Saturday, September 28, 2013

ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?

                                     ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?


ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ? ಇಂದು ಎಲ್ಲರ ಕೈಲೂ ಏ. ಟಿ. ಎಂ ಕಾರ್ಡ್ ಇದ್ದೇ ಇರುತ್ತದೆ. ಸಾಧಾರಣವಾಗಿ ಪ್ರಯಾಣ ಸಮಯದಲ್ಲಿ, ಯಾವುದಾದರೂ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕಾರ್ಡ್ ಕಳೆಯುವ ಸಾಧ್ಯತೆಗಳಿವೆ. ಆಗ ಒಮ್ಮೆಲೇ ನಾವು ಗಾಬರಿಯಾಗುತ್ತೇವೆ. ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಕಾರ್ಡ್ ಎಲ್ಲೆಲ್ಲೋ ಬಿಟ್ಟಿರುತ್ತೇವೆ. ಹಾಗಾಗಿ ಏ. ಟಿ. ಎಂ ಕಾರ್ಡ್ ಬಗ್ಗೆ ನಾವು ತೆಗೆದುಕೊಳ್ಳಬೇಕಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿ ಪಡೆಯೋಣ.


ಯಾವುದೇ ರೀತಿಯ ಎಸ್. ಎಮ್. ಎಸ್ ಗಳು , ಮೇಲ್ ಗಳು ಬಂದರೂ ನಿಮ್ಮ ಏ.ಟಿ.ಎಮ್ ಕಾರ್ಡ್ ಮಾಹಿತಿಯನ್ನು ನೀಡಬೇಡಿ. ಅಲ್ಲದೆ ಬ್ಯಾಂ ಕ್ ಸಿಬ್ಬಂಧಿ ಅಥವಾ ಇನ್ಯಾರೇ ಪರಿಚಿತರು ಕೇಳಿದರೂ ಸಹ ನಿಮ್ಮ ಏ.ಟಿ.ಎಮ್ ಕಾರ್ಡ್ ವಿವರ / ಪಿನ್ ನಂಬರ್ / ಮಾಹಿತಿ ನೀಡಬೇಡಿ.


ನೀವು ಏ.ಟಿ.ಎಮ್ ನಿಂದ ಹಣ ತೆಗೆದಾಗ ಅಥವಾ ಇನ್ನ್ಯಾರೇ ಅನಧಿಕ್ರತವಾಗಿ ನಿಮ್ಮ ಖಾತೆಯಲ್ಲಿ ವ್ಯವಹಾರ ಮಾಡಿದರೆ ಅದರ ಮಾಹಿತಿ ಎಸ್.ಎಮ್.ಎಸ್ ಮೂಲಕ ಪಡೆಯುವ ಸೌಲಭ್ಯ ಇದೆ. ಈ ಸೌಲಭ್ಯ ಪಡೆಯಲು ನಿಮ್ಮ ಬ್ಯಾಂಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನ್ನು ದಾಖಲಾತಿ ಮಾಡಿ. 



ಮೊದಲನೇ ಸಲ ಬಳಸಿದ ಪಿನ್ ಬದಲಾಯಿಸಿ ಮತ್ತು ಆ ನಂತರ ಆಗಾಗ ಪಿನ್ ಬದಲಾಯಿಸುತ್ತಿರಿ. 



ಯಾವತ್ತೇ ಆದರೂ ಪಿನ್ ಬರೆದಿರುವ ಚೀಟಿಯನ್ನು ಕಾರ್ಡ್ ಜೊತೆ ಇಡಬೇಡಿ ಅಲ್ಲದೆ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯಬೇಡಿ.

ಪಿನ್ ನೆನಪಿನಲ್ಲಿಡುವದೇ ಉತ್ತಮ ವಿಧಾನ. 



ಏ.ಟಿ.ಏಮ್ ಅಥವಾ ಅಂಗಡಿ ಗಳಲ್ಲಿ ಖರೀದಿ ಮಾಡುವಾಗ ಕೀ ಪ್ಯಾಡ್ ಮೇಲೆ ಕೈ ಮರೆ ಮಾಡಿ ಪಿನ್ ನಂಬರ್ ಒತ್ತಿ.


ನೀವು ಏ.ಟಿ.ಏಮ್ ರೂಮ್ನಲ್ಲಿರುವಾಗ ಯಾರನ್ನು ಒಳಪ್ರವೇಶಿಸಲು ಬಿಡಬೇಡಿ. ಅಪರಿಚಿತರ ಸಹಾಯವನ್ನು ಎಂದೂ ಅಪೇಕ್ಷಿಸಬೇಡಿ.



ಹೊಸ ಏ.ಟಿ.ಏಮ್ ಕಾರ್ಡ್ ಪಡೆದರೆ , ಹಳೆ ಕಾರ್ಡ್ ನ್ನು ಬ್ಲಾಕ್ ಮಾಡಿ ಮತ್ತು ಹಳೆ ಕಾರ್ಡ್ ನ್ನು ಹರಿದು ಹಾಕಿ. 



ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ, ಮಾಲ್ ಗಳಲ್ಲಿ ಏ.ಟಿ.ಏಮ್ ಕಾರ್ಡ್ ಬಳಸುವಾಗ ನೀವು ಎದುರು ನಿಂತಿರಿ , ಇನ್ನೆಲ್ಲಿಯೋ ಒಯ್ದು ಸ್ವೈಪ್ ಮಾಡಲು ಒಪ್ಪಬೇಡಿ.


ನೀವು ಪಡೆದ ರಸೀತಿ ಯನ್ನು ಏ.ಟಿ.ಏಮ್ ರೂಮ್ ನಲ್ಲಿ ಬಿಸಾಕಬೇಡಿ. ಜೊತೆಗೆ ತೆಗೆದುಕೊಂಡು ಹೋಗಿ ಹರಿದು ಇನ್ನೆಲ್ಲೋ ಬಿಸಾಕಿರಿ. 



ಯಾವಾಗಲಾದರೂ ಏ.ಟಿ.ಎಂ ಮಷೀನ್ ಗೆ ಇನ್ನೇನಾದರೂ ಹೆಚ್ಚಿನ ಚಿಕ್ಕ ಪುಟ್ಟ ಸಲಕರಣೆ ಜೋಡಿಸಿದ್ದು ಗಮನಕ್ಕೆ ಬಂದರೆ ಆ ಏ.ಟಿ.ಎಮ್ ನಲ್ಲಿ ವ್ಯವಹರಿಸಬೇಡಿ.


ನೀವು ಮಾಡಿದ ಏ.ಟಿ.ಎಮ್ ವ್ಯವಹಾರದ ಬಗ್ಗೆ ನಿಮ್ಮ ಪಾಸ್ ಬುಕ್ ಜೊತೆ ಆಗಾಗ ತುಲನಾತ್ಮಕವಾಗಿ ಅಭ್ಯಾಸ ಮಾಡಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದರೆ ಸಮಯ ವ್ಯತ ಮಾಡದೆ ಕೂಡಲೇ ನಿಮ್ಮ ಕಾರ್ಡನ್ನು ಹಾಟ್ ಲಿಸ್ಟ್ ಗೆ ಸೇರಿಸಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದಾಗ ಹಾಟ್ ಲಿಸ್ಟ್ ಗೆ ಸೇರಿಸಲು ನಿಮ್ಮ ಬ್ಯಾಂಕ್ ನ ದೂರವಾಣಿ ನಂಬರ್ ನ್ನು ನಿಮ್ಮೊಡನೆ ಸದಾ ಇರಿಸಿಕೊಳ್ಳಿ . 



