡಿ ಎಂಬ ಮೂದಲಿಕೆಗಳಿಗೊಳಗಾಗಿ ಮನೆಯಿಂದ ಓಡಿ ಹೋಗಿ ಜೀವನ ಕಂಡುಕೊಂಡವರೋ, ಊರಿಗೆ - ಕೇರಿಗೆ ಮಠದ ಸ್ವಾಮಿ - ಗುರುಗಳು ಬಂದಾಗ, ಸಹಜ ಬಾಲ್ಯ- ಯೌವನ ಕುತೂಹಲಗಳಿಂದ ಹಾಗೇಕೆ- ಹೀಗೇಕೆ ಎಂದು ಪ್ರಶ್ನಿಸಿ ಮೂದಲಿಕೆ, ಬಹಿಷ್ಕಾರಗಳಿಗೆ   ಒಳಗಾಗಿ ಊರು ಬಿಟ್ಟವರೋ , ಮಟ ಮಟ ಮಧ್ಯಾಹ್ನ - ನಡುರಾತ್ರಿ ಎಲ್ಲೋ ಅಪರೂಪಕ್ಕೆ ಕಾಣಬರುವ ತಮ್ಮ ಜಾತಿಯ ಹಿಂದಿನ ತಲೆಮಾರುಗಳ ಜನ ಊರು ಬಿಟ್ಟವರು ಪಟ್ಟಣ ಸೇರಿ ನೆಲೆಸಿದ್ದಾರೆ, ಟೀಕ್ - ಟಾಕ್ ಆಗಿ  ಊರಿಗೆ ಬಂದಾಗ ತಮಾ ನೀ ಮುಂಬೈ - ಬೆಂಗಳೂರಿಗೆ ಬಾರೋ ಬೇಕಾದಷ್ಟು ಕೆಲಸಾ ಸಿಗ್ತೋ, ಕೆಲ್ಸಾ ಕೊಡ್ಸಾನೋ .....  ಎಂಬ ತರಹೇವಾರಿ ನಗುಗಳಿಗೆ ಜೋತುಬಿದ್ದು , ಯಾರ್ಯಾರನ್ನೋ ಕೇಳಿ, ಅಲೆದು ಅಲೆದು ಮನೆ ಕಂಡು ಹಿಡಿದು ಹೋದಾಗ , ಈಗೆಲ್ಲೋ ಒಮ್ಮೆಲೇ ಕೆಲಸಾ ಸಿಗ್ತೋ, ಮುಂದಿನ   ವಾರ ಬಾ  ಎಂದು ಬಾಗಿಲು ಮುಚ್ಚಿದಾಗ, ಪಟ್ಟಣದಲ್ಲಿ ನೆಲೆಯಿಲ್ಲದ, ಜೋಬಿನಲ್ಲಿ ಕಾಸಿಲ್ಲದ , ಮನೆಗೆ ವಾಪಸ್ಸಾಗಲು ಸಾಧ್ಯವಾಗದ ಆ ತೆಜೋಹೀನ  , ಉಸಿರಷ್ಟೇ ಹಿಡಿದಿರುವ , ಜೀವನದಲ್ಲೆಲ್ಲೂ ಆಸೆಯ ಪಸೆಯೇ ಕಾಣದ ಹವ್ಯಕ ಕುಡಿಗಳೇ, ತಮ್ಮ ಸ್ವಸಾಮರ್ಥ್ಯದಿಂದ , ಯಾರನ್ನೋ ಬೇಡಿ - ಕಾಡಿ , ಹೇಗೊ ಜೀವನದ ಒಂದೊಂದೇ ಮೆಟ್ಟಿಲುಗಳನ್ನೆರುತ್ತ ಸಾಗಿ ಬಂದು ಇಂದು ಸಮಾಜದಲ್ಲಿ ಗೌರವಾನ್ವಿತ ವಿವಿಧ ಸ್ಥಾನಗಳಲ್ಲಿ ವಿಝೃಂಭಿಸುತ್ತ , ಹೇರಳವಾಗಿ ಆರ್ಥಿಕ ಸಾಮರ್ಥ್ಯವನ್ನು ಪಡೆದು ತಮ್ಮ ಪಾಡಿಗೆ ತಾವೇ ಬದುಕುತ್ತಿರುವ ಹವ್ಯಕ ಜನ ಸಂಖ್ಯಾ ಸಮೂಹವನ್ನು ಉದ್ದೇಶಿಸಿ ಬರೆದ ಮಾತುಗಳಲ್ಲವೇ? , ಈ ಸಂಪಾದಕೀಯದಲ್ಲಿದ್ದುದು .




