Sunday, March 31, 2013

ಬ ಲ ಸುರೇಶ - " ಕಾದ್ಗೆ ಪಂಚಾತ್ಗೆ "


ಬ ಲ ಸುರೇಶ ರವರ ದಿಗ್ದರ್ಶನದಲ್ಲಿ ಸಂಪನ್ನಗೊಂಡ ಹವ್ಯಕ ಭಾಷೆಯಲ್ಲಿ ವಿರಚಿತ ನಾಟಕ " ಕಾದ್ಗೆ ಪಂಚಾತ್ಗೆ "  ನೋಡಿದೆ.



ಬ ಲ ಸುರೇಶ ಬಹು ಸರಳ ಜೀವಿಗಳು , ಪರಿಚಯವಿರಲಿ ಇಲ್ಲದಿರಲಿ ಎದುರಿಗೆ ಬಂದವರನ್ನೆಲ್ಲಾ ಮುಗುಳ್ನಗೆಯಿಂದ ಆಕರ್ಷಿಸುವವರು. ಧಾರಾವಾಹಿಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ,ಬಹುಜನಪ್ರಿಯರು.



ಇನ್ನೊಂದು  ದೃಷ್ಟಿಕೋನದಿಂದ  ನೋಡಿದಾಗ ಧಾರಾವಾಹಿ ನಿರ್ದೇಶಕರೊಬ್ಬರು ಇಷ್ಟೊಂದು   ಜನಪ್ರಿಯತೆ ಸಾಧಿಸುತ್ತಿದ್ದಾರೆಂದರೆ ನಮ್ಮ ಸಮಾಜದಲ್ಲಿ ಬಿಡುವಿನ ವೇಳೆಯನ್ನು ಹೊಂದಿದ , ಧಾರಾವಾಹಿಗಳನ್ನು ವೀಕ್ಷಿಸಲು ಸಮಯ ಹೊಂದಾಣಿಕೆಮಾಡಿಕೊಳ್ಳಬಲ್ಲ ಅಂದರೆ ಕೆಲಸ ಕಡಿಮೆ  ಮತ್ತು  ಧಾರವಾಹಿ ವೀಕ್ಷಣೆಯಲ್ಲಿ  ಜಾಸ್ತಿ ತೊಡಗಿಕೊಳ್ಳುವ ಸಂಖ್ಯಾಬಲ  ಇದೆ ಎಂದಾಯಿತು.   ಇದು ವಿಷಾದನೀಯ ವಿಷಯ ಯಾಕೆಂದರೆ ಇಂದು ನಗರಗಳಲ್ಲಿ ಮನೆಯ ಪ್ರೌಢರೆಲ್ಲರೂ  ಆದಾಯ ತರುವ ದುಡಿಮೆಯಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇದೆ.  ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಸಾಕಷ್ಟು ದುಡಿದು ಸೇರಿಸಿಟ್ಟುಕೊಂಡವರಿಗೆ   ಈ ಮಾತು ಅನ್ವಯ ವಾಗದಿದ್ದರೂ , ಈ ದಿನಗಳಲ್ಲಿ ಬೆಂಗಳೂರಿನಂತಹ ಶಹರಗಳಲ್ಲಿ ಸತಿಪತಿಗಳಿಬ್ಬರೂ ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.  ಈ ಅನಿವಾರ್ಯತೆಗೆ ಹೊಂದಿಕೊಳ್ಳಲಾಗದ ಕುಟುಂಬಗಳ  ಸಾಮರಸ್ಯ  ಜೀವನಕ್ಕೆ ತೊಡಕಾಗುವ ಈ ಕಾಲದ ಈ ಸಂದರ್ಭದಲ್ಲಿ  ಬ ಲ ಸುರೇಶರಂತೆ ಧಾರಾವಾಹಿ   ನಿರ್ದೇಶಕರುಗಳು , ಯಶಸ್ವಿಯಾಗುತ್ತಿರುವದು ವೈಯಕ್ತಿಕ ಶ್ರೇಯೋಭಿವೃದ್ಧಿಯಾದರೂ , ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಹಾನಿಕರ ಎಂಬ  ಅಭಿಪ್ರಾಯ ಚಿಂತನೀಯ ವಿಷಯ.