ಕೆಲವು ಬ್ಯಾಂಕ್ ಗಳ ದೂರವಾಣಿ ಸಂಖ್ಯೆ , ಹಾಟ್ ಲಿಸ್ಟ್ ಗೆ ಸೇರಿಸಲು ಹೀಗಿದೆ : 



State Bank of India 1800-112211



State Bank of Mysore 1800 - 425 -3800 ; 1800 - 112211 ; 080 - 26599990



Canara Bank 1800 - 425 - 6000 ; 1800 - 425 - 07000



Corporation Bank 1800 - 425 - 2407 ; 080 - 26600587 ; 080 - 26602500



Syndicate Bank 1800 - 425 - 0585 ; 09483522433 



Vijaya Bank 1800 - 425 - 9992 ; 080 - 41133500



ಈ ರೀತಿಯಲ್ಲಿ ಕಾಳಜಿ ವಹಿಸಿರಿ. ಕಾರ್ಡ್ ಕಳೆದಾಗ ಗೊಂದಲವಾಗುವದು ಸಹಜವಾದುದು. ಆದರೆ ದೃತಿ ಗೆಡಬೇಡಿ. ಕೂಡಲೇ ಕಾರ್ಯಪೃವೃತ್ತರಾಗಿ. 



ನಿಮ್ಮ ಏ.ಟಿ.ಎಮ್  ಕಾರ್ಡ್ ಕಳೆದಾಗ , ಕಾರ್ಡ್ ಬ್ಲಾಕ್ ಮಾಡಲು ತಡ ಮಾಡಿದರೆ ಕಾರ್ಡ್ ಸಿಕ್ಕವರು ಕೂಡಲೇ ಬೇರೆ ಬೇರೆ ಅಂಗಡಿಗಳಿಗೆ ಹೋಗಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಜಾಸ್ತಿ.  ಆದ ಕಾರಣ ನಿಮಗೆ ಆಗುವ ಹಾನಿ ತಪ್ಪಿಸಲು ಕಾರ್ಡ್ ಕಳೆದ ಕೂಡಲೇ , ಕಾರ್ಡ್ ಬ್ಲಾಕ್ ಮಾಡಿ. ತಡ ಮಾಡಬೇಡಿ, ನೆನಪಿರಲಿ. 


                                                                  **********

Monday, September 2, 2013

ದೊಡ್ಡವರ ಸಣ್ಣತನಗಳು.

ದಿನ  ಕಳೆದಂತೆ  ದೊಡ್ಡವರು, ಪ್ರಭಾವಿಗಳು ಎನ್ನುವವರು ಅತಿ ಸಂಕುಚಿತ ಮನೋಭಾವನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಾಕೋ ಎನೋ ಸಮಾಜಕ್ಕೆ ಆದರ್ಶವಾಗಿರಬೇಕಾದವರೇ ಪಾಠ ಹೇಳಿಸಿಕೊಳ್ಳುವ ಸ್ಥಿತಿ ತಲುಪುತ್ತಿರುವದು ಶೋಚನೀಯ.


ನಿನ್ನೆಯೋ ಮೊನ್ನೆಯೋ , ದಿನಪತ್ರಿಕೆಯೊಂದರ ವರದಿಯಲ್ಲಿ,  ದೀಪಬೆಳಗುತ್ತಿರುವವರಲ್ಲಿ ಒಬ್ಬರಾದ ಕರ್ನಾಟಕದ ರಾಷ್ಟ್ರಮಟ್ಟದ ನಾಯಕರ ಬಗೆಗೆ ಒಂದೇ ಒಂದು ಶಬ್ದ ಬರೆದಿಲ್ಲ. ಅವರು ಮಾಡಿದ ಭಾಷಣದ ಕುರಿತು ಒಂದು ಅಕ್ಷರವೂ ಇಲ್ಲ. ವರದಿಗಾರರೇನಾದರೂ ತಪ್ಪಿದರೇ  ಎಂದರೆ ಸುಲಭವಾಗಿ ಒಪ್ಪಲಾಗದು. ಸಂಪಾದಕರ, ಪತ್ರಿಕೆ ಮಾಲಿಕರ ಒಡಂಬಡಿಕೆಯೇ ಈ ರೀತಿ ಪತ್ರಿಕಾ ಧರ್ಮದ ವಿರೋಧೀ ನಿರ್ಣಯಗಳಿಗೆ ಹೇತುವಾಗಬಲ್ಲುದು ತಾನೇ?


ಇಂದಿನ ದಿನ ಪತ್ರಿಕೆಯೊಂದರಲ್ಲಿ, ವರದಿಯಲ್ಲಿ  ಒಬ್ಬರ ಚಿತ್ರವಿದೆ. ಟೈ ಕಟ್ಟಿ ಅತಿಥಿಗಳ ಜೊತೆ ಇರುವದನ್ನು ಚಿತ್ರದಲ್ಲಿ ನೋಡಿದಾಗ ಅತಿಥಿಗಳಲ್ಲೊಬ್ಬರೋ , ಸಂಘಟಕರಲ್ಲೊಬ್ಬರೋ ಆಗಿರಬೇಕು. ಅವರ ಕುರಿತು ವರದಿಯಲ್ಲಿ ಅಥವಾ ಚಿತ್ರದ ಅಡಿಬರಹದಲ್ಲಿ ಒಂದೇ ಒಂದು ಅಕ್ಷರವಿಲ್ಲ.  ಈ ರೀತಿ ಬೆಳವಣಿಗೆಗಳ ಹಿಂದೆ ಪತ್ರಿಕಾ ಧರ್ಮ ಮೀರಿದ ದುರುದ್ದೇಶಗಳಿರಲೇಬೇಕು.


ಇಂದು ಫೇಸ್ ಬುಕ್ ನೋಡುತ್ತಿದ್ದೆ. ಮಹಾಶಯರೊಬ್ಬರು  ತಮಗಿಷ್ಟವಿರದ  , ತಮ್ಮ ಸ್ಪರ್ಧಿಯಾಗಿರುವ ರಾಜಕಾರಣಿಯೊಬ್ಬರನ್ನು  ಖಂಡಿಸಲು  ಜನಸಾಮಾನ್ಯರು ಒಪ್ಪಿಕೊಂಡಿರುವ  ಸಂಘಟನೆಯ ಹೆಸರನ್ನು , ಮಠವೊಂದರ   ಸ್ವಾಮೀಜಿಗಳ   ಹೆಸರನ್ನು  ಬಳಸಿಕೊಂಡಿದ್ದರು.