ಈ ಅಭಿಪ್ರಾಯಗಳೆಲ್ಲ ಪುಂಡು ಪೋಕರಿಗಳ ಮಾತು, ಕೆಲಸವಿಲ್ಲದವರ ತೆವಲುಗಳು, ನಾವೇ ಸಮಾಜದ ಉದ್ಧಾರಕರು, ನಮ್ಮ ಹಿಂದೆ ಹೆಜ್ಜೆ ಹಾಕಿ ಎಂಬ ಅಣಿಮುತ್ತುಗಳನ್ನುದುರಿಸುವವರು   ಆತ್ಮ ಸ್ಥೈರ್ಯ, ಧೈರ್ಯಗಳಿದ್ದರೆ ಸಾರ್ವಜನಿಕವಾಗಿ ಸಾರಾ ಸಗಟಾಗಿ  ಘೋಷಿಸಲಿ - ಸಮಾಜದ ಎಷ್ಟು ಸದಸ್ಯರಿಗೆ ಸಂಘಟನೆಯಿಂದ ನೈಜ ಅನುಕೂಲ ಒದಗಿಬಂದಿದೆ? ಎಷ್ಟು ಹವ್ಯಕ ಕುಡಿಗಳಿಗೆ ನೂರಿನ್ನು, ಸಾವಿರ ರೂಪಾಯಿಗಳ ದೈನೇಸಿ ಭಿಕ್ಷಾ ರೂಪದ ಕಾಂಚಾಣ ಒದಗಿಸುವ ಬದಲು , ಇಂದಿನ ಕಾಲಕ್ಕನುಗುಣವಾಗಿ ಐದು ಗುಂಟೆ - ಹತ್ತು ಗುಂಟೆ ತೋಟವಿರುವ , ದಿನ ಗೂಲಿ ಮಾಡಿ ಜೀವನ ಸಾಗಿಸುತ್ತಿರುವ ತಂದೆ ತಾಯಿತರ ಹೊಟ್ಟೆಯಲ್ಲಿ ಹುಟ್ಟಿ ಇಂಜಿನಿಯರಿಂಗ್ , ಮೆಡಿಕಲ್ ಸೀಟ್ ಗಿಟ್ಟಿಸಿದ ಯಾವ ಹವ್ಯಕ ಕುಡಿಗೆ ಸಂಪೂರ್ಣ  ಸಹಾಯ ಮಾಡಿದ ಇತಿಹಾಸವಿದೆ? ಇಂದಿನ ದಿನದಲ್ಲಿ ಎಲ್ಲರಿಂದ ಜಾಣ ಎನಿಸಿ, ಶಾಲೆಯ ಮಕ್ಕಳೆಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ  ಪಡೆದು, ಶಿಕ್ಷಣ ಮುಂದುವರೆಸಲಾಗದ ಹವ್ಯಕ ಮಕ್ಕಳೆಷ್ಟು ಮಂದಿಗೆ ಅವಶ್ಯಕ ಪೂರ್ಣ ಧನ ಸಹಾಯ ಮಾಡಿದ ಇತಿಹಾಸವಿದೆ? ಯಾರ್ಯಾರದೋ ಕಾಲುಹಿಡಿದು ಕೈ ಮುಗಿದು ಹೇಗೇಗೋ ಹಣ ಹೊಂದಿಸಿ ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ ಓದಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಅಲೆಯುವ ಹವ್ಯಕ ಎಷ್ಟು ಮಾಣಿಗಳಿಗೆ, ಕೂಸುಗಳಿಗೆ ಈ ಸಂಘಟನೆಗಳು, ಮುಂದಾಳುಗಳು ಆರಂಭದ ಅವಶ್ಯಕ ನೆಲೆ ನೀಡಿದ್ದಾರೆ? ಹವ್ಯಕ ಜ್ವಲಂತ ಸಮಸ್ಯೆಗಳು ಎಂದು ನಗರ , ನಗರ ಗಳಿಗೆ ಪ್ರಯಾಣಿಸಿ ಸಂಘಟನೆಯ ಹಣ ವನ್ನು ಪೋಲು ಮಾಡಿ ತಮ್ಮ ಮುಖ ಸ್ತುತಿ  , ತಮ್ಮ ತೆವಲುಗಳನ್ನು ಪೂರೈಸುವದನ್ನು ಬಿಟ್ಟು ಇನ್ಯಾವ ಸಾಧನೆ, result , ಸಮಾಜದ ಯಾವ ಸಮಸ್ಯೆ ಪರಿಹಾರವಾದ ಇತಿಹಾಸವಿದೆ? ................ ಈ ಎಲ್ಲ ಸಾಧನೆಗಳನ್ನು (result) ಪತ್ರಿಕೆ ಹೊರತರಲಿ, ಕೇವಲ ಹತ್ತಾರು ಜನರ ಸುತ್ತ ಗಿರಗಟ್ಟಲೆ  ಹೊಡೆಯುತ್ತಿರುವದನ್ನು   ಬಿಟ್ಟು , ಪತ್ರಿಕೆ ಸಮಾಜದ ಸಾರ್ವತ್ರಿಕ , ಸರ್ವಸದಸ್ಯರ ಪ್ರತಿನಿಧಿಯಾಗಲಿ. ಮುಖ ಪತ್ರಿಕೆ ಯೊಂದು  ಮುಖ ಸ್ತುತಿ ಪತ್ರಿಕೆಯಾಗಿ ಮಾರ್ಪಡುತ್ತಿರುವದು ಶೋಚನೀಯ, ಖಂಡನೀಯ.