ಈ ಪ್ರದರ್ಶನ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಲ್ಲಲೂ ಸ್ಥಳವಿರದಷ್ಟು ಸಂಖ್ಯೆಯಲ್ಲಿ ಸೇರಿದ ಜನಸಮೂಹ, ಎಲ್ಲರೂ ಮುಕ್ಕಾಲು ಭಾಗ ನಾಟಕವನ್ನು ನೋಡಿ ಆನಂದಿಸಿದ್ದು, ಆಗಾಗ ಸುರಿಯುತ್ತಿದ್ದ ಮಳೆ ಅಂದರೆ ಚಪ್ಪಾಳೆಗಳ ಮಳೆ , ಹೆಚ್ಚಿನ ಎಲ್ಲ ಪಾತ್ರಧಾರಿಗಳ ಪ್ರೌಢ , ಸಹಜ ಅಭಿನಯ , ಸೂಕ್ತ ರಂಗ ಸಜ್ಜಿಕೆ , ಹವ್ಯಕರ ವಸತಿ ಪ್ರದೇಶಗಳಲ್ಲಿರುವ ವಿಭಿನ್ನ ಮಾತಿನ ಶೈಲಿಗಳು, ಆಚಾರ - ವಿಚಾರಗಳು , ೧೯೭೦ ರ ದಶಕದಿಂದ ಈ ವರೆಗೆ ಹವ್ಯಕರ ನೆಲೆಗಳಲ್ಲಿ ಬಂದಿರುವ ಬದಲಾವಣೆಗಳು, ಹವ್ಯಕ ಮನೋಧರ್ಮದಲ್ಲಿ ಕಂಡುಬರುವ ವಿಕಾರಗಳು .......... ಇತ್ಯಾದಿ ವಿಷಯಗಳಲ್ಲಿರುವ  ನೇತ್ಯಾತ್ಮಕ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ಪ್ರಸ್ತುತಪಡಿಸಿದ ನಾಟಕ , ಎಲ್ಲರಿಗೂ ಕ್ಷಣಮಾತ್ರದ ಮನೋರಂಜನಾ ವಸ್ತುವಾಯಿತೆಂಬುದರಲ್ಲಿ ಎರಡು ಮಾತಿಲ್ಲ.




ಅಂದಿನಿಂದ ಇಂದಿನವರೆಗೆ ತೋರಿಬಂದ ಬದಲಾವಣೆಗಳನ್ನು , ಅದರಲ್ಲೂ ವಿಬಿನ್ನ ಭೌಗೋಳಿಕ ಸನ್ನಿವೇಶಗಳು, ಜೀವನದ ಅನಿವಾರ್ಯತೆಗಳು, ವಿಭಿನ್ನ ಭಾಷಾ ಬಳಕೆಗಳು , ತೋರಿಬಂದ - ತೋರಿಬರುತ್ತಿರುವ ಸಾಂಪ್ರದಾಯಿಕ ಬದಲಾವಣೆಗಳು ಇವನ್ನೆಲ್ಲ ನಿಶ್ಚಿತ ಅವಧಿಯಲ್ಲಿ ರಂಗದ ಮೇಲೆ ತರುವದು ಸುಲಭದ ಮಾತಲ್ಲ. ಇವನ್ನೆಲ್ಲ ಒಳಗೊಂಡ ಈ ಪ್ರಯೋಗ ಯಶಸ್ವಿಯಾಗಲು , ವಿಭಿನ್ನ ಪ್ರಾದೇಶಿಕತೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ ಬ ಲ ಸುರೇಶರ ಜೊತೆಗಿರುವ  ಮಿತ್ರರ ಪಾತ್ರ ಬಹು ಶ್ಲಾಘನೀಯ.    ಆದರೆ ಈ ನಾಟಕ ಪ್ರಯೋಗದ ಅವಧಿಯಲ್ಲೆಲ್ಲೂ ಆ ಗೆಳೆಯರನ್ನು , ಗೆಳೆಯರ ಶ್ರಮವನ್ನು ಸ್ಮರಿಸಿದಂತೆ   ತೋರಿಬಂದಿಲ್ಲ.  ಏಕೆಂದರೆ ಒಂದು ಪ್ರಾದೇಶಿಕ ಹಿನ್ನೆಲೆಯಿಂದ ಬಂದು, ಯಾವುದೇ ಪ್ರಮಾಣದಲ್ಲಿ ಜನ ಮಾನಸದಲ್ಲಿ ಬೆರೆತರೂ, ಉದ್ಯೋಗದಲ್ಲಿ ಯಶಸ್ವಿಯಾದರೂ, ಜನಪ್ರಿಯರಾದರೂ , ಕೊರತೆಯೇ ಕಾಣದಂತೆ ವ್ಯಕ್ತಿಯೊಬ್ಬ ಹಲವು ಪ್ರಾದೇಶಿಕ ಜನಜೀವನದ ೧೯೭೦ ರ ದಶಕದಿಂದ ಈ ವರೆಗಿನ ಭಾಷಾ ಬಿನ್ನತೆ, ಅಂದಿನಿಂದ ಇಂದಿನ ವರೆಗಿನ ಭಾಷಾ ಪ್ರಯೋಗಗಳು ಇವನ್ನೆಲ್ಲ ದೋಷರಹಿತವಾಗಿ ಡೈಲಾಗ್ ಬರೆಯುವದೆಂದರೆ ನಂಬಲಸಾದ್ಯ. ಅದಕ್ಕೇ ಹೇಳಿದ್ದು ಈ ಯಶಸ್ಸಿನ ಹಿಂದೆ ಪ್ರತಿ ಭೌಗೋಳಿಕ ಹಿನ್ನೆಲೆಯಿಂದ ಬಂದ ಗೆಳೆಯರ ಶ್ರಮ ಇರಲೇಬೇಕು, ಹಾಗಾಗಿ ಬ ಲ ಸುರೇಶರ ಈ ಪ್ರಯೋಗದ ಯಶಸ್ಸಿನಲ್ಲಿ ಇರುವ ಆ ಮಿತ್ರರ ಶ್ರಮವೂ ಗುರುತಿಸಬೇಕಾದದ್ದೇ.