ಈ ರೀತಿ ಸಮಾಜದಲ್ಲಿ ಬರುತ್ತಿರುವ ಬದಲಾವಣೆಗಳನ್ನು ನೋಡಿದಾಗ ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಮಾಜ ಯಾವ ರೀತಿ ಅನಪೇಕ್ಷಿತ ಬದಲಾವಣೆಗಳತ್ತ ಸಾಗೀತು ಎಂಬುದು ಎಲ್ಲ ಸಮಾಜ ಜೀವಿಗಳು ಯೋಚಿಸಬೇಕಾದ ಅವಶ್ಯಕತೆ . 

Tuesday, August 27, 2013

ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?

ನಾನೇನೂ   ಈ ಕೃತಿ ಇನ್ನೂ ಓದಿಲ್ಲ.  ಆದರೆ ಪುಸ್ತಕ ಕುರಿತು ಇಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಮಹಾಶಯರುಗಳೆಲ್ಲ ಕೃತಿ  ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ? ಎಂಬ ಸಂಶಯ ಉಂಟಾಗುತ್ತದೆ.  ಹೌದಾದರೆ ಕೃತಿ  ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಈ ಎಲ್ಲ ಮಹಾಶಯರುಗಳು ಅದ್ಯಾವ ಚಮತ್ಕಾರದಿಂದ ಪುಸ್ತಕ ಪಡೆದು, ಅಲ್ಲಿರುವ ಅಂಶಗಳನ್ನು  ಜೀರ್ಣಿಸಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂಬ ಜಿಜ್ಞಾಸೆ ಉಂಟಾಗುತದೆ.  ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?


ನಮ್ಮ ಸನಾತನ ಸಂಸ್ಕ್ರತಿ ಯಲ್ಲಿ ಚಾರ್ವಾಕನ ಉದಾಹರಣೆ ಬರುತ್ತದೆ. ಅಲ್ಲಿ ಚಾರ್ವಾಕನ ಸ್ಥಾನ ಇಂದಿನ ಎಡಬಿಡಂಗಿಗಳಂತಲೂ ಆಗಿರಲಿಲ್ಲ ಅಥವಾ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ ವಂಧಿ ಮಾಘಧರಿಂದ ಚಪ್ಪಾಳೆ ಗಿಟ್ಟಿಸುವ ವರ್ತಮಾನದ ಬಹುತೇಕ ವಿಧ್ವಂಸರುಗಳಂತೆಯೂ   ಇರಲಿಲ್ಲ. ಅಂತೆಯೇ ಶ್ರೀ ಶಂಕರರ ಮತ್ತು ಮಂಡನ ಮಿಶ್ರರ ಅವಿರತ ಅಹೋ ರಾತ್ರಿ ಮಂಡನೆ ಖಂಡನೆಗಳಿಂದೊಡಗೂಡಿದ ಚರ್ಚೆಯನ್ನೂ ಉದಾಹರಿಸಬಹುದು.


ಇಂದು ಜಗತ್ತು ಚಿಕ್ಕದಾಗುತ್ತಿದೆ ಅಂತೆಯೇ ಸಮಾಜದ ಗಣ್ಯರ ಮನಸ್ಸು, ಬುದ್ಧಿಗಳೂ ಆಕುಂಚನ ಹೊಂದುತ್ತಿವೆ.  ಇದು ವಿಷಾದನೀಯ ಮತ್ತು ಸಮಾಜ ವಿಕಸಿತತೆಗೆ  ಹಾನಿಕರ.

http://epapervijayavani.in/Details.aspx?id=8093&boxid=14755119


ಹರಿಹರ ಭಟ್, ಬೆಂಗಳೂರು .
ಚಿಂತಕ, ವಿಮರ್ಶಕ.

August 27 , 2013.

Friday, August 16, 2013

ಇಂದು, ಈಗಲೇ ಸಮಾಜದಲ್ಲಿ ಬರಬೇಕಾದ ಬದಲಾವಣೆ.

ಶ್ರೀ ಗುರುಭ್ಯೋ  ನಮಃ  /  ಹರಿಃ  ಓಂ   //

ಹರೇ ರಾಮ.


ಜೈ ಜೈ ಶ್ರೀ ರಾಮಕಥಾ , ಜೈ ಜೈ ಶ್ರೀ ರಾಮಕಥಾ. ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಹಿಡಿದಿಡುವ ರಾಮಕಥಾ.  ಎರಡನೆ ಮಾತಿಲ್ಲ. ಜೀವನದ ಕೆಲ ಸಮಯವನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುವ ಯಶಸ್ವಿ ಪ್ರಯೋಗ. ಎರಡನೇ ಮಾತಿಲ್ಲ. ರಾಮಕಥಾ ಕಲಾವಿದರ ತಂಡಕ್ಕೂ , ರಾಮಕಥಾ ನೇತ್ರತ್ವಕ್ಕೂ , ರಾಮಕಥಾ ಪ್ರಾಯೋಜಕ ಆರ್ಥಿಕ ಬಲಾಢ್ಯ ಬಂಧುಗಳಿಗೂ ಮನಸ್ವಿ ಅಭಿನಂದನೆಗಳನ್ನು ಅಭಿವ್ಯಕ್ತಿಸುತ್ತ , ಸಮಾಜದ ವಾಸ್ತವಿಕತೆಯತ್ತ ಯೋಚಿಸೋಣ.