ಹವ್ಯಕ ಸಮಾಜ ಸೊರಗಿಲ್ಲ. ಬಲಿತಿದೆ. ಬಲಿಯುತ್ತಿದೆ. ಸಂಪಾದಕರು ಅಲವತ್ತುಕೊಂಡಂತೆ ಸಮಾಜ ಭಾಂಧವರು ಈಗಿರುವ ಸಂಘಟನೆಗಳು, ಮುಂದಾಳುಗಳು, ನೇತ್ರತ್ವವಹಿಸಿರುವ ಸನಾತನಿಗಳು ಎಲ್ಲರಿಂದ ದೂರ ಓಡುತ್ತಿದ್ದಾರೆ,  ಸಮೀಪ ಬರಲು ಬಯಸುತ್ತಿಲ್ಲ, ಸಮೀಪ ಬಂದವರು ಇನ್ನೊಮ್ಮೆ ಅತ್ತ ತಲೆ ಹಾಕಿಯೂ ಮಲಗುತ್ತಿಲ್ಲ  , ತಮ್ಮ ಪಾಡಿಗೆ ತಾವು ಸಮಷ್ಟಿಯಲ್ಲಿ ಸಮಾಧಾನಕರ ಜೀವನ ಕಂಡುಕೊಂಡು ತಮ್ಮ ಇತಿ ಮಿತಿಯೊಳಗೆ ತಮ್ಮ ಮುಂದಿನ ಜನಾಂಗವನ್ನು ಬೆಳೆಸುತ್ತಿದ್ದಾರೆ. ಇಂದಿನ ಸಮಾಜ ಮುಖಂಡರುಗಳು ಈ ಬೆಳವಣಿಗೆಗಳನ್ನು ಮೂದಲಿಸುತ್ತ , ತಮ್ಮಂತೆ ತೋರಿಬರುವ ನೂರಾರು ಜನರೊಂದಿಗೆ ತಮ್ಮದೇ ಲೋಕ ಸೃಷ್ಟಿಸಿಕೊಂಡು , ತಮ್ಮ ಹಿಂದಿನ ಪರಂಪರೆಯ ಯಜಮಾನರುಗಳೇ ತಾವೆಂದು ಬೀಗುತ್ತ, ಮುಖ ಪತ್ರಿಕೆಯೆಂಬ ಹಣೆಪಟ್ಟಿಯೊಂದಿಗೆ ಮುಖಸ್ತುತಿ ಪತ್ರಿಕೆಯನ್ನು ಹೊರತರುತ್ತ ,  ಸಮಷ್ಟಿಗೆ, ತಾವೇ ನಾಲ್ಕೈದು ಲಕ್ಷ ಜನಸಂಖ್ಯೆಯಿರುವ ಹವ್ಯಕ ಸಮಾಜಕ್ಕೆ ಮುಖಂಡರುಗಳು ಎಂದು ಕೃತಕ ಬಿಂಬ ಜಾಲ ತೋರ್ಪಡಿಸುತ್ತ, ಸರಕಾರದ, ಉಳಿದ ಸಮಷ್ಟಿಯ ಸಾಂಘಿಕ ಚಟುಬಟಿಕೆಗಳಲ್ಲಿ ತಾವೇ ಸಮಾಜದ ಪ್ರತಿನಿಧಿಗಳು ಎಂದು ಬೀಗುತ್ತ, ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಕಡೆ ಗಮನವಿಟ್ಟು , ಏನೆಲ್ಲಾ ಸಾಧ್ಯವಾದೀತೋ ಈ ಬಿಂಬ ಜಾಲದಿಂದ ಅವುಗಳನ್ನು ವೈಯಕ್ತಿಕ ಹಿತ ಚಿಂತನೆಗೆ ಬಳಸಿಕೊಳ್ಳುತ್ತ ಸಾಗಿರುವ , ಕೆಲವು ದಶಕಗಳಲ್ಲೇ ಇತಿಹಾಸವಾಗಲಿರುವ ಇಂದಿನ ನೇತಾರರು, ಅಲವತ್ತುಕೊಳ್ಳುವ ಸ್ತಿತಿ ತಲುಪಿರುವದು , " ನಾ ಮಾಡಿದ ಕರ್ಮ  ಬೆನ್ನ ಬಿಡದಿಹುದೇ" ಎಂಬ ದಾಸವಾಣಿಯನ್ನು   ನೆನಪಿಗೆ ತರುವದು.