ಜನಮಾನಸದಲ್ಲಿ ಅಚ್ಚೊತ್ತಿರುವ ಕಲಾಪ್ರಕಾರಗಳಲ್ಲಿ ನಾಟಕವೂ ಒಂದು. ಯಾವುದೇ ಕಲಾಪ್ರಕಾರಗಳ ಉದ್ದೇಶ ಕೇವಲ ಮನರಂಜನೆಯೊಂದೇ ಅಲ್ಲ. ಅನೂಚಾನಾಗಿ ಇಪ್ಪತ್ತನೇ ಶತಮಾನದ ಮಧ್ಯದ ಅವಧಿಯವರೆಗೂ ಮನರಂಜನೆಯ ಜೊತೆ ಜೊತೆಗೆ ಸಮಾಜ ಸುಧಾರಣೆ, ವ್ಯಕ್ತಿಯ ವ್ಯಕ್ತಿತ್ವ ಸುಧಾರಣೆ ... ಇತ್ಯಾದಿ ಧನಾತ್ಮಕ ಅಂಶಗಳಿಗೆ ನಾಟಕಗಳೂ, ಇತರೆ ಕಲಾ ಮಾಧ್ಯಮಗಳೂ   ಒತ್ತು ನೀಡಿ ಸಮಾಜದ , ವ್ಯಕ್ತಿಯ ಔನ್ಯತ್ಯಕ್ಕೆ ಪೂರಕವಾಗಿದ್ದವು.  ಇತ್ತೀಚಿನ  ದಶಮಾನಗಳಲ್ಲಿ ಸಿನೇಮಾ, ಟೀ.ವಿ ಧಾರಾವಾಹಿಗಳು ಕಲಾಪ್ರಕಾರಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಸಮಾಜವನ್ನು, ವ್ಯಕ್ತಿಯ ವ್ಯಕ್ತಿತ್ವವನ್ನು  , ಸಾಮಾಜಿಕ ಅಭಿರುಚಿಯನ್ನು ಅಧೋಗತಿಗೆ ಕೊಂಡೊಯ್ಯುತ್ತಿವೆ. ಊಟಕ್ಕಿರಬೇಕಾದ ಉಪ್ಪಿನಕಾಯಿ ಬಾಳೆಯನ್ನೆಲ್ಲಾ ಆವರಿಸಿಕೊಂಡು , ಊಟದ ಸವಿಯನ್ನೇ ಹಾಳುಗೆಡವುವಂದದಿ , ಇಂದು ಈ ಧಾರಾವಾಹಿಗಳು , ಅವುಗಳ ಅಣ್ಣ ತಮ್ಮದಿರು -  ಅಕ್ಕ ತಂಗಿಯರಂತಿರುವ ಇತರೆ ಕಲಾಪ್ರಕಾರಗಳು ನೇತ್ಯಾತ್ಮಕ ಅಂಶಗಳನ್ನೇ ಬಂಡವಾಳವನ್ನಾಗಿಸಿ   ಸಾಗುತ್ತಿರುವ ಸ್ಥಿತಿ ಅತಿ ಶೋಚನೀಯ.



