Sunday, June 2, 2013

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ......

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ......


ಬೆಂಗಳೂರಿನ ರಾಜಕಾಲುವೆ ಮತ್ತು ಬದಿಯಲ್ಲಿರುವ ಶೋಲ್ಡರ್ ಡ್ರೈನ್ ಅಂದರೆ ಸುತ್ತಲಿನ ನೀರು ಹೋಗಿ ರಾಜಕಾಲುವೆ ಸೇರುವ ವ್ಯವಸ್ಥೆ  ಗೆ ಧೀರ್ಘ ಕಾಲದ ಇತಿಹಾಸ ಇದೆ. ಪ್ರತಿ ಬಾರಿ ಮಳೆ ಸುರಿದಾಗಲೂ ಈ ರಾಜಕಾಲುವೆ ಹಾಗು ಅದರ ತಮ್ಮಂದಿರು ಸುದ್ದಿಯಲ್ಲಿರುತ್ತಾರೆ. ಈ ಅವಕಾಶವನ್ನು ಸದುಪಯೋಗ ??? ಪಡಿಸಿಕೊಳ್ಳುವ ನಮ್ಮ ರಾಜಕೀಯ ನೇತಾರರು , ಕಾಲುವೆಗೆ ಚೆಲ್ಲುವ ಹಣದಿಂದಲೇ ತಾರಸಿ ಮನೆಗಳನ್ನು ಕಟ್ಟಿಕೊಂಡು ಸುಖವಾಗಿರುವ ಉದಾಹರಣೆಗಳು ಜನಸಾಮಾನ್ಯರ ಕಣ್ಣಿಗೆ ಕೋರೈಸುತ್ತಿವೆ. ಅದೇ ರೀತಿ   ಈ ರಾಜಕಾಲುವೆ ಸಮಸ್ಯೆಗಳು ಪರಿಹಾರ ಕಂಡರೆ ಮುಂದೆಲ್ಲಿ ಹಣ ಹೊಡೆಯುವ ಯೋಜನೆ ರೂಪಿಸುವದು  ಎಂಬ ಧೀರ್ಘ ಚಿಂತೆಗಳಿಂದ ಪರಿಹಾರ ಕಾಣದೆ , ಹದಿನೈದು ಇಪ್ಪತ್ತು ವರ್ಷಗಳಿಂದ ಈ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡು ಬಂದಿದ್ದಾರೆ.



ಆಡಳಿತದಲ್ಲಿರುವ ಪಕ್ಷ ಯಾವುದಾದರೇನು, ಸಮಸ್ಯೆ ಸದಾ ಜೀವಂತವಾಗಿದೆ. ಅಷ್ಟೇಕೆ ಸದಾ ರಾಮ, ಕೃಷ್ಣ ಜಪಿಸುವ ಚುನಾವಣೆ ಬಂದೊಡನೆ ರಥವೇರುವ ನೇತಾರರು ಆಡಳಿತಕ್ಕೆ ಬಂದರೂ , ರಾಜ ಕಾಲುವೆಯ ಕೊಚ್ಚೆ  ಗಾಳಿ ಆಂಜನೇಯನ ಪದ ತಳದಲ್ಲೇ ಬಂದು ತನ್ನ ಸಮಸ್ಯೆಯ ಭೀಕರ ಮುಖವನ್ನು ಜನಸಾಮಾನ್ಯರಿಗೆ ತೋರ್ಪಡಿಸಿದರೂ ಪರಿಹಾರ ಕಾಣದ ಸಮಸ್ಯೆ ಇದಾಗಿದೆ.