ಹಾಗಾದರೆ ಮುಂದಾಳು   ಎನಿಸಿಕೊಳ್ಳುವವನು ಏನು ಮಾಡಬೇಕು? ಅವುಗಳೆಲ್ಲವನ್ನು ನಮ್ಮ ಹವ್ಯಕ ಸಮಾಜದ ನಿಜ ನೇತಾರರು ನಮಗೆ ಜ್ಞಾನರೂಪದಲ್ಲಿ   ಬಿಟ್ಟು ಹೋಗಿದ್ದಾರೆ. ಮನುಷ್ಯ ಹಿರಿತನದತ್ತ ಸಾಗಿದಂತೆಲ್ಲ ಮಾವು ಫಲ ಭರಿತವಾಗಿ ಬಾಗಿ ತೊನೆಯುವಂತೆ ವ್ಯಕ್ತಿತ್ವ, ವ್ಯಕ್ತಿತ್ವ ಪ್ರಕಾಶನ ಇರಬೇಕು. ಇಂದು ಅರವತ್ತು - ಎಂಭತ್ತು  ವಯೋಮಾನದಲ್ಲಿರುವವರನ್ನೊಮ್ಮೆ   ಮಾತನಾಡಿಸಿದರೆ ಅರಿವಿಗೆ ಬರುವದು. ಕೇವಲ ಕೆಲಸದ ಆಸೆಯಿಂದ ತನ್ನ ಮತ್ತು ತನ್ನ ಅವಲಂಬಿತರ  ಉದರ   ಪೋಷಣೆಗಾಗಿ ಬರುವ ಕೊನೆ ಕೊಯ್ಲು ಮಾಡುವವನನ್ನು , ಮನೆ ಮಂದಿಗೆ ತೋರುವ ಆದರ , ಸತ್ಕಾರ ತೋರಿ ಆ ಮನುಷ್ಯ  ತನ್ನ ಮನೆಯ ಕೆಲಸದಂತೆ ವಡೆಯನ ಮನೆಯ ಕೆಲಸ ಮಾಡಿ, ಮನೆ ಮಂದಿಗಳನ್ನೆಲ್ಲಾ ವಿಶ್ವಾಸದಿಂದ, ಗೌರವದಿಂದ ಕಂಡು ಪರಿಶ್ರಮ ಮಾಡುತ್ತ, ಮತ್ತೂ ಬರಲಿ - ಇನ್ನೂ ಬರಲಿ, ಮತ್ತೆ ಈ ಸ್ಥಳಕ್ಕೆ   ಬರಬೇಕು, ಇನ್ನೂ ಈ ಸ್ಥಳಕ್ಕೆ  ಬರಬೇಕು ಎಂಬಂತಹ  ಭಾವನಾತ್ಮಕ ಪ್ರಪಂಚವನ್ನೇ ಬೆಸೆದು ಹವ್ಯಕ  ಕುಟುಂಬಗಳಿಗೆ  ಮುಂದಾಳತ್ವ  ನೀಡಿ , ಎರಡು ಮೂರು ತಲೆಮಾರುಗಳಿಗೆ ತಮ್ಮ ಸಿಹಿ ನೆನಪುಗಳನ್ನು ನೀಡಿದ ಹವ್ಯಕ ಮುಖಂಡರುಗಳೆಲ್ಲಿ ? ಇಂದು ದಿನ ನಿತ್ಯದ ಸಮಷ್ಟಿಯ ರಾಜಕೀಯವನ್ನು ಮೀರಿಸಿ, ಒಬ್ಬರ ಕಾಲು ಮತ್ತೊಬ್ಬರೆಳೆಯುವ ಹವ್ಯಕ ಮುಖಂಡರುಗಳೆಲ್ಲಿ?




ಈ ಮಾತುಗಳೆಲ್ಲ ನಿಮಗೆ ಅಸಹನೀಯವೆನಿಸಿದರೆ, ನಿಮಗೆ ವೈಯಕ್ತಿಕವಾಗಿ ಪರಿಚಯವಿರುವ ಇಂದಿನ ಸ್ವಘೋಷಿತ ಮುಖಂಡರುಗಳನ್ನೊಮ್ಮೆ ಕೇಳಿ ನೋಡಿ : ಇಂದು ಹವ್ಯಕರು ಒಟ್ಟಾರೆ ಸಮಾಜದ ಎಲ್ಲ ಸ್ಥರಗಳಲ್ಲಿ ಅವರವರ ವೈಯಕ್ತಿಕ ಸಾಧನೆಗಳಿಂದ, (ಈ ಮುಖಂಡರುಗಳ ಕೃಪೆಯಿಂದಲ್ಲ ನೆನಪಿರಲಿ ) ಮಿಂಚುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಈ ಸ್ವಘೋಷಿತ ಮುಖಂಡರುಗಳು ಸಮಾಜದ ಪ್ರತಿನಿಧಿಯಾಗಿ ಎಷ್ಟು ಜನ ಈ ರೀತಿಯ ಸಾಧನೆ ಮಾಡಿದ ಹವ್ಯಕರ ವೈಯಕ್ತಿಕ ಭೇಟಿಗೆ ಪ್ರಯತ್ನಿಸಿದ್ದಾರೆ, ಯಾವ ಯಾವ ಹವ್ಯಕ ಸಾಧಕರನ್ನು, (ಈ ರೀತಿಯ ಸಾಧಕರೇ   ಹೊರತು ಸ್ವಘೊಷಿತ ಮುಖಂಡರುಗಳ ಸುತ್ತ ಭೂ ಚಕ್ರದಂತೆ ಸುತ್ತುವವರನ್ನಲ್ಲ), ಹವ್ಯಕ ಮುಖಪತ್ರಿಕೆಯಲ್ಲಿ ಪ್ರಚುರ ಪಡಿಸಿದ್ದಾರೆ  ? ಕೇಳಿ ನೋಡಿ.




