Sunday, January 20, 2013

ಬಿ.ಜೆ.ಪಿ ಯಿಂದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಮಾವೇಶ.

ಸಹೃದಯರಿಗೆ ನಮಸ್ಕಾರಗಳು.

*******************************

ಭಾನುವಾರ. ಬಿ.ಜೆ.ಪಿ ಯಿಂದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಮಾವೇಶ. ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಉದ್ಯಮಿಗಳು ಹಾಗೂ ದೇಶದ ವಿವಿಧೆಡೆಗಳಿಂದ ಆಗಮಿಸಿದ ಬಿ.ಜೆ.ಪಿ ಗಣ್ಯರ ಉಪಸ್ಥಿತಿ.



 ಭಾರೀ ಭೂರಿ  ಭೋಜನ, ತಿಂಡಿ - ಕಾಫಿ ಗಳ ಜೊತೆಗೆ ಬಿ ಜೆ.ಪಿ ಯವರು ಒಂದು ಅಲೆ ಎಬ್ಬಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ತಪ್ಪು ಮಾಡಿದ್ದೇವೆ. ನಮ್ಮ ಎಣಿಕೆ ಮೀರಿ ತಪ್ಪುಗಳಾಗಿವೆ . ಆದರೆ ಇನ್ನು ಆ ರೀತಿ ತಪ್ಪುಗಳಾಗುವ ಸಾಧ್ಯತೆ ಇಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರತ್ತ  ತಪ್ಪುಗಳ ಮೂಟೆಯನ್ನು ಸರಿಸುವ ಪ್ರಯತ್ನ ಮಾಡುತ್ತಾರೆ. ತಪ್ಪುಗಳನ್ನು ಹೋಲಿಕೆಮಾಡಿದರೆ, ನಮ್ಮ ಕಾಲದಲ್ಲಾದ   ತಪ್ಪುಗಳು ಕಾಂಗ್ರೆಸ್ಸಿನಲ್ಲಾದ   ತಪ್ಪುಗಳಿಗಿಂತ ಬಹಳ ಬಹಳ ಕಡಿಮೆ , ಜೆ.ಡಿ.ಎಸ್ ಅಂತೂ ಹೇಳಲಾರದಸ್ಟು ತಪ್ಪುಗಳನ್ನೆಸಗಿವೆ ಎಂದು , ಸಾರುವ ಭಾಷಣಗಳು , ಕಾಂಗ್ರೆಸ್ಸಿನಂತೆ ಬಿ.ಜೆ.ಪಿ ಆಗಿದೆ ಎನ್ನುವದು ಸ್ವಲ್ಪ ಪ್ರಮಾಣದಲ್ಲಿ ಸರಿಯಾದರೂ ಸಂಪೂರ್ಣವಾಗಿ ಒಪ್ಪತಕ್ಕ ವಿಷಯವಲ್ಲ .......  ಈ ರೀತಿ ಮುಖಂಡರುಗಳ ಭಾಷಣ ಸಾಗುತ್ತದೆ. ಕೇಳುಗನಿಗೆ,  ಮುಂದೆ ಸಾಕಷ್ಟು ತಪ್ಪುಗಳನ್ನೆಸಗುವ ಅವಕಾಶ ಬಿ.ಜೆ.ಪಿ ಗಿದೆ, ಇನ್ನೂ ಕಾಂಗ್ರೆಸ್ಸನ್ನು ಮೀರಿಸಿಲ್ಲ , ಆದ್ದರಿಂದ ಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಗೆ ಇನ್ನೊಮ್ಮೆ ವೋಟು ಕೊಡಿ ಎಂಬ ಸಂದೇಶವನ್ನು ನೀಡುತ್ತದೆ ಎಂಬುದು ಭಾಷಣ ಮಾಡುವ ಮುಖಂಡರುಗಳಿಗೆ ಅರಿವಾಗದಿರುವದು ಶೋಚನೀಯ.  "Once bitten , twice shy" ಎಂಬಂತೆ ಮತದಾರ ಏನುಮಾಡುತ್ತಾನೋ ಕಾಯ್ದು ನೋಡಬೇಕಾಗಿದೆ.