ಇಂದಿನ ಹವ್ಯಕ ಸಮಾಜದಲ್ಲಿ ಎಣಿಕೆಗೆ ಸಿಗುವಷ್ಟು ಹವ್ಯಕ ಬಂಧುಗಳು ಮಾತ್ರ ಆರ್ಥಿಕವಾಗಿ ಬಲಾಢ್ಯರಾದ ಗುಂಪಿನಲ್ಲಿದ್ದಾರೆ. ಇಂದಿನ ಜನಜೀವನದ ಅವಿಭಾಜ್ಯ ಅವಶ್ಯಕತೆಗಳಾದ ಕುಟುಂಬಕ್ಕೊಂದು ಸರ್ವ ಋತು ರಕ್ಷಣೆ ನೀಡುವ ಸೂರು, ಪ್ರತಿ ಮಗುವಿಗೂ ಫಲಪ್ರದವಾಗಿ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವಂತಹ ಶಿಕ್ಷಣ , ಅಧುನಿಕ ಬದಲಾವಣೆಗಳಿಂದ ದೂರದೂರುಗಳು ಸಾಮಿಪ್ಯ ಪಡೆದಿರುವದನ್ನು ಅವಲೋಕಿಸಿ ಭಾವನಾತ್ಮಕ   ಬಂಧನಗಳನ್ನು ಬಲಾಢ್ಯಗೊಳಿಸಲು , ಕ್ರಮಿಸಲು ಬೇಕಾದ ಸ್ವಂತ ವಾಹನ  .. ಇತ್ಯಾದಿ ಅವಶ್ಯಕತೆಗಳನ್ನು ಪೂರೈಸಲಾಗದೆ , ಜೀವನ ಜಂಜಡಗಳಲ್ಲಿ ಸಿಲುಕಿಕೊಂಡಿರುವ ಹವ್ಯಕ ಭಾಂಧವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಆದರೆ ಆರ್ಥಿಕವಾಗಿ ಬಲಾಢ್ಯರಾದ ಬಂಧುಗಳ ಅಹಮಿಕೆಯ ವ್ಯಕ್ತನೆಯ ವೈಭವೋಪೇರಿತ ಮದುವೆ  , ಮುಂಜಿ, ಪಾರಾಯಣ , ರಾಮಕಥಾ.... ಇತ್ಯಾದಿ ಅಘಟಿತ ಘಟನೆಗಳಿಂದ  ಧಿಗ್ಬ್ರ್ಹಮಣೆಗೊಳಗಾಗಿ  , ಪ್ರಾಪಂಚಿಕ ವಾಸ್ತವಿಕತೆಯಿಂದ ಕೆಲ ಸಮಯ ದೂರವಾದರೂ, ತದ  ನಂತರ ವಾಸ್ತವಿಕತೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆಯ ಭೀಕರ ದಿನ ಜೀವನಕ್ಕೆ , ಪುನಹಪ್ರವೇಶ . ಇದುವೇ ಇಂದಿನ ವಾಸ್ತವಿಕತೆಯಾಗಿದೆ.  ಆದುದರಿಂದಲೇ ಇಂದಿನ ಹೆಚ್ಚಿನ ಹವ್ಯಕ ಬಾಂಧವರು ಸಮಾಜದ ಚಟುವಟಿಕೆಗಳಿಗೆ ತಾಟಸ್ತ್ಯ ಮನೋಭಾವನೆಯಿಂದ ದೂರದಲ್ಲಿರಬಯಸುತ್ತಾರೆ. ಒಂದೆಡೆ  ಹನ್ನೆರಡು ಲಕ್ಷ ಜನಸಂಖ್ಯೆಯೆಂದೂ, ಇನ್ನೊಂದೆಡೆ  ನಾಲ್ಕಾರು ಲಕ್ಷ ಜನಸಂಖ್ಯೆಯೆಂದೂ ಪರಿಗಣಿಸಲ್ಪಟ್ಟ ಹವ್ಯಕ ಸಮಾಜ ಇಂದು ಅಲ್ಲಲ್ಲಿ  ನೂರರ ಸಂಖ್ಯೆಯಲ್ಲಿ ವಿಝ್ರಂಭಿಸುತ್ತಿರುವ ನೇತಾರರ, ಆರ್ಥಿಕ ಬಲಾಢ್ಯರ ಕೈಯಲ್ಲಿ ನೋವಿನಿಂದ ನಲುಗುತ್ತಿದೆ. ಈ ನೋವು ಆಳ ಪ್ರಪಾತಿಯಾಗಿ ( undercurrent ) ಹರಿಯುತ್ತಿದ್ದರೆ, ಅರ್ಥಿಕ ಬಲಾಢ್ಯರ , ಅವರ ಹಿಂಬಾಲಕರ ಹೇಕಾರಗಳು , ಕೇಕೆಗಳು ಸಮಾಜದ ವ್ಯಕ್ತ ಸ್ಥರದಲ್ಲಿ  ತಾರಕಕ್ಕೇರಿದ ಲಯವಾಗಿ ಹೊರಹೊಮ್ಮುತ್ತಿದೆ.


ಏನು ಮಾಡಲಾದೀತು? ದಾರಿ ಸುಗಮವಲ್ಲ.


ಹವ್ಯಕ  ಸಮಾಜದ ಶ್ರೇಷ್ಟ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡ, ಸಮಾಜ ಭಾಂಧವರು ಬಹುತೇಕರು ಆಧುನಿಕ  ಜೀವನ ಶೈಲಿಯ ಪ್ರಭಾವಕ್ಕೊಳಗಾಗಿ, ಆಧುನಿಕ ಜೀವನದ ಸುಖ ಲೋಲುಪತೆಯನ್ನು ಪಡೆಯಲಾಗದೆ , ಅತ್ತ ಜೀವನ ಸಾಗಿಸುವ ಅನಿವಾರ್ಯತೆಗೊಳಗಾಗಿ ಯಾವುದ್ಯಾವುದೋ ಕೆಲಸಗಳನ್ನು ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಕಡು ಬಡವರಾಗಿದ್ದರೂ, ಸಮಾಜದ ಶ್ರೇಷ್ಟ ಸಂಸ್ಕೃತಿಯ ಗುಣಗಳನ್ನು  ಅವರ ಮಕ್ಕಳಲ್ಲಿ ಮೈಗೂಡಿಸಿ , ಮುಂದಿನ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಕಾತರರಾಗಿದ್ದಾರೆ. ಆದರೆ ಇಂದಿನ ಕ್ರೂರ ವಾಸ್ತವಿಕತೆಗಳಾದ ಶಾಲಾ ಡೊನೇಶನ್ನುಗಳು , ಇನ್ಫ್ಲುಯೆನ್ಸ್ ಗಳು ಸಮಾಜ ಬಾಂಧವರನ್ನು  ಅಸಹಾಯಕತೆಗೆ ತಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಆ ರೀತಿ ಸಮಾಜಬಾಂಧವರನ್ನು ಈ ವಿಷವರ್ತುಲಗಳಿಂದ ವಿಮುಕ್ತಿಗೊಳಿಸಲು ಸಮಾಜ ನೇತಾರರೆಲ್ಲ ಒಗ್ಗೂಡಿ , ಆರ್ಥಿಕವಾಗಿ ಬಲಾಢ್ಯರಾಗಿರುವ - ಸಮಾಜಕ್ಕೆ ಆರ್ಥಿಕವಾಗಿ ದಾನ ನೀಡಬಲ್ಲ ಉದಾರಿ ಹೃದಯ ಸಾಮ್ರಾಜ್ಯವನ್ನು ಹೊಂದಿದ ಸಮಾಜ ಬಾಂಧವರಿಂದ ಬರುವ ದಾನದ ಹಣವನ್ನು ಕ್ರೋಢೀಕರಿಸಿ ,  ಹೆಚ್ಚಿನ  ಸಂಖ್ಯೆಯಲ್ಲಿ   ಉಚಿತವಾದ , ಶಿಕ್ಷಣಸ್ನೇಹಿಯಾದ ಪೂರಕ ವಾತಾವರಣವುಳ್ಳ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ  ಅವಕಾಶಗಳುಳ್ಳ , ಸರ್ವ ರೀತಿಯ ಯೋಗ್ಯವಾದ ಖರ್ಚು ವೆಚ್ಚಗಳನ್ನು  ಹೊಂದಿಸಿ ಉಚಿತವಾಗಿ ಶಿಕ್ಷಣ , ಆರ್ಥಿಕವಾಗಿ ಹಿಂದುಳಿದ ಮಾತಾ ಪಿತೃರ ಮಕ್ಕಳಿಗೆ  ದೊರಕುವ ಸೌಲಭ್ಯವನ್ನೊದಗಿಸುವತ್ತ    ಗಮನ ಹರಿಸಬೇಕಾಗಿರುವದು ಇಂದಿನ  ತುರ್ತು ಅವಶ್ಯಕತೆಯಾಗಿದೆ.  ಗಮನವೀಯಬೇಕಾಗಿದ್ದು ಯೋಗ್ಯ ಪ್ರಚಲಿತ ಶಿಕ್ಷಣ , ಉಚಿತ ಶಿಕ್ಷಣ , ಆರ್ಥಿಕವಾಗಿ ಅತೀ ಹಿಂದುಳಿದಿರುವ ಸಮಾಜಬಾಂಧವರಿಗೆ ಮೊದಲ ಆದ್ಯತೆಯಿರಬೇಕಾಗಿದೆ.