ಈ ಬರಹ ವನ್ನು ಹವ್ಯಕ ಮುಖಪತ್ರಿಕೆಯಲ್ಲಿ ಪ್ರಕಟಿಸಲಿ. ಹವ್ಯಕ ಸಮಷ್ಟಿಯ ವಿವಿಧ ಸ್ಥರಗಳಲ್ಲಿರುವವರೆಲ್ಲಾ ಈ ಅಭಿಪ್ರಾಯ ಖಂಡನೀಯ, ಸುಳ್ಳು ಎಂದು ಎಲ್ಲ ಸಮಾಜ ಬಾಂಧವರು ಸಮಾಜದ ಸಂಘಟನೆಗಳಲ್ಲಿ ತನು-ಮನ-ಧನ ತೊಡಗಿಸಿಕೊಂಡು  ಸಮಾಜ  ಸಂಘಟಾನ್ಮತ ಚಟುವಟಿಕೆಗಳಲ್ಲಿ ಕ್ರೀಯಾಶೀಲವಾಗಲಿ ಅಥವಾ  ವಿವಿಧ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಾವಿರುವಲ್ಲಿ ಎಲ್ಲರು ಬರಲಿ ತನ್ನ ಹಿಂದೆ ಸರತಿ ನಿಲ್ಲಲಿ ಎಂಬ ಮನೋಭಾವನೆಯ ಹಂದರದಿಂದ ಸ್ವಘೋಷಿತ ಮುಖಂಡರುಗಳು ಹೊರಬಂದು , ಮೊದಲು ನೀವು ಆಮೇಲೆ ನಾವು ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಸಕಲ ಹವ್ಯಕರನ್ನೂ ಒಗ್ಗೂಡಿಸುವತ್ತ, ಸರ್ವಸಾಮಾನ್ಯರೂ  ನಮ್ಮ ಸಂಘಟನೆ ಎಂದು ಅಭಿಮಾನದಿಂದ ಎದೆಯುಬ್ಬಿಸಿ ಹೇಳಲು ಅನುವುಮಾಡುವತ್ತ ಕಾರ್ಯಪೃವ್ರತ್ತರಾಗಲಿ , ಹಾಗಾಗಲಿ  ಇಲ್ಲ  ಹೀಗಾಗಲಿ ಒಟ್ಟಾರೆ ಆರ್ಥಿಕವಾಗಿ ದುರ್ಬಲನಾಗಿರುವ ಕಟ್ಟ ಕಡೆಯ ಹವ್ಯಕನೂ ನೆಮ್ಮದಿಯಿಂದ ಬಾಳುವಂತಾಗಲಿ , ಅಸಹನೀಯವಾಗಿ  ಬದುಕನ್ನು ಸವೆಸುತ್ತಿರುವವರ ಹವ್ಯಕ ಕುಡಿಗಳ ಶ್ರೆಯೋಭಿವೃದ್ಧಿಯಾಗಲಿ   ಎಂಬುದೇ ಹಾರೈಕೆ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www.hariharbhat.blogspot.com
March 03 , 2013.

ಇಂದಿನ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಮ್ಮೆ ಅವಲೋಕಿಸಿ.


ಇಂದಿನ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಮ್ಮೆ  ಅವಲೋಕಿಸಿ. ಮೊದಲನೇ ಕಾರ್ಯಕ್ರಮಕ್ಕೆ ಹೋದಾಗ ನೀಡುವ ಸಮಾಧಾನ ಎರಡನೇ ಕಾರ್ಯಕ್ರಮಕ್ಕೆ ಹೋದಾಗ ನೀಡುವದೇ ಇಲ್ಲ. ಎರಡನೆ, ಮೂರನೇ .... ಹೀಗೇ ಅನುಕ್ರಮವಾಗಿ ಅದೇ ಅಭಿರುಚಿಯ, ಅದೇ ಸಂಘಟಕರ ಕಾರ್ಯಕ್ರಮಗಳಿಗೆ ಹೋದಾಗ ಕಾರ್ಯಕ್ರಮ ಸಂಘಟಕರಲ್ಲಿ ಢಾಳಾಗಿ ಕಾಣಬರುವ ಆಸಕ್ತಿ ಕೊರತೆ, ಮಾಯವಾಗಿರುವ ಕಾರ್ಯಕ್ರಮ ವೈವಿಧ್ಯತೆ, ಬಹುಮಟ್ಟಿಗೆ ಎಲ್ಲೆಡೆ ಕಂಡು ಬರುವ ಅದೇ ಪ್ರೇಕ್ಷಕ ವರ್ಗ , ಕಾರ್ಯಕ್ರಮಗಳೆಲ್ಲ ಇಂದು ಕೇವಲ ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳಾಗಿ ಫೈಲ್ ಗಳಲ್ಲಿ ಕೂತಿರುವ ಅವೇ ನೀರಸ ವೋಚರ್ ಗಳು , ಡಿವಿಡಿ ಗಳು , ಅಲ್ಲಿಂದ ದೊರಕುವ ಹಣ ಇಷ್ಟಕ್ಕಾಗಿಯೇ ಎಲ್ಲ ಶ್ರಮ ವ್ಯಯವಾಗುತ್ತಿದೆಯೋ ಎನಿಸುತ್ತದೆ.



