Friday, February 8, 2013

About Our Leaders

ಇಂದೊಂದು ಸುದ್ದಿ ನೋಡಿ. ಕರ್ನಾಟಕ ರಾಜ್ಯ ಸರಕಾರದ ಬಜೆಟ್ ಸುದ್ದಿ. ಅಖಿಲ ಭಾರತ ವೀರಶೈವ   ಮಹಾಸಭಾ ಮೈಸೂರು ನಗರದಲ್ಲಿ ಬಸವ ಭವನ ನಿರ್ಮಿಸಲು ರಾಜ್ಯ ಸರಕಾರ ಎರಡು ಕೋಟಿ ರೂಪಾಯಿಗಳನ್ನು ಒದಗಿಸುತ್ತಿದೆ.


ನಮ್ಮ ಹವ್ಯಕ  ಮಹಾಸಭಾ,ಬೆಂಗಳೂರನಲ್ಲಿ ನಿರ್ಮಿಸಲು ಯೋಜಿಸುತ್ತಿರುವ ಕಟ್ಟಡಕ್ಕೆ ಸರಕಾರದಿಂದ ನಿಧಿ ಪಡೆಯಲು ಹಾಲಿ ಆಡಳಿತ ಮಂಡಲಿ ಯಾವ ಪ್ರಯತ್ನಗಳನ್ನು ಮಾಡಿದೆ ? ನಮ್ಮವರೇ ಆದ ವಿಶ್ವೇಶ್ವರ ಹೆಗಡೆಯವರು ಮಂತ್ರಿ, ಅಲ್ಲದೆ  ಆಡಳಿತ ಪಕ್ಷದ ಪ್ರಭಾವಿ ಮುಖಂಡರು. ಯಾವುದೇ ದೀಪ ಬೆಳಗುವದಿದ್ದರೂ ನಮಗೆ ವಿಶ್ವೇಶ್ವರರು ಬೇಕು. ವಿಶ್ವೇಶ್ವರರಿಲ್ಲದೆ ಮುಂದೂಡಿದ, ಸುಮ್ಮನೆ ನಿಂತ ಕಾರ್ಯಕ್ರಮಗಳೆಷ್ಟೋ , ಅಷ್ಟು ಪ್ರಭಾವಶಾಲಿ ಮುಖಂಡರು.   ನಮ್ಮ ಸಮಾಜದ ಹುಲ್ಲು  ಕಡ್ಡಿ ಅಲುಗಲೂ  ಬೇಕಾದ ಹಲವು ಹತ್ತು ಕಮಿಟೀಗಳಲ್ಲಿ ವಿಶ್ವೇಶ್ವರರ ರಕ್ತ ಸಂಭಂಧಿಯೋ ಇಲ್ಲ ಭಕ್ತರೋ ಇದ್ದೇ ಇರುತ್ತಾರೆ. ಆ ಪ್ರಮಾಣದಲ್ಲಿ ನಮ್ಮ ಸಮಾಜವನ್ನು , ಸಮಾಜದ ಎರಡನೆ , ಮೂರನೆ ಸ್ಥರದ ನೇತಾರರನ್ನು ಆವರಿಸಿಬಿಟ್ಟಿದ್ದಾರೆ.  ಸರಕಾರೀ ನೌಕರರ ಪಡೆಯಲ್ಲಿ ಅಕ್ಷಯನಂತ ಅಭಿನವ ಕುಚೇಲರುಗಳ ದಂಡನ್ನೇ ಹಿಂದಿಟ್ಟುಕೊಂಡಿದ್ದಾರೆ . ಇಂತಿಪ್ಪ ನಮ್ಮ ವಿಶ್ವೇಶ್ವರ ಕಾಗೇರಿಯವರು ಮನಸ್ಸು ಮಾಡಿದರೆ ನಮ್ಮ ಸಮಾಜಕ್ಕೆ ಒಂದೇಕೆ ಹತ್ತಾರು ಕಡೆಗಳಲ್ಲಿ ಐದಾರು ಕೋಟಿಗಳ ಒಂದೇಕೆ ನಾಲ್ಕಾರು ಭವ್ಯ ಕಟ್ಟಡಗಳನ್ನು ತಾವೇ ಸ್ವತಹ ನಿರ್ಮಿಸಿ ಸಮಾಜದ ಶ್ರೇಯೋಭಿವ್ರದ್ಧಿ ತತ್ಕಾಲದಲ್ಲೇ ಕೈಗೊಳ್ಳಬಹುದಾದ ಧೀಮಂತ ವ್ಯಕ್ತಿತ್ವವುಳ್ಳವರನ್ನು ಹೊಂದಿದ ನಮ್ಮ ಈ ಸಮಾಜವೇಕೆ ಕಾರ್ಯಶೀಲವಾಗುವದಿಲ್ಲ?  ಇನ್ನು ತಮ್ಮ ಸಂಪರ್ಕ ಜಾಲದಿಂದ ಸಮಾಜಕ್ಕಾಗಿ ಒಮ್ಮೆ ಟವೆಲ್ ಹಾಸಿ ಪ್ರಯತ್ನಿಸಿದರೆ ನೂರಾರು ಕೋಟಿ ರೂಪಾಯಿಗಳು ಸಂಗ್ರಹವಾಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂಬಂತಹ ರೋಚಕ ಬೆಳವಣಿಗೆ ಹೊಂದಿದ ವಿಶ್ವೇಶ್ವರರಿದ್ದೂ ನಮ್ಮ ಸಮಾಜ ಯಾಕೆ ಈ ಸ್ಥಿತಿಯಲ್ಲಿದೆ ?