ಬ  ಲ  ಸುರೇಶ  ರಂತಹ   ಹವ್ಯಕ ಸಮಾಜದ ಯಶಸ್ವಿ ವ್ಯಕ್ತಿಗಳು ಸಮಾಜದ ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ.  ಸ್ವ ಶ್ರಮದಿಂದಲೂ , ಆ ಪರಮಾತ್ಮನ ಅನುಗ್ರಹದಿಂದಲೂ ಆರ್ಥಿಕವಾಗಿ ಬಲಾಡ್ಯರಾದ ಮತ್ತು ಸಮಾಜದ ವಿವಿಧ ಹುದ್ದೆಗಳಲ್ಲಿ ವಿರಾಜಮಾನರಾದ ಹವ್ಯಕ ಮುಕುಟಮಣಿಗಳು ಇಂದಿನ ಅತಿ ಅವಶ್ಯಕತೆಗಳಾದ , ಹವ್ಯಕ ಯುವಜನಾಂಗ ಅಂದರೆ ಹನ್ನೆರಡರಿಂದ ಇಪ್ಪತ್ತೈದು ವಯಸ್ಸಿನ ಯುವಕ ಯುವತಿಯರು , ನಮ್ಮ ಹವ್ಯಕರ ಮೂಲ ಸಂಸ್ಕೃತಿಯಾದ ವೇದ ಪಾರಾಯಣ ಇತ್ಯಾದಿ ಅಭ್ಯಸಿಸುತ್ತಾ ಇಂದಿನ ಸಾರ್ವಜನಿಕ ಶಿಕ್ಷಣವನ್ನು ಕಲಿಯುತ್ತ ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಲು ಸಹಾಯವಾಗಬಲ್ಲ, ಎರಡರಿಂದ ಐದು ಸಾವಿರ ಯುವಕ ಯುವತಿಯರು ಉಚಿತವಾಗಿ ವಾಸ್ತವ್ಯ ಹೊಂದಿ (hostel), ಸೂಕ್ತ ಶಿಕ್ಷಣ ಪಡೆದು  ಅಧುನಿಕ ಪ್ರಪಂಚಕ್ಕೆ ತೆರೆದುಕೊಳ್ಳುವ ಅವಕಾಶಕ್ಕೆ ಅನುಕೂಲವಾಗುವಂತಹ , ಸಾರ್ವಕಾಲಿಕವಾಗಿಯೂ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳುವಂತಹ  Free  Hotsel   , Free Education  ನಂತಹ ಸಾಮಾಜಿಕ ವ್ಯವಸ್ಥೆಯ ಆಸ್ತಿ ನಿರ್ಮಿಸಲು   ಅನುವುಗೊಳ್ಳಬೇಕು.  ಅಲ್ಲಲ್ಲಿ ತೋರಿ ಬರುವ ಅನುಕಂಪ ( lip  sympathy  ) , paid  hotsel  ಮುಂತಾದ ವ್ಯವಸ್ಥೆಗಳು ಉಳ್ಳವರಿಗಷ್ಟೇ ಅನುಕೂಲ ವಿನಃ, ಅರ್ಥಿಕ ಸಂಕಷ್ಟದಲ್ಲಿರುವ , ಬಹುದೂರ ಹಳ್ಳಿಗಳಲ್ಲಿರುವ ಹವ್ಯಕ ಬಾಂಧವರಿಗಲ್ಲ.  ಬಹುಪಾಲು ಹಳ್ಳಿಗಳಲ್ಲಿ  ಹತ್ತು ಗುಂಟೆ - ಮೂವತ್ತು ಗುಂಟೆ ಜಮೀನಿರುವ ಹವ್ಯಕ ಬಾಂಧವರು , ಶಹರಗಳಲ್ಲಿದ್ದು ದಿನ  ನಿತ್ಯದ ಕನಿಷ್ಟ ಅವಶ್ಯಕತೆಗಳನ್ನು ಪೂರೈಸಿ ಬದುಕಲು ಶ್ರಮಿಸುತ್ತಿರುವ ಹವ್ಯಕ ಬಾಂಧವರು .......... ಇವರಿಗೆಲ್ಲ ಅನುಕೂಲವಾಗಬಲ್ಲ ವ್ಯವಸ್ಥೆಯ ನಿರ್ಮಾಣಕ್ಕೆ ಬ ಲ ಸುರೇಶರಂತಹ   ಯಶಸ್ವಿ ವ್ಯಕ್ತಿಗಳು ಮನಸ್ಸು ಮಾಡಬೇಕು, ಮುಂದಾಳತ್ವ ಪಡೆಯಬೇಕು, ಇದು ಇಂದಿನ ಅತಿ ಅವಶ್ಯಕತೆಗಳಲ್ಲೊಂದಾಗಿದೆ.




ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 31, 2013.

3 comments:

  1. This comment has been removed by the author.

    ReplyDelete
  2. ನಮಸ್ಕಾರ ಹರಿಹರಭಟ್ರೇ, ಅರಾಮಾ...
    “ಕಾದ್ಗೆ ಪಂಚಾತ್ಗೆ” ನಾಟ್ಕದ ಬಗ್ಗೆ ನಿಂಗ ಬ್ಲಾಗನಲ್ಲಿ ಬರ್ದ ವಿಷ್ಯ ಪ್ರಸನ್ನಿಂದ ಗೊತ್ತಾತು. ಈಗ ಓದಿದಿ, ಖುಷಿ ಆತು, ನಮ್ಮೋರೊಬ್ರು ಇಷ್ಟು ಮಾತ್ರದ ಪ್ರೋತ್ಸಾಹನಾದ್ರೂ ಕೊಡೋರು ಇದ್ವಲಾಂತ. ಇದಕ್ಕಾಗಿ ಆನು ಹೃತ್ಪೂರ್ವಕ ಧನ್ಯವಾದ ಅರ್ಪುಸ್ತಿ. ಲೇಖನದಲ್ಲಿ ನೀವು ಎತ್ತಿದ ಪ್ರಶ್ನೆಗಳಿಗೆ ಯನ್ನ ಸಮಜಾಯಿಷಿ ಹೀಗಿದ್ದು:

    ಮೊದ್ಲನೆದಾಗಿ ಪ್ರಾದೇಶಿಕ ಹವ್ಯಕ ಭಾಷೆಯ ಪದಪ್ರಯೋಗದಲ್ಲಿ ಗಳೆಯರ ಸಹಕಾರ ಬಗ್ಗೆ. ಮೊದಲು ಸಾಗ್ರದ ಹವ್ಯಕದಲ್ಲಿ ನಾಟ್ಕ ಬರ್ದು ನಂತರ ಸಿರ್ಸಿ-ಗೋಕರ್ಣ-ಮಂಗಳೂರು ಹವ್ಯಕಕ್ಕೆ ಬದಲಾಯ್ಸಿದಿ. ನನ್ನ ಹೆಂಡ್ತಿನೇ ಮಂಗಳೂರ್‍ನೋಳು-ಬಾವ ಕೃಷ್ಣಭಟ್ ಜೊತೆ ಕೂತು ಸರಿಮಾಡ್ಕ್ಯಂಡಿ. ಸಿರ್ಸಿ ಭಾಷೆಗೆ ಉಮೇಶ್ ಹೆಗಡೆಯವರು ಸಹಾಯ ಮಾಡ್ದ. ಗೋಕರ್ಣದ್ದಕ್ಕೆ ಶಿವರಾಮ್ ಹೆಗ್ಡೇರು ಇದ್ದೇ ಇದ್ದ. ನಾಟ್ಕ ಮುಗ್ದು ಎಲ್ಲರಿಗು ಸ್ಮರಣೆಕೆ ಕೊಟ್ಟಾಗ್ಲೆ ಆನು ವೇದಿಕೆ ಬಂದು ಮಾತಾಡಿದ್ದು. ಆಗ ಈ ನಾಟ್ಕ ಎಲ್ಲರ ಸಹಾಯದಿಂದ ಸಂಪನ್ನಗೊಂಡಿದ್ದು ಅಂತ ವೇದಿಕೆಯಲ್ಲೇ ಹೇಳ್ದಿ. ನಮ್ಮ ಮನೆ ಮಾತಲ್ದಾ? ಅದಕ್ಕೆ ಕೆಲವುಕಡೆ ಸಂದರ್ಭಕ್ಕೆ ತಕ್ಕಹಾಗೆ ಅವ್ರಿಗೇ ಮಾತು ಸೇರ್ಸ್ಗಳಕ್ಕೆ ಹೇಳಿದ್ದಿ, ಕೆಲವ್ರು ಎರಡು ಮಾತು ಸೇರ್ಸ್‍ಗೈಂದ. “ಕಾದ್ಗೆ ಪಂಚಾತೆ”್ತ ಮೂಲ ನಾಟ್ಕ ಇರದು ಸಾಗರ ಹವ್ಯಕದಲ್ಲಿ ಅದೂ ಏಕಾಂಕ, ಅದನ್ನ ಆನು ಬರೆದಿದ್ದು 1984ರಲ್ಲಿ. ಮೊದಲು ಮುದ್ರಣ ಕಂಡಿದ್ದು 2009ರಲ್ಲಿ, ಎಲ್ಲಾ ಕಲಾವಿದ್ರುನ್ನು ಒಟ್ಟುಗೂಡಿಸೋ ಉದ್ದೇಶದಲ್ಲಿ ಅಂದಿನ ಸಮಕಾಲಿನ ಸನ್ನಿವೇಶನ ಪರಿಕಲ್ಪಿಸಿ ಐದು ಹೊಸ ಸನ್ನಿವೇಶ ಸೇರ್ಸಿದ್ದು ಅಷ್ಟೆ.
    ಇಂದಿನ ಟಿವಿ ಧಾರಾವಾಹಿಗಳು ಸಮಾಜವನ್ನು ಹಾಳು ಮಾಡುತ್ತಿದೆ ಎಂಬರ್ಥವನ್ನು ತಮ್ಮ ಲೇಖನದಲ್ಲಿ ಪ್ರತಿಬಿಂಬಿಸಿದ್ದೀರಿ. ನಿಮ್ಮ ಸಾಮಾಜಿಕ ಕಳಕಳಿಗೆ ಗೌರವವಿದೆ. ಮನುಷ್ಯ ನಗರದಲ್ಲಿ ದುಡಿಯವ ಯಂತ್ರವಾಗಿ, ಮಂತ್ರದೊಂದಿಗೆ ಮಾನವೀಯ ಸಂಬಂಧವನ್ನೇ ಮರೆಯುತ್ತಿರುವ ಬಗ್ಗೆ ನೀವು ಯೋಚಿಸಿದ್ದೀರಾ?. ಬದಲಾವಣೆ ಜಗದ ನಿಯಮಾ ಎಂದು ನೀವೇ ಹೇಳಿದ್ದೀರಿ. ಆಚಾವಿಲ್ಲದ ವಿಚಾರ ಸದಾಚಾರವೆನಿಸುವುದಿಲ್ಲ ...ವಿಚಾರವಿಲ್ಲದ ಪ್ರಚಾರಕ್ಕೆ ಬಲ ಇರುವುದಿಲ್ಲ. ಒಮ್ಮೆ ಭೇಟಿ ಮಾಡೋಣ.. ನಮ್ಮ ನಮ್ಮ ವಿಚಾರ ಹಂಚಿಕೊಳ್ಳೂಣ. ತುಳಿತಕ್ಕೊಳಗಾಗಿಯೇ ನಾನು ಮೇಲೆದ್ದು ಬಂದಿರುವೆ. ಮಾನ ಅವಮಾನವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿರುವೆ. ಕಾಲೆಳೆಯುವ ನಮ್ಮವರ ನಡುವೆಯೇ ದೈವಾನುಗ್ರಹದಿಂದ ತಲೆಯೆತ್ತಿರುವೆ. ಅವಮಾನ ಅನುಭವಿಸಿದ ವೇದಿಕೆಯಲ್ಲೇ ಗೌರವ ಪಡೆದಿದ್ದಿದೆ. “ಗುರು ರಾಘವೇಂದ್ರ ವೈಭವ” ಧಾರಾವಾಹಿಯನ್ನು 29 ದೇಶದಲ್ಲಿ ನೋಡುತ್ತಿದ್ದರು, ರಾಜ್ಯಮಟ್ಟದ-ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲೂ ಈ ಬಗ್ಗೆ ಪ್ರಶಂಸನೀಯ ಲೇಖನಗಳು -ಸಂದರ್ಶನಗಳು ಪ್ರಕಟವಾಗಿದ್ದವು... ಆದರೆ ನಮ್ಮದೇ ಹವ್ಯಕ ಪತ್ರಿಕೆಯಲ್ಲಿ ನಮ್ಮವನೊಬ್ಬ ಇಂತಾ ಧಾರಾವಾಹಿ ಮಾಡಿದ್ದಾನೆಂಬ ಎರಡು ಸಾಲು ಪ್ರಕಟವಾಗಲ್ಲಿ... ಇದರಿಂದ ನನಗೇನೂ ನಷ್ಟವಾಗಿಲ್ಲ...ನಷ್ಟವಾಗುವುದು ನಮ್ಮ ಸಮೂದಾಯದ ಸಂಸ್ಥೆಗೆ.
    ನಿಮ್ಮ ವಿಚಾರಶೀಲ ಲೇಖನಕ್ಕೆ ಅಭಿನಂದನೆಗಳು
    ನಿಮ್ಮವ
    (ಬ ಲ ಸುರೇಶ)


