Friday, January 25, 2013

Havyaka Mahasabha

ಮನುಷ್ಯನಿಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಹವ್ಯಕ ಸಮಾಜ, ಹವ್ಯಕರು ಸಂಸ್ಕ್ರತಿ ಯುಳ್ಳವರು ಎಂಬುದು ಪ್ರಶ್ನಾತೀತವಾಗಿ ಅನೂಚಾನಾಗಿ ನಡೆದುಬಂದಿರುವ ನಂಬಿಗೆ.


ಹಳ್ಳಿಯ ಮನೆಗಳಲ್ಲಿ ಮನೆಯ ಯಜಮಾನನಿಂದಾದಿಯಾಗಿ ಎಲ್ಲರೂ ಅತಿಥಿಯನ್ನು  ಆತ್ಮೀಯವಾಗಿ ಪ್ರತಿಸಾರಿಯೂ , ಬೇಕಿದ್ದರೆ ನಿನ್ನೆ ಬಂದವನೇ ಇಂದು ಬರಲಿ, ದಿನವೂ ಬರುವವನೇ ಇರಲಿ , ಸ್ವಾಗತಿಸುವ ಕ್ರಮ  ಅಜ್ಜನಿಂದ  -  ಮಗನಿಗೆ  , ಮಗನಿಂದ - ಮೊಮ್ಮಗನಿಗೆ , ಮೊಮ್ಮಗನಿಂದ - ಮಿಮ್ಮಗನಿಗೆ, ಮಿಮ್ಮಗನಿಂದ - ಮರಿಮಗನಿಗೆ ............ ಹೀಗೇ ಅನೂಚಾನಾಗಿ ನಡೆದುಬಂದ ಸಂಸ್ಕೃತಿ ಹವ್ಯಕ ಸಮಾಜದ್ದು.  ಈ ದಿನಗಳಲ್ಲಿ ಈ ಸಂಸ್ಕೃತಿಗೆ ಕುಂದು ಬರುತ್ತಿದೆ ಎಂಬುದು ವಿಶಾದನೀಯ ಸಂಗತಿ. ಪೇಟೆ ಮನೆಗಳಲ್ಲಂತೂ ಅಪ್ಪನ ಪರಿಚಯದವರು ಬಂದರೆ ಅಪ್ಪ ಅಷ್ಟೇ , ಅಮ್ಮನ ಪರಿಚಯದವರು ಬಂದರೆ ಅಮ್ಮ ಅಷ್ಟೇ , ಮಗನ ಪರಿಚಯದವರು ಬಂದರೆ ಮಗನಷ್ಟೇ ..........  ಹೀಗೆ ಮಾತನ್ನಾಡಿಸಿ ಕಳಿಸುವ ಬದಲಾದ ಜೀವನ  ರೀತಿ  ಎಲ್ಲೆಡೆ ಕಾಣಬಹುದು. ಮಧ್ಯೆ ಕೆಲವು ದಶಕಗಳಲ್ಲಿ  ಅತಿಥಿ   ಬಂದಾಗ ಹಾಯ್ ಎನ್ನುವದು ಅಥಿತಿ ಹೋಗುವಾಗ ಬಾಯ್ ಅನ್ನುವದು ಇತ್ತು. ಈಗೀಗ ಕಂಪ್ಯೂಟರ್, ಮೊಬೈಲ್ , ಲ್ಯಾಪ್ಟಾಪ್, ಐಪೆಡ್   , ಐಪೊಡ್  ಗಳಲ್ಲಿ ಮುಳುಗಿರುವ ಇಂದಿನ ಜನಾಂಗದ ಮಕ್ಕಳು ಹಾಯ್ , ಬಾಯ್ ಹೇಳಲೂ ಪುರುಸೊತ್ತಿಲ್ಲದವರಾಗಿದ್ದಾರೆ .