ಈ ರೀತಿ ಬದಲಾವಣೆಯ ಮನೋಧರ್ಮ ಒಮ್ಮೆ ಸಮಾಜದಲ್ಲಿ ತೀವ್ರ ಸಂಚಲನೆ ಪಡೆದರೆ , ವರ್ತಮಾನಕಾಲದಲ್ಲಷ್ಟೇ ಅಲ್ಲ ಸರ್ವ ಕಾಲದಲ್ಲೂ, ಸಾರ್ವತ್ರಿಕವಾಗಿ ನಮ್ಮ ಸಮಾಜ ಶ್ರೇಷ್ಟ ಪರಂಪರೆಯನ್ನು ಉಳಿಸಿ, ಬೆಳೆಸಲಾದೀತು.  ಅವಕಾಶ ಕಲ್ಪಿಸದಿದ್ದರೆ " ನಮ್ಮನ್ನು ನಾವೇ ಶ್ರೇಷ್ಟರು " ಎಂದು ಡಂಗುರ ಸಾರುತ್ತಾ ಸಾಗುವ ಕಾಲ ಸದಾ ಮುಂದುವರಿದೀತು. ಬದಲಾವಣೆಗೆ ಸಕಾಲ ಇದು, ಸಮಾಜದ ನೇತಾರರು  ಮನಸ್ಸು ಮಾಡಲೇಬೇಕಾದ ಪರ್ವ ಕಾಲ ಇದು.


www.http://hareraama.in/



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
ಆಗಸ್ಟ್ ೧೭, ೨೦೧೩.  

Tuesday, July 2, 2013

ಸಾಮಾಜಿಕ, ಸಾಮೂಹಿಕ ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.

ಸಾಮಾಜಿಕ, ಸಾಮೂಹಿಕ  ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.



ಈಗಿನ ಸಿನೆಮಾಗಳು , ಟಿ.ವಿ ಶೋಗಳು ಜನಪ್ರಿಯತೆಯನ್ನು ಪಡೆಯಲು, ಹೆಚ್ಚು ಹಣ ಗಳಿಸಲು ಆಯ್ದುಕೊಂಡಿರುವ ದಾರಿಯೆಂದರೆ ಯಾವುದಾದರೊಂದು ಕೊಂಟ್ರೊವರ್ಸಿಯನ್ನು ಹುಟ್ಟುಹಾಕುವದು. ಇದು ಜನಸಾಮಾನ್ಯರೆಲ್ಲ ಗಮನದಲ್ಲಿರುವ ಪ್ರಸ್ತುತ ಕಾಲಘಟ್ಟದ ಬೆಳವಣಿಗೆಯಾಗಿದೆ. ಹಿಂದೆಲ್ಲ ಜನಮಾನಸದಲ್ಲಿ ದೀರ್ಘಕಾಲ   ನೆಲೆನಿಲ್ಲುವಂತಹ ಸಿನೇಮಾ, ಟಿ.ವಿ ಶೋಗಳನ್ನು ತೆಗೆಯಲು ಹೆಚ್ಚಿನ ಮುತುವರ್ಜಿ   ನೀಡಲಾಗುತ್ತಿತ್ತು.  ಇಂದಿನ ವಿಶೇಶ ಪರಿಣಿತಿಯತ್ತ ಸಾಗಿರುವ ತಂತ್ರಜ್ಞಾನದ ದಿನಗಳು ಆ ರೀತಿ ಜನಮಾನಸದಲ್ಲಿ ದೀರ್ಘಾವಧಿಗೆ ನೆನಪುಗಳಾಗಿ ನಿಲ್ಲುವಂತಹ ರಂಜನೆಯ ಜೊತೆಗೆ ಸಮಾಜಕ್ಕೆ ದಾರಿದೀಪವಾಗಬಲ್ಲ ಕಾರ್ಯಕ್ರಮಗಳನ್ನು ನೀಡಲು ಪೂರಕವಾಗಿರಬೇಕಿತ್ತು. ಆದರೆ ಇಂದು ಅಯೋಗ್ಯರೆಲ್ಲ ಯೋಗ್ಯರ ಮುಸುಕುಧಾರಿಗಳಾಗಿ ಈ ಕಾಲಮಾನಕ್ಕೆ ವರವಾಗಿರುವ ತಂತ್ರಜ್ಞಾನವನ್ನು ಶಾಪವಾಗಿಸಿ, ಸಾಮಾಜಿಕ ಜೀವನ ಶೈಲಿ, ಸಾಮಾಜಿಕ ನಿತ್ಯಜೀವನ , ಮನುಷ್ಯನ ಜೀವಿತದ ಉದ್ದೇಶ ಇವುಗಳನ್ನೆಲ್ಲಾ ತಿರುಚಿ, ಬಿಚ್ಚು - ಕಚ್ಚು,  ಕುಣಿ - ಮಿಣಿ  ಇವುಗಳನ್ನೇ ಜೀವನ ಮೌಲ್ಯಗಳಾಗಿ ಬಿಂಬಿಸುತ್ತಾ ಹೊರಟಿರುವದು ಶೋಚನೀಯ.