ಪ್ರೊ.ಬಿ.ಎಂ.ಕುಮಾರಸ್ವಾಮಿ ಯವರು ವಾಲ್ ಮಾರ್ಟ್ ರಿಟೇಲ್ ಕ್ಷೇತ್ರ ಪ್ರವೆಶಿಸುವದರ ಕುರಿತು ವಿರೋಧವಾಗಿ , ತೀವ್ರಗತಿಯಿಂದ, ಭಾವಾವೇಶಪೂರ್ಣವಾಗಿ  , ಸಂಕಲಿಸಿದ ಅಂಕಿ ಅಂಶಗಳ ಸಾಕ್ಷಾತ್ಕಾರಗಳೊಡನೆ UPA ಸರಕಾರದ ನಡೆಗಳನ್ನು ಖಂಡಿಸುತ್ತ , ಪ್ರೆಕ್ಷಕನ ಮನ ರಂಜಿಸುತ್ತ ಸುಮಾರು ಮುಕ್ಕಾಲು ಘಂಟೆ ವಿಶ್ಲೇಷಣೆ ಮಾಡಿದರು. ಆಮೇಲೆ ಪ್ರೆಕ್ಷಕರಿಂದ ಪ್ರಶ್ನೆಗಳನ್ನು   ಆವ್ಹಾನಿಸಲಾಯಿತು. ನಾನು ಪ್ರಶ್ನಾರಂಭ   ಮಾಡಿ , ಇಂದು ಚಿಲ್ಲರೆ ಅಂಗಡಿಗಳನ್ನು ನಡೆಸುತ್ತಿರುವವರೆಲ್ಲ ಐವತ್ತರಿಂದ ಅರವತ್ತು ವಯಸ್ಸಿನವರು, ಅವರ ಮಕ್ಕಳೆಲ್ಲ ಐ.ಟಿ , ಬಿ.ಟಿ ಕಂಪನಿಗಳಲ್ಲಿ ಅವರವರ ಉದ್ಯೋಗಾರ್ಹತೆಗೆ ತಕ್ಕಂತಹ ಕೆಲಸ ಮಾಡುತ್ತಿದ್ದಾರೆ, ಆ ಮಕ್ಕಳಾರೂ   ಚಿಲ್ಲರೆ ಅಂಗಡಿ ಮುನ್ನಡೆಸುವವರಲ್ಲ, ಈಗ ನಾವು ವಾಲ್ಮಾರ್ಟ್ ವಿರೋಧಿಸಿದರೂ ಇನ್ನು ಹತ್ತಾರು ಇಲ್ಲ ಐವತ್ತು ವರ್ಷಗಳಲ್ಲಿ ನಾವೇ ವಾಲ್ಮಾರ್ಟ್ ನ್ನು ಸ್ವಾಗತಿಸಬೇಕಾದೀತು ಎಂದೆನು. ಇಂದು ಹಳ್ಳಿ ಹುಡುಗನಿಗೆ ನಲವತ್ತಾದರೂ ಮದುವೆಗೆ ಹುಡುಗಿ ಸಿಗುತ್ತಿಲ್ಲ, ವ್ಯವಸಾಯ ಮಾಡುವ ಯುವ ಜನಾಂಗವಿಲ್ಲಾ, ಎಲ್ಲ ಬೆಂಗಳೂರು ಸೇರಿದ್ದಾರೆ, ಸೇರುತ್ತಿದ್ದಾರೆ, ವಯಸ್ಸಾದವರಷ್ಟೇ   ಹಳ್ಳಿಯಲ್ಲಿರುವ ಪರಿಸ್ಥಿತಿಯಲ್ಲಿ ವ್ಯವಸಾಯದ ಶೋಚನೀಯ ಅಧೋಗತಿ ಇಂದಿದೆ,   ಹತ್ತು ಹದಿನೈದು ವರ್ಷಗಳ   ಹಿಂದೆ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಉದ್ಯೋಗಕ್ಕೆ ಜನರೇ ಬರದಂತಹ ಪರಿಸ್ಥಿತಿ ಇತ್ತು ಎಂದೆಲ್ಲಾ ಹೇಳಿದಾಗ ಸಭಿಕರಿಂದ  ಬಂದ ಮಹಾ ಕರತಾಡನ ಮನಸ್ಸನ್ನು ಪ್ರಫುಲ್ಲಗೊಳಿಸಿತು. ಕುಮಾರಸ್ವಾಮಿಯವರು ಹೇಳಿದ ಲಾಬಿ ಮಾಡುವದು , ರಾಜಕೀಯ ಲಂಚಗುಳಿತನ ಇವೆಲ್ಲ ನಮಗೆ ಹೊಸತಲ್ಲ, ಯು.