ಇನ್ನು ಹೀಗೆ ಬದಲಾವಣೆಗಳು ನಮ್ಮ  ಪ್ರತಿನಿಧಿ ಸಂಸ್ಥೆ ಹವ್ಯಕ ಮಹಾಸಭೆಯನ್ನು ಬಿಟ್ಟೀತೇ ? ಮೊದಲೆಲ್ಲಾ ಇರದಿದ್ದ ಚೇಂಬರ್ ಸಂಸ್ಕ್ರತಿ , ಈ ಹತ್ತು ವರ್ಷಗಳಿಂದೀಚೆ  ನಮ್ಮ ಮಹಾಸಭೆಯನ್ನೂ ಆವರಿಸಿಬಿಟ್ಟಿದೆ.  ಯಾವ ಮಹಾಶಯರು , ಚೇಂಬರ್ ಇಲ್ಲದ ಅಧ್ಯಕ್ಷರು ಕಿರೀಟವಿಲ್ಲದ ರಾಜನಂತೆ ಎಂದು ನಿರ್ಧರಿಸಿದರೂ ಏನೋ , ಮೊದಲಿಲ್ಲದ ಚೇಂಬರ್ , ಚೇಂಬರ್ ಸಂಸ್ಕ್ರತಿ ನಿಧಾನವಾಗಿ   ಮಹಾಸಭೆಯನ್ನೂ ಜೊತೆ ಜೊತೆಗೆ ಸಾಮಾನ್ಯವಾಗಿ ಚುರುಕಾಗಿ ಓಡಾಡಿ , ಸಮಾಜದ ಕೆಲಸಗಳಲ್ಲಿ ತೊಡಗಿಕೊಂಡವರನ್ನೂ ಬಹುಮಟ್ಟಿಗೆ ಆವರಿಸಿಬಿಟ್ಟಿದೆ. ಉಳಿದವರನ್ನು ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆ ಎಂಬಂತೆ ತನ್ನ ಮಾರ್ಜಾಲ ನಡಿಗೆಗಳಲ್ಲಿ ಈ ಬದಲಾವಣೆಗಳು ಆವರಿಸಿಕೊಳ್ಳುವ ದಿನಗಳು ದೂರವಿರಲಿಕ್ಕಿಲ್ಲ. ಈ ಚೇಂಬರ್ ಸಂಸ್ಕ್ರತಿಯ ಪರಿಣಾಮಗಳೇ ,  ಚೇಂಬರ್ ನಲ್ಲಿ      ಕುಳಿತವರಿಗೆ ಚೇಂಬರ್ ನಿಂದ   ಈಚೆ ಬಂದಾದಮೆಲೆ ಅಥವಾ ಚೇಂಬರ್ ಬಿಟ್ಟು ಮಾಜಿಯಾದಮೇಲೆ ಉಳಿದವರ ಜೊತೆ ಸರಿ - ಸರಿ ಕುಳಿತುಕೊಳ್ಳಲು ಅಥವಾ ಸ್ಟೇಜ್ ಕಟ್ಟೆ ಕೆಳಗೆ ಕುಳಿತುಕೊಳ್ಳುವದೆ ಮುಜುಗರದ ಸಂಗತಿ. ಅಲ್ಲದೆ  ಚೇಂಬರ್ ಸಂಸ್ಕ್ರತಿಯ ಪರಿಣಾಮವೆಂದರೆ ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಚೇಂಬರ್ ತಲುಪಿ ಚೇಂಬರ್ ಇಲ್ಲವಾದೊಡನೆ , ಸಕ್ರಿಯತೆಯೆಲ್ಲ ಪರಾರಿಯಾಗಿ ನಿಷ್ಕ್ರಿಯರಲ್ಲ ಎಂಬ ಪುರಾವೆಗೆ ವರ್ಷಕ್ಕೊಮ್ಮೆ , ಎರಡು ಬಾರಿ ತಮ್ಮ ಉಪಸ್ತಿತಿ ಕರುಣಿಸಿ ಸಾಗುವ ಪರಿ , ಹಿಂದೆ ನಗುವವರು ಸರಿ,  ಮುಂದೆ (ನೇರ) ಹೇಳುವವರ ಇರಿ ಎಂಬುದಕ್ಕೆ ಇಂಬು ಕೊಡುವಂತಿರುತ್ತದೆ.


ಹೀಗೆಲ್ಲ ಬರೆಯುವದರಿಂದ ಬದಲಾವಣೆಗಳನ್ನು ನಿರೀಕ್ಷಿಸುವಂತೇನೂ ಇಲ್ಲ. ಹಾಗೆಂದು ಬದಲಾವಣೆ ಬರುವದಿಲ್ಲ ಎಂದಿಲ್ಲ. ಆವೇಶದ ಬದಲಾವಣೆಗಳು ಬಹುಕಾಲ ನಿಲ್ಲುವಂತಹದ್ದಾಗಿರುವದಿಲ್ಲ . ಹಾಗಾಗಿ ಬದಲಾವಣೆಗಳು ಅದರದೇ ಆದ ಓಘದಲ್ಲಿ ಬರಲಿ. ಸಕಾಲಿಕ ಬದಲಾವಣೆಗಳೂ ಬೇಕು ಎನ್ನುವ ಚಿಂತನೆಯತ್ತ ಈ ಅಕ್ಷರಗಳು ಪ್ರಚೋದಿಸಲಿ ಎಂಬುದೇ ಹಾರೈಕೆ.

ಧೀ ಯೋ ಯೋ ನಃ  ಪ್ರಚೋದಯಾತ್ .

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www .hariharbhat .blogspot .com

Jan  25 , 2013.

No comments:

Post a Comment