ಈಗಷ್ಟೇ ಅವಿರತವಾಗಿ 2 ,160  ಗಂಟೆಗಳಷ್ಟು ಮನರಂಜನೀಯ ವಾಗಿ ನಡೆದ ರಿಯಾಲಿಟಿ ಶೋ ವೊಂದನ್ನು ಪರಾಮರ್ಶಿಸಿದರೆ ಗೋಚರಿಸುವ ಅಂಶಗಳೆಂದರೆ,  ಜೀವನದಲ್ಲಿ ತಮ್ಮ ಅಚಾತುರ್ಯದಿಂದ ಕೊಂಟ್ರೊವರ್ಸಿಗಳನ್ನು ಹರಡಿಕೊಂಡು ಆ ಕೊಂಟ್ರೊವರ್ಸಿಗಳ ಸಿಕ್ಕುಗಳಿಂದ ಹೊರಬರಲು ತಮ್ಮ ಇಮೇಜ್ ಬಿಲ್ಡಿಂಗ್ ಗಾಗಿ ಒದ್ದಾಡುತ್ತಿದ್ದವರಿಗೆ , ಮುಳುಗುವವನಿಗೆ ಆಸರೆಯಾಗಿ ಹುಲ್ಲುಕಡ್ಡಿ ಬಂದಾಗ ಅದನ್ನೇ ತಬ್ಬಿ ದಂತೆ ಈ ಬಡಾ ಬಾಸನ್ನು ಅಪ್ಪಿ , ಮನ ಬಿಚ್ಚಿ , ಹುಚ್ಚುಚ್ಚಾಗಿ ದಿನಗಳೆದಂತೆ ತಬ್ಬುವದೇ ಜೀವನ, ತಬ್ಬಿ ತಬ್ಬಿ ನೋಡುಗರ ಎದೆಬಡಿತ ಹೆಚ್ಚಿಸಿದಷ್ಟೂ , ತಮ್ಮ ಕೊಂಟ್ರೊವರ್ಸಿಗಳಿಂದ ಆಚೆ ಬಂದಂತನಿಸಿ  ನೆಮ್ಮದಿ ಪಡೆಯುವದರಲ್ಲೇ ಸಾರ್ಥ್ಯಕ್ಯ  ಕಂಡ  ಮನೆ ಸೇರಿದ, ಮನೆಯಾಚೆ ಬಂದ , ಇನಾಮು ಪಡೆದ, ಕಪ್ ಎತ್ತಿದ, ಕಪ್ಪಗಾಗಿ ಜೊಲ್ಲು ಸುರಿಸಿದ, ಸೋರಿದ ಜೊಲ್ಲನ್ನು ಮರೆಮಾಚಿ ತೋರಗೊಡದ ಕೊಂಟ್ರೊವರ್ಸಿಗಳಿಗೆ, ಹಿಂದಿನ ದಶಕಗಳಲ್ಲಿ ಮೆರೆದ ಆ ರಂಜನಾ ಜಗತ್ತಿನ ಮುದಿ   ಹುಲಿ ಗಳಿಗೆ ತಾವು - ತಮ್ಮ  ಕ್ರಿಯೆಗಳು ಸಾಮಾಜಿಕ ಜೀವನಕ್ಕೆ, ಯುವಜನಾಂಗಕ್ಕೆ ಎಂತಹ ಸಂದೇಶ ನೀಡುತ್ತಿದ್ದೇವೆ , ನೀಡುತ್ತಿವೆ  ಎಂಬ ಪರಿವೆಯೇ ಇಲ್ಲದಂತಿರುವದು ಖೇದನೀಯ.    



ಈ ರೀತಿ ರಂಜನೆಯ ಬದುಕಿನ ಪರಿಣಾಮವಾಗಿ ಅಮಾಯಕ , ಅನನುಭವಿ ಯುವ ಜೀವಗಳು ಜೀವನ ಸಾರ್ಥಕತೆ ಅಥವಾ ನಿತ್ಯ ಜೀವನ ಸಾಗಿಸಲು, ಪೂರ್ಣ ಬದುಕೊಂದನ್ನು ಕಂಡುಕೊಳ್ಳಲು ವ್ಯಯಿಸಬೇಕಾದ ಕಾಲಾವಕಾಶವನ್ನು ದೂರ ಮಾಡಿ , ಸಂಪೂರ್ಣವಾಗಿ ಬಿಚ್ಚು- ಕಚ್ಚು, ಕುಣಿ - ಮಿಣಿ ಜೀವನದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಅತ್ತ ಆ ರೀತಿ ಗುಂಪುಗಳಲ್ಲಿ ಯಶಸ್ಸನ್ನು ಕಾಣದೆ , ಇತ್ತ ಸಹಜ ಸಿದ್ಧ ಜೀವನ ಪದ್ದತಿಯಿಂದ ದೂರಾಗಿ ಯೌವನದಲ್ಲೇ ನಿರಾಶದಾಯಕರಾಗಿ ,  ತಮ್ಮ ಜೀವನವನ್ನೆ ನಿರಾಶೆಯಿಂದ ಕೊನೆಗೊಳಿಸುವ ಹಂತ ತಲುಪುತ್ತಿರುವದು ಎಲ್ಲೆಡ ವೇದ್ಯ ಸಂಗತಿಯಾಗಿದೆ.



ಈ ನಡುವೆ ಇನ್ನೊಂದು ವಿಷಾದನೀಯ  ವಿಷಯವೆಂದರೆ ಸಾತ್ವಿಕ ಸಮಾಜದಲ್ಲೂ ಈ ರೀತಿಯ ಮನರಂಜನೆಯತ್ತ ಆಕರ್ಷಿತರಾಗುತ್ತಿರುವವರ   ಸಂಖ್ಯೆ   ಗಣನೀಯವಾಗಿ ಹೆಚ್ಚುತ್ತಿದೆ. ಇಂದಿನ ಕಾಂಚಾಣದ ಕುಣಿತ, ಜನ ಸಮೂಹದಿಂದ ಸಿಗುವ ಜನಪ್ರಿಯತೆ  ಇವುಗಳತ್ತ ಆಕರ್ಷಿತರಾಗಿ, ತಮ್ಮ ಜೀವನ ಕಾಲದಲ್ಲಿ ಬಂದೊದಗಿರದ  ಆಸ್ತಿ - ಪಾಸ್ತಿ ,  ಜನಪ್ರಿಯತೆ ತಮ್ಮ ಮಕ್ಕಳ ಕಾಲದಲ್ಲಾದರೂ, ತಮ್ಮ ಮಕ್ಕಳಿಂದಲಾದರೂ ತಮಗೆ ಬರಲಿ ಎಂಬ ಸ್ವಾರ್ಥದಿಂದ , ಅನಾನುಕೂಲದಲ್ಲೇ ಅನುಕೂಲ ಕಲ್ಪಿಸಿ , ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ - ಜುಟ್ಟಿಗೆ ಮಲ್ಲಿಗೆ ಎಂಬಂತೆ , ಮಕ್ಕಳನ್ನು ಆಧುನಿಕ ಶಾಲೆಗಳಿಗೆ ಕಳಿಸಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತ,  ಅತ್ತ ಪಾಶ್ಚಿಮಾತ್ಯರಾಗುವ ಧೈರ್ಯ - ಸ್ಥೈರ್ಯವಿಲ್ಲದೆ, ಇತ್ತ ಪೌರಾತ್ಯ ಸಂಸ್ಕಾರಗಳನ್ನು ಆಡಂಬರಾತ್ಮಕವಾಗಿ ಅನುಸರಿಸುತ್ತ , ಬಿ.ಪಿ - ಶುಗರ್ - ಹಾರ್ಟ್ ಅಟೆಕ್     ಗಳೆಂಬ ರಾಕ್ಷಸರ ಕಾಟವನ್ನು ತಾಳಲಾಗದೆ , ಅಯ್ಯೋ ಜೀವನವೇ ......... ಎಂದು ದಿನ ದೂಡುವವರೊಂದೆಡೆಯಾದರೆ, ತಮ್ಮ ಯೋಚನಾ ಶಕ್ತಿಯನ್ನೇ ಕಳೆದುಕೊಂಡು ಜೀವನಕ್ಕೇ ಅಂತ್ಯ ತಂದೊಡ್ಡಿಕೊಳ್ಳುವ ಮಂದಿ ಇನ್ನೊಂದೆಡೆ ಕಾಣಬರುತ್ತಾರೆ.