ನಾನು ಕೆಲವು ಸುಗಮ ಸಂಗೀತ ಕಾರ್ಯಕ್ರಮಗಳನ್ನು ಆಸ್ವಾದಿಸಬಯಸಿ ಹೋಗುತ್ತಿದ್ದೇನೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಅದೇ ವ್ಯವಸ್ಥೆ , ಅದೇ ರಂಗ ಪರಿಕರ ಸಾಮಾನ್ಯ . ಆದರೆ ಕಲಾವಿದರಲ್ಲೂ ಅದೇ ನಿರ್ಜೀವ ವಸ್ತುಗಳ ತಾಳ ಸಮ್ಮಿಳನ. ಆಧುನಿಕ ಸಂಗೀತ ಮುದ್ರಿಕೆಗಳಂತೆ ಅದೇ ಏಕ ತಾನತೆ. ಸ್ವರ ಏರುವದೆಂದರೆ   ಅರಚುವದೊಂದೇ ವಿಧಾನ ಎಂಬಂತೆ , ಜನ ಮಾನಸದಲ್ಲಿ ಶ್ರೇಷ್ಟ ಕವಿಗಳೆಣಿಸಿದವರ ಕವನಗಳನ್ನೆತ್ತಿಕೊಂಡು , ಪ್ರಸ್ತುತಪಡಿಸುವ ವಿಧಾನ ಸಂಘಟಕರಿಗಷ್ಟೇ ಪ್ರೀತಿ. ಈ ಅಭಿಪ್ರಾಯಕ್ಕೆ ಪುಟವಿಟ್ಟಂತೆ , ಬಲವಂತವಾಗಿ ಪ್ರೇಕ್ಷಕರನ್ನು ಪೀಡಿಸಿ ಚಪ್ಪಾಳೆ ತಟ್ಟಿಸುವ ಕಾರ್ಯಕ್ರಮ ನಿರ್ವಾಹಕರು.




ನೀವು ನಾಲ್ಕಾರು ಕಾರ್ಯಕ್ರಮಗಳಿಗೆ ಹೋಗಿ ಬಂದರೆ ದೊರಕುವ ಅನುಭವಗಳೆಂದರೆ ಬೆಂಗಳೂರಿನ ತುಂಬೆಲ್ಲ ಈ ರೀತಿ ಜಾಲವೇ ಹರಡಿದೆ.  ಒಬ್ಬರು ಇಬ್ಬರು ಕಾರ್ಯಕ್ರಮ ನಿರ್ವಾಹಕರು, ನಾಲ್ಕಾರು - ಎಂಟು ಹತ್ತು ಕಲಾಕಾರರು, ಒಂದೆರಡು ಫೋಟೋ- ವಿಡಿಯೋ ಗ್ರಾಫರ್ಗಳು , ಪೂರಕವಾಗಿ ಬಿಲ್ಲು ಬರೆದು, ಹಣ ನೀಡಲು ಒಬ್ಬಿಬ್ಬರು ಕಲಾ ಸಂಸ್ಕ್ರತಿ  ಇಲಾಖೆಯ ಸರಕಾರೀ ಅಧಿಕಾರಿಗಳು , ಆ ಅಧಿಕಾರಿಗಳೇ ಅಥವಾ ಆ ಅಧಿಕಾರಿಗಳಿಂದ ಸೂಚಿಸಲ್ಪಟ್ಟ  ಅತಿಥಿಗಳು ಈ ರೀತಿ ಒಂದು ವ್ಯವಸ್ತಿತ ವ್ಯವಸ್ಥೆ ಎನ್ನಬಹುದೋ, ಸಂಚು ಎನ್ನಬಹುದೋ ಒಟ್ಟಾರೆ ಸರಕಾರದ ಕಲಾ ಸಂಸ್ಕ್ರತಿ ಪ್ರೋತ್ಸಾಹದ ವಿಡಂಬನೆ.