ಈಗ ಮತ್ತೆ ಮಳೆಸುರಿಯುತಿದೆ. ರಾಜಕಾಲುವೆ ತನ್ನ ಸಹೋದರರೊಂದಿಗೆ ಮತ್ತೆ ಎದ್ದು ನಿಂತಿದೆ. ಮನೆಗಳು ಜಲಾವೃತವಾಗುತ್ತಿವೆ . ನುಗ್ಗಿ ಬಂದ ನೀರನ್ನು ಓಡಿಸುತ್ತಾ ಓಡಿಸುತ್ತಾ ಮುಗ್ಧ ಜೀವಿಯೊಬ್ಬರ ಜೀವ ಹರಣವಾಗಿದೆ. ಶಾಲೆಗಳು ಪುನರಾರಂಭವಾಗುವ ಕಾಲವಿದು. ಮಳೆ ಸುರಿಯತೊಡಗಿದರೆ ಆಶ್ರಯಕ್ಕಾಗಿ ಅಲ್ಲಲ್ಲಿ ಓಡುವ ಮುಗ್ಧ   ಬಾಲಕರು, ಬಾಲಕಿಯರು, ಮನೆಯಲ್ಲಿ ಗಾಬರಿಯಿಂದ ಕಾಯುತ್ತಿರುವ ಪಾಲಕರು , ರಸ್ತೆ ಮಧ್ಯೆ ಬೇಜವಾಬ್ಧಾರಿಯಿಂದ  ವಾಹನಗಳನು ಓಡಿಸಿ ಜೀವಹರಣ ಮಾಡುವ ವಾಹನಸವಾರರು ........... ಇವರೆಲ್ಲರ ಜೊತೆ ನಮ್ಮ ಬೆಂಗಳೂರು ಸದಾ ಓಡುತ್ತಿದೆ. ಜಗತ್ತಿನ ಎಲ್ಲಾ ಜನಾಂಗದ ಜನರನ್ನು ಕೈ ಬೀಸಿ ಕರೆಯುತ್ತಿದೆ. ಈಗಾಗಲೇ ತನ್ನ ಒಡಲಲ್ಲಿ ಆರು ಕೋಟಿ ಹತ್ತು ಲಕ್ಷ   ಜನರನ್ನು ಪೊರೆಯಬೇಕಾಗಿದೆ.  ಈ ಕೋಟಿ, ಕೋಟಿ ಜನರ ಜೀವ , ಐಶಾರಾಮಿ ಬಂಗಲೆಗಳಲ್ಲಿ ಬದುಕುತ್ತಿರುವ ಸಾವಿರಾರು ಜನರ ಕೈಲಿದೆ.



ವರ್ಷದಿಂದ ವರ್ಷಕ್ಕೆ ಹಣ ವ್ಯಯವಾಗುತ್ತಿದೆ ಪುಸ್ತಕದ ಭಾಷೆಯಲ್ಲಿ.......... ಹಣ ಪೋಲಾಗುತ್ತಿದೆ  ಜನರ ಭಾಷೆಯಲ್ಲಿ.  ಈ ಮಧ್ಯೆ ಆಶಾದಾಯಕ ಸುದ್ದಿಯೊಂದು ಬಂದಿದೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು " ಒಂದು ತಿಂಗಳಿನಲ್ಲಿ ರಾಜಕಾಲುವೆ ಸಮಸ್ಯೆ ಬಗೆಹರಿಸುವಂತೆ ಬಿ ಬಿ ಎಂ ಪಿ ಹೊಸ ಆಯುಕ್ತರಿಗೆ ಆದೇಶಿಸಿದ್ದಾರೆ".  ಅಧಿಕಾರಿ ವಲಯದಲ್ಲಿ ಕುಚೋದ್ಯದ ಪ್ರಶ್ನೆ ತೇಲುತ್ತಿದೆ, ಒಂದು ತಿಂಗಳು 2013  ರಲ್ಲೋ, 2014  ರಲ್ಲೋ..............2020  ರಲ್ಲೋ ............. 2030  ರಲ್ಲೋ...............ರಲ್ಲೋ  .......     ??????????



ಆದರೂ ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ , ಎಲ್ಲವೂ ಸಾಧ್ಯ. ಕಾಯೋಣ.



ಹರಿಹರ ಭಟ್, ಬೆಂಗಳೂರು.
www.hariharbhat.blogspot.com
June  02 , 2013 .

No comments:

Post a Comment