ಪಿ.ಎ ಕಾಲದ ಬೊಫೋರ್ಸ್ , ಏನ್.ಡಿ .ಎ ಕಾಲದ  ಕೊಫಿನ್  ಗೇಟ್ , ಇತ್ತೀಚಿನ ನೀರಾ ರಾಡಿಯ ಹಗರಣಗಳನ್ನೆಲ್ಲ   ನೋಡಿದ್ದೇವೆ ಎಂದು ಸ್ವಲ್ಪ ಖಾರ ಮಿಶ್ರಿತವಾಗಿ ಮಾತು ಮುಗಿಸಿದೆನು. ಕುಮಾರಸ್ವಾಮಿಯವರು ಉತ್ತರಿಸುತ್ತ,  ಈ ಮಹನೀಯರು  ಈಗ ಹೇಳಿರುವದು ಸಮಸ್ಯೆಗಳು ಹೌದು, ಆದರೆ ಉತ್ತರಿಸಲು ಪ್ರಶ್ನೆಗಳನ್ನೇ ಕೇಳಿಲ್ಲ ಎಂದು ಜಾರಿಕೊಂಡರು. ಪ್ರಹ್ಲಾದ ಜೋಷಿಯವರು ಕೊಫಿನ್   ಗೇಟ್ ಹಗರಣ ಎತ್ತ್ಕೊಂಡು ,  ಜಾರ್ಜ ಫರ್ನಾಂಡಿಸ್   ನಿಶ್ಕಲಂಕಿತರು ಎಂದು ಸಿ.ಬಿ.ಐ ಹೇಳಿದೆ ಎಂದು ಸಮರ್ಥಿಸಿದರು. ಅನುಕೂಲಕ್ಕೆ ತಕ್ಕಂತೆ ರಾಜಕಾರಣಿಗಳು ಸಿ.ಬಿ.ಐ ಹೆಸರನ್ನು ಬಳಸಿ ವಿಷಯ ಮರೆಮಾಚುತ್ತಾರೆ ಎಂಬ ಬುದ್ಧಿಜೀವಿಗಳ ಮಾತು ನೆನಪಿಗೆ ಬಂತು. ಚರ್ಚೆಯಲ್ಲಿ ಭಾಗವಹಿಸಲು ಬಹಳ ಜನ ಉತ್ಸುಕರಾಗಿದ್ದುದು ಕಂಡು ಬಂತು.  ಆದರೆ ಎಲ್ಲ ಸಂವಹನ, ಮುಕ್ತ ಚರ್ಚೆ ಕಾರ್ಯಕ್ರಮಗಳಂತೆ ಇಲ್ಲಿಯೂ ಸಮಯದ ಅಭಾವ ಎಂದು ಚರ್ಚೆಯನ್ನು ಐದಾರು ಪ್ರಶ್ನೆಗಳಿಗೆ   ಸೀಮಿತಗೊಳಿಸಲಾಯಿತು. ಮುಕ್ತ ಸಂವಾದ , ಚರ್ಚೆ ಕಾರ್ಯಕ್ರಮಗಳನ್ನೇರ್ಪಡಿಸಿ   ಸಂಘಟಕರು ಉದ್ಘಾಟನೆ , ವಿಡಂಬನೆಯ ವಿಜ್ರಂಭಣೆಗಳಿಗೇ  ಹೆಚ್ಚಿನ ಸಮಯ ವಿನಿಯೋಗಿಸಿ , ಸಂವಾದ, ಚರ್ಚೆಗಳನ್ನು ಕಾಟಾಚಾರಕ್ಕೆ ನಡೆಸುವದು ಈ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ.