ಈ ರೀತಿ ವ್ಯವಸ್ತಿತ ಜಾಲ ಇಂದು ಬೆಂಗಳೂರಿನಲ್ಲಿ ಎಲ್ಲೆಡೆ ಹಬ್ಬಿದೆ. ರಾಜ್ಯೋತ್ಸವ , ಅಣ್ಣಮ್ಮದೇವಿ ಕಾರ್ಯಕ್ರಮಗಳಿಂದ ಹಿಡಿದು ಪ್ರತಿ ಸಮಾಜದಲ್ಲಿ ನಡೆಯುವ, ಶಾಲಾ ವಾರ್ಷಿಕೋತ್ಸವದ ಅಣುಕುಗಳಂತಿರುವ, ಸಾಂಸ್ಕ್ರತಿಕ ಕಾರ್ಯಕ್ರಮಗಳೂ ಇದೇ ರೀತಿ ಹಳ್ಳ ಹಿಡಿದಿವೆ. ಯಾವ ಕಲಾ ಪ್ರಕಾರಗಳನ್ನೂ ಈ ಚಾಳಿ ಬಿಟ್ಟಿಲ್ಲ.  ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಒಂದು ಆರೋಹಣ , ಅವರೋಹಣಗಳಿಗೆ ಇಪ್ಪತ್ತು ನಿಮಿಷ ನಲವತ್ತು ನಿಮಿಷಗಳು ಬೇಕಿದ್ದಲ್ಲಿ ಐದರಿಂದ ಎಂಟು ನಿಮಿಷಗಳಲ್ಲೇ ಆರೋಹಣ , ಅವರೋಹಣ ಮಾಡಿ ಸಂಗೀತದ ಕೊಲೆಯೇ ನಡೆದು, ಹೊಸದಾಗಿ ಬರುವ ಸಂಗೀತಾಸಕ್ತರಿಗೆ ಇದೇ ಶಾಸ್ತ್ರೀಯ ಸಂಗೀತ ಎಂಬ ಭಾವ ತುಂಬುವ ಸರಕಾರೀ ಬಿಲ್ಲು ಪ್ರಾಯೋಜಿತ ಸಂಘಟನೆಗಳೇ ಇಂದು ಬೆಂಗಳೂರು ತುಂಬಿವೆ. ಎಂಟು ಹತ್ತು ತಾಸುಗಳಲ್ಲಿ ಆಸ್ವಾದಿಸಬೇಕಾದ ಕಲಾ ಪ್ರಕಾರದ ರಾಗ, ತಾಳ, ಲಯಗಳನ್ನು ಎರಡು ಮೂರು ತಾಸುಗಳಲ್ಲಿ ತುರುಕಿ ವಿವಿಧ ತಾಳ, ಲಯ, ಯಮನ್ , ಝಲಕ್ ಗಳನ್ನು ತುರುಕಿ ಪ್ರೆಕ್ಷಕನಿಗೋಸ್ಕರ ಎಂಬ ಹಣೆಪಟ್ಟಿ ಹಚ್ಚಿ ವ್ಯವಸ್ತಿತವಾಗಿ ಕಲೆಯ ಕೊಲೆಯೇ ಶಾಂತವಾಗಿ ನಡೆಯುತ್ತಿದೆ.




ಇದೇ ರೀತಿ ಯಕ್ಷಗಾನದ ಪ್ರಕಾರಗಳೂ ಇದೇ ದಾರಿ ಹಿಡಿದಿವೆ. ಪ್ರೇಕ್ಷಕನಿಗೋಸ್ಕರ  ಸಮಯ ಮಿತಿ ಪ್ರಸಂಗಗಳು ಎಂಬ ಹಣೆ ಪಟ್ಟಿಯೊಂದಿಗೆ  ಪ್ರದರ್ಶನ ಗೊಳ್ಳುವ ಆಖ್ಯಾನಗಳು, ಒಣಗಿಸಲು ಬಿಚ್ಚಿಟ್ಟ ಹರುಕು   ಸೀರೆಯ ತೇಪೆಗಳಂತೆ, ಭಾಸವಾಗುತ್ತಿವೆ. ರಣ ರಂಗದಲ್ಲಿ ಸೋತು ಜರ್ಜರಿತವಾದ ಧುರ್ಯೋಧನನು ವೈಶಂಪಾಯನ ಕೊಳವನ್ನು ಪ್ರವೇಶಿಸುವ ಮುನ್ನ ರಚಿಸಬೇಕಾದ ರಂಗ ಸನ್ನಿವೇಶಗಳಿಗೆ, ರಂಗ ಭಾವಗಳಿಗೆ, ರಂಗ ಭಾವನೆಗಳಿಗೆ,  ಪ್ರೇಕ್ಷಕನು  ಪಡೆಯಬೇಕಾದ ಈ ಎಲ್ಲ ಅನುಭೂತಿಗಳಿಗೆ ಭಾವ ತುಂಬಲು ಅಂದಿನ ಹಿರಿಯ ನುರಿತ ಕಲಾವಿದರೇ ಎರಡು ಮೂರು ತಾಸುಗಳನ್ನು ತೆಗೆದುಕೊಳ್ಳುತ್ತಿದ್ದ ಕಾಲವದಾದರೆ , ಇಂದು ಕೇವಲ ಇಪ್ಪತ್ತು ನಲವತ್ತು ನಿಮಿಷಗಳಲ್ಲೇ ತಾನು ಆ ಎಲ್ಲ ಭಾವ, ಭಾವನೆಗಳನ್ನು ರಂಗದ ಮೇಲೆ ತಂದೇನೆಂದು   ಬೀಗುತ್ತ , ಸುತ್ತ ಹತ್ತಾರು ಭೋ ಪರಾಕು ಜೀವಿಗಳನ್ನು ಬೆಳೆಸಿಕೊಳ್ಳುತ್ತ, ಸರಕಾರೀ ಖಜಾನೆಯತ್ತ ವಾರೆಗಣ್ಣು ಬೀರುತ್ತ , ಕಲಾ ಪ್ರಕಾರಗಳನ್ನು ಬೆಳೆಸ ಹೊರಟ ಕಲಾಕಾರರಿಂದ ಇಂದು ಯಕ್ಷಗಾನವೂ ವಿಡಂಬನೆಯಿಂದ ನಲುಗುತ್ತಿದೆ.