ನಮ್ಮ ಸಮಾಜ ಈ ಸ್ಥಿತಿಯಲ್ಲಿದೆ ಎಂದರೇನರ್ಥ ?  ಎಲ್ಲಿದೆ ಕನಿಷ್ಟ   ಒಂದು ಸಾವಿರ   ವಟುಗಳು  ಸನಾತನ ರೀತಿಯಲ್ಲಿ ವಿದ್ಯಾಭಾಸ ಮಾಡುತ್ತಾ ಆಧುನಿಕ ಶಿಕ್ಷಣವನ್ನು ಪಡೆಯುವ ವ್ಯವಸ್ಥೆ ? ಎಲ್ಲಿದೆ ತಮ್ಮ   ಸನಾತನ ಪದ್ಧತಿಯ   ಜೀವನ ಸಾಗಿಸುತ್ತ , ಆಗಾಗ ಬರುವ   ತೊಂದರೆ ತೊಡಕುಗಳ ಕುರಿತ ಚಿಂತನೆ ನಡೆಸುತ್ತ   , ಅಭಿಮಾನ ಪೂರಕವಾಗಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವ ವಾರ್ಷಿಕ ಒಂದೆರಡು ಸಮಾಜದ  ಸಮಾಗಮ ಕಾರ್ಯಕ್ರಮಗಳನ್ನು ನಡೆಸುವ ಸಾಮೂಹಿಕ ಕಾರ್ಯಗಳೆಲ್ಲಿದೆ? ಇಂದಿನ ಸಮಾಜ ಜೀವನದಲ್ಲಿ ಪ್ರಭಾವಿ ಜನರು ಎಂದು ಗುರುತಿಸಿಕೊಳ್ಳುವ  IAS  , IPS  , etc  ಉದ್ಯೋಗಗಳಿಗೆ ಸೇರಲು ನಮ್ಮ ತರುಣರನ್ನು ತಯ್ಯಾರಿಗೊಳಿಸುವ    ವ್ಯವಸ್ಥೆ ಎಲ್ಲಿದೆ?  ನಮ್ಮ ಸಮಾಜದ ಶೇಕಡಾ ಅರವತ್ತು ಕುಟುಂಬಗಳಾದರೂ  ಬಡತನ ರೇಖೆಗಿಂತ ಕೆಳಗಿನವರಿದ್ದಾರೆ, ಎಲ್ಲಿದೆ ಅವರನ್ನು ಆರ್ಥಿಕವಾಗಿ ಸಧೃಡಗೊಳಿಸುವ   ಕಾರ್ಯಕ್ರಮಗಳು ಅಥವಾ ಸರಕಾರದ ಆರ್ಥಿಕ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಅವರಿಗೆ  ಮಾರ್ಗದರ್ಶಿ    ಜನಸಂಪನ್ಮೂಲದ ವ್ಯವಸ್ಥೆ ಎಲ್ಲಿದೆ  ?    ಸರ್ವೇಸಾಮಾನ್ಯವಾಗಿ ಎಲ್ಲ ರೈತರು ಸಾಲದ ಸುಳಿಯಲ್ಲಿ ಅರಿವಿದ್ದೋ ಅರಿವಿರದೆಯೋ ಮುಳುಗಿಹೋಗಿದ್ದಾರೆ.  ವಿವಿಧ ಹೆಸರಿನ ಸಾಲಗಳನ್ನು ವಿವಿಧ  ಸಂಸ್ಥೆಗಳಿಂದ ಪಡೆದು ,     ಹೆಚ್ಚಿನ ಹಣವನ್ನು ಅನುತ್ಪಾದಕ ರೀತಿಯಲ್ಲಿ ಖರ್ಚು ಮಾಡಿ ತಮ್ಮ ಆಸ್ತಿಗಳ ಮೇಲೆ    ಭೋಜಾ ಏರಿಸಿಕೊಂಡು  ಪ್ರತಿ ವರ್ಷ  ಆ ಸಾಲಗಳನ್ನು  ಅವಧಿ ವಾಡಾಯಿಸಿ  ಸಾಲ ಮನ್ನಾ ಆದೀತೆಂಬ   ಆಸೆಯಿಂದ ಕಣ್ಣು ಬಿಟ್ಟು  , ಮುಖಂಡರುಗಳ   ಮುಂದೆ ಬಾಯಿಮುಚ್ಚಿ ಬದುಕುತ್ತಿದ್ದಾರೆ.  ಯೋಚಿಸಿ, ಒಮ್ಮೆ ಈಗ ಅಥವಾ ಮುಂದೆ ನಾಲ್ಕಾರು ವರ್ಷಗಳಲ್ಲಿ ಸರಕಾರ ಆರ್ಥಿಕ ಮುಗ್ಗಟ್ಟಿನಿಂದ ಸಾಲ ಮನ್ನ ಅಸಾಧ್ಯವೆಂದು ಕೈಚೆಲ್ಲಿ ಸಾಲವಸುಲಾತಿಗೆ  ಮುಂದಾದರೆ  ಎಷ್ಟು ಹವ್ಯಕ ಬಡ  ಕುಟುಂಬಗಳ  ಯಜಮಾನರುಗಳು / ಕುಟುಂಬಗಳು  ಆತ್ಮಹತ್ಯೆಯ ಮಾರ್ಗವನ್ನು ಕಂಡಾವು? 