ಆಮೇಲೆ ಚಹಾ ಕುಡಿಯುವಾಗ , ತಾವು ಹೇಳಿದ ದಿನ ನಿತ್ಯದ ವ್ಯವಹಾರದಲ್ಲಿ  ಮಾರಾಟ ತೆರಿಗೆ ಟ್ಯಾಕ್ಸ್ ಇನಸ್ಪೆಕ್ಟರ್ಸ್ ಗಳ ಸಮಸ್ಯೆಯೆಲ್ಲ ರಾಜ್ಯ ಸರಕಾರವೇ ಪರಿಹರಿಸುವದಲ್ಲವಾ?, ಈ ನಾಲ್ಕು ವರ್ಷಗಳಲ್ಲಿ ಪರಿಹಾರ ಕಂಡುಕೊಳ್ಳಬಹುದಿತ್ತಲ್ಲ?  ಎಂದರೆ , ಕುಮಾರಸ್ವಾಮಿಯವರು "ಜಾಣರ ಕಿವುಡು " ಎಂಬಂತೆ ಕೇಂದ್ರ ಸರಕಾರದ ದೋಷಗಳನ್ನೆತ್ತಿ    ಎತ್ತಿ   ಚರ್ಚೆಗೆ ತೊಡಗಿದರು. ನಾನೂ ಜಾಣತನ ಪ್ರದರ್ಶಿಸಿ ಬಿಸ್ಕೆಟ್ ಎತ್ತಿಕೊಂಡು ಬರುವೆ ಎಂದು ಅವರಿಂದ ದೂರ ಬಂದೆನು.