                                                *********************

Friday, June 21, 2013

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಯವರಿಗೊಂದು ಕಿವಿಮಾತು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಯವರಿಗೊಂದು ಕಿವಿಮಾತು.


http://epapervijayavani.in/Details.aspx?id=6667&boxid=22551156


ಎಷ್ಟೇ ಕಾರ್ಯಕ್ರಮಗಳು , ಮೀಟಿಂಗಳು ಇದ್ದರೂ ಸಹ ಬೆಂಗಳೂರಿನಲ್ಲಿದ್ದಾಗ , ದಿನಕ್ಕೆ ಎರಡು ತಾಸು ಪ್ರತ್ಯಕ್ಷ ಫಲ (direct immediate   results  ) ಕೊಡಬಹುದಾದ ಈ ಕೆಳಗಿನ ಸಲಹೆಗಳನ್ನು ಅಳವಡಿಸಿಕೊಳ್ಳಿ, ಅದರ ನೇರ ಫಲಾನುಭವಿಗಳು ತಾವು ಮತ್ತು ತಮ್ಮ ಕಾಂಗ್ರೆಸ್ ಪಕ್ಷ ಆಗಿರುತ್ತೀರಿ. ಇಂದಿನ ಪರಿಸ್ತಿತಿಗಳಲ್ಲಿ ಈ ರೀತಿ ಮಾಡಿದರೆ ಹಿಂಬಾಲಕರು ಓಡಿಹೋದಾರೆಂಬ ಭಯವಿದ್ದರೆ, ಬರುವ ಲೋಕಸಭಾ ಚುನವಣೆವರೆಗಾದರೂ ಪ್ರಯತ್ನಿಸಿ ನೋಡಿ:



೧.    ರಸ್ತೆಯಲ್ಲಿ escorts  ಜೊತೆ ಭುರ್ರ್ ಎಂದು ಓಡಿಹೋಗದೆ, ರಸ್ತೆ ಮಧ್ಯೆ ಇಳಿದು ರಸ್ತೆ ಪರಿಸ್ತಿತಿಗಳನ್ನು ಗಮನಿಸಿ. ಸೂಕ್ತ ಹಣಕಾಸಿನ ಅಧಿಕಾರ, ಆಡಳಿತ ಅಧಿಕಾರವುಳ್ಳ ಅಧಿಕಾರಿಯನ್ನು ಕೂಡಲೇ ಸ್ಥಳಕ್ಕೆ ಕರೆಯಿಸಿ , ಜನ ಸಾಮಾನ್ಯರ ಎದುರು ಅಧಿಕಾರಿಗೆ ಆಗಬೇಕಾದ ಕೆಲಸಗಳನ್ನು ಪೂರೈಸಲು ಸಮಯ ನಿಗದಿ ಪಡಿಸಿ.  ಕಾರ್ಯ ಆಗುವದನ್ನು ನಿಮ್ಮ ಅಧಿಕಾರಿ ಸಹಾಯಕರ ಮೂಲಕ ಖಾತ್ರಿ ಪಡಿಸಿಕೊಳ್ಳಿ. ನಿಮ್ಮ ಪ್ರತಿ ಆಜ್ಞೆಯನ್ನೂ ನಿಮ್ಮ ಅಧಿಕಾರಿ ಸಹಾಯಕ ಕಾರ್ಯ ರೂಪಕ್ಕೆ ತರುವಂತೆ ನೋಡಿಕೊಳ್ಳಿ. ಪ್ರತಿ ಭಾನುವಾರ ಆ ವಾರದ ನಿಮ್ಮ ಆಜ್ಞೆ ಕಾರ್ಯರೂಪಕ್ಕೆ ಬಂದಿದೆಯೋ ಎಂದು ವಿಚಾರಿಸಿಕೊಳ್ಳಿ, ಆಗಾಗ ಸ್ವತಹ ಆ ಸ್ಥಳಗಳಿಗೆ ಹೋಗಿ , ಅಲ್ಲಲ್ಲಿ ಪರಾಮರ್ಶಿಸಿ.



೨.    ಕೇವಲ ಪತ್ರಿಕೆಯವರ ಜೊತೆ ಮಾತನಾಡುವದು, ಪತ್ರಿಕಾ ಹೇಳಿಕೆ ನೀಡುವದು , ಆಗಾಗ ಮೀಟಿಂಗಳನ್ನು    ಮಾಡಿ  ಅಧಿಕಾರಿಗಳಿಗೆ ಎಚ್ಚರಿಕೆ ನೀಡುವದು ಇವೆಲ್ಲಾ ಇಂದಿನ ಪರಿಸ್ತಿತಿಯಲ್ಲಿ ಸವಕಲು ನಾಣ್ಯಗಳಿದ್ದಂತೆ , . ಅಧಿಕಾರಿ ವರ್ಗ ಸಂಪೂರ್ಣವಾಗಿ ದಪ್ಪ ಚರ್ಮ ಬೆಳೆಸಿಕೊಂಡಿದ್ದಾರೆ ಮತ್ತು ಈ ವರ್ತನೆಗಳಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದ ರಾಜಕಾರಣಿಗಳೇ ಕಾರಣೀಕರ್ತೃರು . ಮಂತ್ರಿ ಖುರ್ಚಿಯಲ್ಲಿ ಕುಳಿತವರೊಡನೆ ಮೆತ್ತಗೆ ಮಾತನಾಡಿ , ಮಂತ್ರಿಗಳ ದಾರಿ ತಪ್ಪಿಸುವ ಚಾಣಕ್ಷ ? ನಡೆಗಳು ಅವರಿಗೆ ಕಾರ್ಯಗತವಾಗಿ, ಬ್ರಹ್ಮ ಬಂದರೂ ಈ ಸ್ತಿತಿ ಬದಲಾಗುವದಿಲ್ಲ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ.  ಜನಸಾಮಾನ್ಯರಿಗೆಲ್ಲ ಗೊತ್ತಿರುವ ವಿಷಯವೆಂದರೆ, ವರ್ಗಾವಣೆಯ ಕಾಲವೆಂದರೆ ರಾಜಕೀಯದವರಿಗೆಲ್ಲಾ ಸುಗ್ಗಿಯ ಕಾಲ, ಒಂದೋ ಎರಡೋ ವರ್ಗಾವಣೆ ಆಯಕಟ್ಟಿನ ಅಂದರೆ ಹೆಚ್ಚಿನ ಲಂಚವನ್ನು ಹೊಡೆಯುವ ಅಧಿಕಾರಿ ಖುರ್ಚಿ , ಸಿಕ್ಕಿದರೆ ಆ ಮರಿ ರಾಜಕಾರಣಿ ಮುಂದೆ ಪುಡಿ ರಾಜಕಾರಣಿ, ಆರೆಂಟು ವರ್ಗ ಮಾಡಿಸುವ ಅದೃಷ್ಟ ಖುಲಾಯಿಸಿದರೆ ಆ ರಾಜಕಾರಣಿ ಮುಂದೆ ಹಿಡಿ ರಾಜಕಾರಣಿ ( ದೊಡ್ಡ ರಾಜಕಾರಣಿಗೆ ಪಾತ್ರೆ ಹಿಡಿಯುವವ ) , ಹತ್ತಾರು ವರ್ಗ ಮಾಡಿಸಬಲ್ಲವ ಲಂಚ - ಮಂಚ ದ ಚಾಕ ಚಕ್ಯತೆ ಕರಗತಮಾಡಿಕೊಂಡ " ಕೋಟಿ " ರಾಜಕಾರಣಿ ಹೀಗೆ ಸಾಗುತ್ತಿದೆ ಇಂದಿನ ಈ ಮೂವತ್ತು ವರ್ಷಗಳ ರಾಜಕಾರಣ - ರಾಜಕಾರಣಿಗಳ ಕಾರ್ಯವಿಧಾನದಿಂದ ಬಂದೊದಗಿದ ಬಿರುದು ಬಾವಲಿಗಳು.