ನಮ್ಮ  ಸಮಾಜದ ಮುಂದಾಳುವೊಬ್ಬ ಇಷ್ಟು ಧೀರ್ಘ ಅವಧಿಗೆ ರಾಜಕೀಯ ಜೀವನದಲ್ಲಿ ಯಶಸ್ಸು ಪಡೆದಿದ್ದು ಅಭಿಮಾನದ ಸಂಗತಿ ಹೌದು. ಎರಡನೆ ಮಾತಿಲ್ಲ. ಅದೇ ಸಮಯದಲ್ಲಿ ತನ್ನ ಸಮಾಜಕ್ಕೆ ,  ತನ್ನ ಕ್ಷೇತ್ರದಲ್ಲಿ ತನ್ನ ಸಮಾಜದ ಸಹಜೀವಿಗಳಿಗೆ ನೇರವಾಗಿ ಪ್ರಯೋಜನವಾಗಬಲ್ಲ , ಅನುಕೂಲತೆಗಳು ಜನ ಸಾಮಾನ್ಯನಿಗೂ ತೋರುವ ರೀತಿಯಲ್ಲಿ ಏನೇನಾಗಿವೆ   ಎಂದು ಯೋಚಿಸಬೇಕಲ್ಲವೇ? ವಿಶ್ವೇಶ್ವರರು ಪ್ರಸ್ತುತ ಕಾಲದಲ್ಲಿ ಒಂದು ಉದಾಹರಣೆ.  ಇದೇ ರೀತಿ ನಮ್ಮ ಸಮಾಜದಲ್ಲಿ ಸಾಕಷ್ಟು ಧೀಮಂತ ನೇತಾರರು ಆಗಿಹೋಗಿದ್ದಾರೆ. ಅಧಿಕಾರದಲ್ಲಿಲ್ಲದಿದ್ದರೂ ಇದೇ ರೀತಿಯ ಸಾಕಷ್ಟು ನೇತಾರರು ನಮ್ಮ ಮಧ್ಯೆ ಇದ್ದಾರೆ. ನೇತಾರರೆಂದರೆ ಬರೇ ದೀಪ ಬೆಳಗುವದು , ಭಾಷಣ ಮಾಡುವದು ಮಾಡಿದರೆ ಮುಗಿದಿಲ್ಲವಲ್ಲವೇ? ಅವರ ನೇತ್ರತ್ವದಿಂದ ಸಮಾಜಕ್ಕೆ, ಸಮಾಜದ ಪ್ರತಿ ಸದಸ್ಯರಿಗೂ   ಒದಗಿ ಬಂದ ಪ್ರಯೋಜನದಿಂದ ಉಘೇಉಘೇ ಎನ್ನುವಂತಿರಬೇಕಲ್ಲವೇ?