ಬೆಳಿಗ್ಗೆ  ಸಿ.ಟಿ.ರವಿ ಭಾಷಣ ಮಾಡುವಾಗ ಒಳ್ಳೊಳ್ಳೆಯ ಅಂಶಗಳನ್ನು ನೆನಪಿನಲ್ಲಿಟ್ಟು ಬಂದಂತೆ ಅನಿಸಿತು. ಆದರೆ ಭಾಷಣ , ದತಪೀಠದತ್ತ ನಾವು  ಎಂದು ಹುರಿದುಂಬಿಸುವ ಭಾಷಣದಂತಾಗಿ  , ಒಳ್ಳೆಯ ಅಂಶ ಸಭಿಕರನ್ನು ತಲುಪಲೇ ಇಲ್ಲ. ಅವರು ಪ್ರಸ್ತಾಪಿಸಿದ ಒಳ್ಳೆಯ ಅಂಶಗಳೆಂದರೆ ಸಣ್ಣ ಕೈಗಾರಿಕಾ ವಲಯದ ಸಬ್ಸಿಡಿ ಹಣ ಪಾವತಿ ಬಹಳ ವರ್ಷಗಳಿಂದ ಆಗಿರಲಿಲ್ಲ, ನಮ್ಮ ಸರಕಾರ ಒಮ್ಮೆ ಒಂದು ನೂರಾ ಹತ್ತು ಕೋಟಿ, ಇನ್ನೊಮ್ಮೆ ಒಂದು ನೂರಾ ಮೂವತ್ತು ಕೋಟಿ ನೀಡಿದೆ. ಇನ್ನುಳಿದ ಒಂದು ನೂರಾ ಐದು ಕೋಟಿ ರೂಪಾಯಿಗಳನ್ನು ಸದ್ಯದಲ್ಲಿಯೇ ನೀಡುತ್ತೇವೆ   ಎಂದು ಹೇಳಿದರು. ಎಲ್ಲ ಇಂಡಸ್ಟ್ರಿಗಳಿಗೆ ನೌಕರರನ್ನು ಒದಗಿಸುವದೇ ಶಿಕ್ಷಣ ಇಲಾಖೆ, "ಸ್ಪೆಷಲ್ ಎಕನಾಮಿಕ್ ಝೋನ್ " ಮಾದರಿಯಲ್ಲಿ ಜಿಲ್ಹಾ ಮಟ್ಟದಲ್ಲಿ " ಸ್ಪೆಷಲ್ ಎಜುಕೇಶನ್ ಝೋನ್  "  ತೆರೆಯುವಂತೆ ವಿಶೇಷ ಪರಿಣಿತರು ಸಲಹೆ ನೀಡಿದ್ದಾರೆ, ನಾವದನ್ನು ಯೋಚಿಸುತ್ತಿದ್ದೇವೆ ಎಂದರು.



ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಕೈಗಾರಿಕೆಗಳ ಸಮಸ್ಯೆಗಳನ್ನು ಬಗೆ ಹರಿಸುವ ಕುರಿತು,  ಬರುವ ಬಜೆಟ್ ನಲ್ಲಿ ಪ್ರಯತ್ನಿಸುವದಾಗಿ ಆಶ್ವಾಸನೆ ನೀಡಿದರು.

 

ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ ಬಿ.ಜಿ.ಪಿ ರಾಜ್ಯಸಭಾ ಎಂ.ಪಿ ಮತ್ತು ಬಿ.ಜೆ.ಪಿ ಕೋಶಾಧ್ಯಕ್ಷ  ಶ್ರೀ ಪಿಯೂಶ್ ಗೋಯೆಲ್  ಪ್ರಭಾವಿ ಭಾಷಣಕಾರ. ಇಂಗ್ಲಿಶ್ ಭಾಷೆ ಬಲ್ಲವರಿಗಂತೂ ಅವರ ಭಾಷಣ ಕೇಳುವದು ಮನಕೆ  ಚೇತೋಹಾರಿ. ಕಬ್ಬಿಣದ ಕಡಲೆಯಾದ ಅರ್ಥಶಾಸ್ತ್ರ ವನ್ನು ಸುಲಲಿತವಾಗಿ ವಿಷಯಸಂಗ್ರಹದೊಂದಿಗೆ   , ಶ್ರೀ ಅಟಲ್ ಬಿಹಾರಿ ವಾಜಪಯೀ ಯವರ ರಾಜಕೀಯ ಆಡಳಿತ ಕಾಲ ಹೇಗೆ ಶ್ರೇಷ್ಟ , ಹೇಗೆ ಭಾರತಕ್ಕಾದ ಅರ್ಥಿಕ ಅನುಕೂಲತೆಗಳಿಗೆ ವಾಜಪಯೀ ಇಟ್ಟ ಬುನಾದಿ , ಹೇಗೆ ಯು.ಪಿ.ಎ ಗೆ ಲಾಭ ತಂದುಕೊಟ್ಟಿತು  , ಫೋಕರಣ್ ಅಣುಸ್ಫೊಟ ದೇಶಕ್ಕೆ ಹೇಗೆ ಅಂತರರಾಸ್ಟ್ರೀಯ        ಮನ್ನಣೆ ತಂದು ಕೊಟ್ಟಿತು ಎಂಬ ಅಭಿಮಾನ, ಇತ್ಯಾದಿ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಒಂದು ಹಂತದಲ್ಲಿ ಶ್ರೀ  ಅರುಣ್ ಜೇಟ್ಲಿ ಯವರ ಭಾಷಣವನ್ನು ನೆನಪಿಸಿತು. ವಿಷಯ ಸಂಗ್ರಹ, ವಿಷಯ ನಿರೂಪಣೆಯಲ್ಲಿ ಶ್ರೀ ಅರುಣ್ ರಷ್ಠೇ ಪ್ರತಿಭಾನ್ವಿತರಾದ   ಶ್ರೀ ಪೀಯುಶ್ ರಿಗೆ  ದೇವರು ನೀಡಿದ ಧ್ವನಿ ಮಾಧುರ್ಯ ಅರುಣ್ ರಿಗಿಂತ ಮೇಲಾಗಿ , ಆಕರ್ಷಣೀಯವಾಗಿದೆ .  ಎಕನಾಮಿಕ್ ಲಿಬರೇಶನ್ ಎಂಬುದು ಹೊಸದೇನಲ್ಲ, ಜನಸಂಘದ ಕಾಲದಿಂದಲೂ ಬಿ.ಜೆ.ಪಿ ಜನರು ಹೇಳುತ್ತಾ ಬಂದಿದ್ದೇವೆ  " ಗವರ್ನಮೆಂಟ್ ಹ್ಯಾಸ್ ನೋ ರೋಲ್ ಇನ್ ಬಿಸಿನೆಸ್ ಅಂಡ್ ಗವರ್ನಮೆಂಟ್  ಇಸ್ ಟು ಫೆಸಿಲಿಟೇಟ್              ಬಿಸಿನೆಸ್ " , ಸರಕಾರ ಹೇಗೆ ಬುಸಿನೆಸ್ಸ್ನವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು, ಸರಕಾರೀ ಹಿಡಿತಗಳನ್ನು ಹೇಗೆ ಕಮ್ಮಿ ಮಾಡಬೇಕು , ಅಭಿವೃದ್ಧಿ ಹಿಂದೂ ರೇಟ್ ಆಫ್ ಗ್ರೋಥ್ ನಿಂದ ಹೇಗೆ ಅಭಿವೃದ್ಧಿ ಗೊಂಡು ಇಂದು ಪುನಃ ಹಿಂದೂ ರೇಟ್ ಆಫ್ ಗ್ರೋಥ್ ಗಿಂತ ಕೆಳಕ್ಕೋಡುವ ಅಪಾಯದಲ್ಲಿದೆ , ವಿದೇಶಿ ವಿನಿಮಯ ಸಂಗ್ರಹ ಹೆಚ್ಚಾಗಿದ್ದು ಪುನಃ ಕ್ಷೀಣಗೊಳ್ಳುವ ಅಪಾಯವೇಕಿದೆ , ಇತ್ಯಾದಿ ಇತ್ಯಾದಿ ವಿಷಯಗಳನ್ನು ಅಧಿಕೃತ ಅಂಕಿ ಅಂಶಗಳ ಜೊತೆಗೆ, ಕೇಳುಗನಿಗೆ ಮನಮುಟ್ಟುವಂತೆ ವಿವರಿಸಿದರು. ಉಳಿದಂತೆ ರಾಜಕೀಯ ಅಂಶಗಳು ,  ಅಂದು ಏನ್.ಡಿ.ಎ ತಂದ ಒಳ್ಳೆಯ ಕಾರ್ಯಕ್ರಮಗಳನ್ನೆಲ್ಲ ಬದಿಗೊತ್ತಿ , ರಾಜಕೀಯಕ್ಕಾಗಿ ಯು.ಪಿ.ಎ ಅದೇ ಕಾರ್ಯಕ್ರಮಗಳನ್ನು ನೂತನ ಹೆಸರಿನಲ್ಲಿ ತರುತ್ತಿದೆ ಆದರೆ ಕಾರ್ಯಕ್ರಮ ಜಾರಿ ಯಲ್ಲಿ ಅತಿ ಬ್ರಷ್ಟಾಚಾರದಿಂದ ಕಾರ್ಯಕ್ರಮಗಳು ವಿಫಲವಾಗುತ್ತಿವೆ ಇತ್ಯಾದಿ ಆರೋಪಗಳು. ಈ ಸರಕಾರದ ಬ್ಯಾಂಕಿಂಗ್ ವ್ಯವಸ್ತೆ ಸದಾ ಸಾಲ ವಸೂಲಿಗಾಗಿ ಚಿಕ್ಕ ಪುಟ್ಟ ಸಾಲಗಾರರ ಹಿಂದೆ ಓಡುತ್ತದೆ, ದೊಡ್ಡ ದೊಡ್ಡ ಸಾಲಗಾರರಿಗೆ ಎ.ಸಿ ರೂಮ್ ಗಳಲ್ಲಿ ಮೇಜವಾನಿ ನೀಡುತ್ತದೆ ಇತ್ಯಾದಿ ಸಭಾ ರಂಜನೀಯ ಅಂಶಗಳನ್ನೊಳಗೊಂಡ ಮಾತುಗಳು ಶ್ರೀ ಪೀಯುಶ್ ಗೋಯೆಲ್ ರವರನ್ನು ಮನಸ್ಸಿನಲ್ಲುಳಿಯುವಂತೆ   ಮಾಡಿತು ಎನ್ನುವದು ಅತಿಶಯೋಕ್ತಿಯಲ್ಲ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ,  ಫೇಸ್ ಬುಕ್ ಬರಹಗಾರ.
Freelance  Journo.
hariharbhat.blogspot.com

Jan 21 , 2013.

No comments:

Post a Comment