ನಾಟಕಗಳ ಬಗೆಗೆ ಬರೆಯದಿರುವದೇ ವಾಸಿ. ಈ ಎಲ್ಲ ವಿಕ್ಷಿಪ್ತ ಬೆಳವಣಿಗೆಗಳು ಆರಂಭವಾಗಿದ್ದೇ ನಾಟಕವೆಂಬ   ಕಲಾಪ್ರಕಾರದಿಂದ. ಗಲ್ಲಿ ಗಲ್ಲಿ ಗಳಲ್ಲಿ, ಊರು ಊರುಗಳಲ್ಲಿ ಹುಟ್ಟಿಕೊಂಡ ನಾಟಕಮಂಡಳಿಗಳು ಪ್ರೇಕ್ಷಕರಿಲ್ಲದೆ ಸೊರಗಿದಾಗ ಜನ್ಮ ತಳೆದಿದ್ದೇ ಸರಕಾರೀ ಪ್ರಾಯೋಜಿತ ನಾಟಕಗಳು. ಮುಂದೆ ಎಲ್ಲಾ ಕಲಾ ಪ್ರಕಾರಗಳನ್ನು ಆವರಿಸಿದ ಈ ಚಾಳಿ ನೂರಾರು ಜನರಿಗೆ ಜೀವನ ರೀತಿಯೇ ಆಗಿ, ಸರಕಾರೀ ಅಧಿಕಾರಿಗಳ ಜೇಬು ತುಂಬುವ ಕಾರ್ಯದಲ್ಲೂ ಯಶಸ್ವಿಯಾಯಿತು. ವರ್ತಮಾನದಲ್ಲಿ ಸಹಜ ಜೀವನ ಕಲಾ ಪ್ರಕಾರಗಳ ಪೋಷಣೆಗೆ ಎಲ್ಲರೂ ಈ ಸರಕಾರೀ ಪ್ರಾಯೋಜಿತ ಯೋಜನೆಗೆ ಆತು ಬಿದ್ದಿರುವದು ವಿಪರ್ಯಾಸ.  



ಇನ್ನೂ ಒಂದು ಬಹು ಚೋದ್ಯದ ಸಂಗತಿಯೆಂದರೆ ಈ ರೀತಿಯ ತಂಡಕ್ಕೆಲ್ಲಾ ತಮ್ಮದೇ ಆದ ಒಂದೋ ಎರಡೊ ವಿಮರ್ಶಕರಿರುತ್ತಾರೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಆಸ್ಥಾನ ಪಂಡಿತರಿದ್ದಂತೆ. ಈ ವಿಮರ್ಶಕರೂ ತಂಡದ ಎಲ್ಲ ವ್ಯವಸ್ಥೆಗಳಲ್ಲೂ ಭಾಗಿಯಾಗಿರುತ್ತಾರೆ. ಹೊರಗಿನವರಿಗಷ್ಟೇ ವಿಮರ್ಶಕರೆಂಬ ಬಿರುದು ಹೊತ್ತು , ತಂಡದ ಕಾರ್ಯಕ್ರಮಗಳಲ್ಲಿ ಸಂಮಾನಿತರಾಗುತ್ತಾರೆ. ಹೀಗೆ ಇಂದು ವ್ಯವಸ್ಥೆ? ಅವ್ಯವಸ್ಥೆ? ಕಂಪ್ಯೂಟರ್ ಯುಗದ ಚಿಪ್ಪಿನಂತೆ , ಎಲ್ಲ ಒಂದೇ ಪ್ರೊಗ್ರಾಮಿನಲ್ಲಿಟ್ಟು ಸಾಗುತ್ತಿದೆ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
March 02 , 2013.