ಹಾಲಿ ವರ್ತಮಾನ ಸಮಸ್ಯೆಗಳಲ್ಲಿ ಒಂದಾದ ಹಳ್ಳಿಯ ಹವ್ಯಕ ಗಂಡು ಮಕ್ಕಳಿಗೆ ಪ್ರಾಯ ನಲವತ್ತಾದರೂ ಮದುವೆಗೆ ಹೆಣ್ಣಿಲ್ಲ ಎಂಬುದಕ್ಕೆ ಪರಿಹಾರ ಎಂದು ನಮ್ಮ ನೇತಾರರು ನಮ್ಮೆಲ್ಲರ ಅಂದರೆ ಸಂಘಟನೆಗಳ ಖರ್ಚಿನಲ್ಲಿ ಕಾಶ್ಮೀರ ಸುತ್ತಾಡಿ ನಿರಾಶ್ರಿತ ಕಾಶ್ಮೀರೀ   ಪಂಡಿತರ ಕೂಸುಗಳನ್ನು ತಂದು ನಮ್ಮ ಯುವಕರ  ಜೀವನದಲ್ಲಿ ಕಾಶ್ಮೀರೀ ಸೇಬು   ತೋಟಗಳಂತೆ ಸೌಂದರ್ಯ ಕಾಣಿಸುತ್ತೇವೆ   ಎಂದು ಹೊರಟ ನೇತಾರರು ಏನು ಮಾಡಿದರು ಎಂಬುದು ಯಾರಿಗಾದರೂ ತಿಳಿಯಿತೆ  ? ಇವೆಲ್ಲ ನಮ್ಮ ನೇತಾರರ ಕಾರ್ಯ ವೈಖರಿಯನ್ನು ತೋರಿಸುತ್ತವೆ. ನಮ್ಮ ಹಿರಿಯರು ಹೇಳುತ್ತಾರಲ್ಲ - " ತಮಾ  ... ಅನ್ನ ಬೆಂತಾ... ನೋಡಲು ಒಂದು ಅಗುಳು ಅಕ್ಸಿ ನೋಡ್ರೆ ಸಾಕೋ........ "


ಏನಂತೀರಿ ?


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

hariharbhat.blogspot.com

February 09, 2013.

No comments:

Post a Comment