    ReplyDelete
  3. ಸುರೇಶ ರವರೆ ನಮಸ್ಕಾರಗಳು.


    ನಾಟಕದಲ್ಲಿ 2010 -11 ಆರಂಭವಾದೊಡನೆ ನಾಟಕ ಪೇಲವವೆನಿಸಿ ನಾನು ಹೊರಟು ಬಂದಿದ್ದೇನೆ. ನಾನಿರದಿದ್ದರಿಂದ ತಾವು ಮಿತ್ರರಿಗೆ ಗೌರವಿಸಿದ ವಿಷಯ ನನ್ನ ಗಮನಕ್ಕೆ ಬರಲಿಲ್ಲ. ಇಲ್ಲಿ ತಪ್ಪು ನನ್ನದೇ. ಒಪ್ಪಿದ್ದೇನೆ.


    ಇನ್ನು ಧಾರಾವಾಹಿ ಕ್ಷೇತ್ರದಲ್ಲಿ ತಾವು ಅಪಾರ ಸಾಧನೆ ಮಾಡಿದ್ದೀರಿ. ಹಾಗೆಂದು ಧಾರಾವಾಹಿಗಳ ದುಷ್ಪರಿಣಾಮಗಳ ಬಗೆಗೆ ನಾನು ಚಿಂತನೆ ಬದಲಿಸಬೇಕಾದ ಪ್ರಮೇಯ ಬಂದಿಲ್ಲ. ಇಂದಿನ ಸಿನೇಮಾ ಹಾಗೂ ಧಾರಾವಾಹಿ ಕ್ಷೇತ್ರ ಕ್ಷೀಣಿಸುತ್ತಿರುವ ಸಾಮಾಜಿಕ ಸ್ವಾಸ್ತ್ಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದೆಯೆಂಬಲ್ಲಿ ಎರಡು ಮಾತಿಲ್ಲ. ಏ.ಸಿ ರೂಮಿನಲ್ಲಿ ಕುಳಿತು ಯೋಚಿಸಿ ಯೋಚಿಸಿ ಬರೆಯುವ ಸಿನೇಮಾ ಕಥೆಗಳು ಭಯೋತ್ಪಾದಕರಿಗೂ ಪ್ರೋತ್ಸಾಹದಾಯಕವಾಗಿ ಹೊಸ ಹೊಸ ಭಯೋತ್ಪಾದಕ ಚಟುವಟಿಕೆಗಳಿಗೂ ಕಾರಣವಾಗಿವೆ ಎಂಬುದನ್ನು ಪತ್ರಿಕೆಗಳಿಂದ ಓದಿ ತಿಳಿದಿದ್ದೇವೆ. ತುಂಡುಡುಗೆಗಳು , ಚುಂಬನ ಚೋದನೆಗಳು ಯಾವ ರೀತಿ ಯುವ ಸಮಾಜವನ್ನು ಪ್ರಭಾವಿಸುತ್ತವೆ ಎಂದು ವಿವರಿಸಬೇಕಾಗಿಲ್ಲ.

    ಧನ್ಯವಾದಗಳೊಂದಿಗೆ,

    ಹರಿಹರ ಭಟ್, ಬೆಂಗಳೂರು.
    April 14 , 2013.

    ReplyDelete