೩.  ಹಿಂದೆಲ್ಲಾ ಊಟ , ತಿಂಡಿ ಖರ್ಚು ಮಾಡಿದರೆ ರಾಜಕಾರಣಿಗೆ ತನ್ನ ಹಿಂಬಾಲಕರನ್ನು ಹಿಡಿದಿಡಲು ಸಾಧ್ಯವಿತ್ತು,  ಈ ಮೂವತ್ತು ವರ್ಷಗಳಲ್ಲಾದ ಬದಲಾವಣೆ ನೋಡಿ.  ಅಧಿಕಾರಿಗಳ ವರ್ಗದ ವರ್ಗಾವಣೆ ಮಾಡಿ ದುಡ್ಡು ಹೊಡೆಯುವ ವ್ಯವಸ್ತೆಗೆ ಶರಣಾಗದಿದ್ದರೆ ಆರು ತಿಂಗಳು ಒಂದು ವರ್ಷದಲ್ಲೆ ಹಿಂಬಾಲಕ ಇನ್ನೊಂದೆಡೆ ಮುಖ  ಮಾಡುತ್ತಾನೆ. ಚುನಾವಣೆ ಸಮಯದಲ್ಲಂತೂ ವಾರ ವಾರ, ತಿಂಗಳುಗಳಲ್ಲಿ ಮುಖಂಡರುಗಳ ಬದಲಾವಣೆ ಕಾಣುತ್ತಿರುತ್ತೇವೆ. ಚುನಾವಣೆ ಬಂತೆಂದರೆ ಜನಗಳಿಗೆ ಸುಗ್ಗಿ ಕಾಲ. ಒಬ್ಬ ಮತವೊಂದಕ್ಕೆ ಐದು ನೂರು ಕೊಟ್ಟರೆ ಇನ್ನೊಬ್ಬ ಸಾವಿರ ಹಂಚುತ್ತಾನೆ. ಒಬ್ಬ ಟಿ.ವಿ ಕೊಡಿಸಿದರೆ ಇನ್ನೊಬ್ಬ ಫ್ರಿಜ್ಜ್  ಕೊಡಿಸುತ್ತಾನೆ, ಇವೆಲ್ಲ ಜನಸಾಮಾನ್ಯರ ಕಣ್ಣಿರೆ ರಾಚುವ ಸತ್ಯ.  ಕೋಟಿ , ಕೋಟಿ ಬೆಲೆಬಾಳುವ ಸೈಟ್ ಮಾರಿ ಹಣ ಖರ್ಚು ಮಾಡಿಯೂ ಆರಿಸಿಬರದ , ಮೂರ್ಖ  ರಾಜಕಾರಣಿಗಳು ನಮ್ಮೆಲ್ಲರ ಮಧ್ಯೆಯೇ ಓಡಾಡಿಕೊಂಡಿದ್ದಾರೆ.  ಆದರೆ ವಿಷಾದದ ಸಂಗತಿಯೆಂದರೆ ಈ ರೀತಿ ಜನಗಳು ಸುಂದರವಾದ
" ಪ್ರಜಾಪ್ರಭುತ್ವ"  ಎಂಬ ವ್ಯವಸ್ತೆಯನ್ನೇ ಹಾಳುಗೆಡವಿದ್ದಾರೆ.



೪.  ಈ ಮೇಲೆ ನೀಡಿದ ಸಲಹೆಯನ್ನೊಮ್ಮೆ ಪ್ರಯೋಗಕ್ಕೆ ತನ್ನಿ. ನೀವು ವೈಯಕ್ತಿಕವಾಗಿಯೂ ಜನಾನುರಾಗಿಯಾಗುತ್ತೀರಿ, ನಿಮ್ಮ ಪಕ್ಷಕ್ಕೂ ನಿಮ್ಮಿಂದ ಒಳ್ಳೆ ಹೆಸರು ಬರುತ್ತದೆ, ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದರ ಫಲವಾಗಿ ಒಳ್ಳೆ ಫಲಿತಾಂಶ ಸಹಜವಾಗಿ ಒಲಿದು ಬರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬೆವರು ಹರಿಸಿ ದುಡಿದ ನಿಮ್ಮ ಕಾರ್ಯಕರ್ತರ ಬಾಯಲ್ಲೇ,  " ಇಲ್ಲಿ ಇವರು ,ದೇಶಕ್ಕೆ ಮಾತ್ರ  ಮೋದಿ " ಎಂಬುದನ್ನು   ಕೇಳಿದ್ದೇನೆ.



ಒಮ್ಮೆ ನೀವು ಬದಲಾವಣೆ  ರೀತಿ ಕಾರ್ಯ ಶೈಲಿ ಅಳವಡಿಸಿಕೊಂಡರೆ ಮುಂದೆಂದೂ ನಿಮ್ಮ ರಾಜಕೀಯ ಜೀವನದಲ್ಲಿ ಸೋಲನ್ನು ಕಾಣುವದೇ ಇಲ್ಲ. ಜನ ಅಶಿಕ್ಷಿತನಿರಲಿ, ಸುಶಿಕ್ಷಿತನಿರಲಿ ತುಂಬಾ ಜಾಣರಿದ್ದಾರೆ, ನಿಮಗೆ ಶುಭವಾಗಲಿ.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ,  ಹವ್ಯಾಸಿ ಪತ್ರಕರ್ತ .

www.hariharbhat.blogspot.com

June 22, 2013.

Monday, June 17, 2013

ರೂಪಾಯಿ ಇಪ್ಪತ್ತೈದು ಲಕ್ಷ ಘೋಷಿಸಿದ ಸಂಸದ, ಶ್ರೀ .ಎಚ್.ಎನ್.ಅನಂತಕುಮಾರ್ ಮತ್ತು ಲಕ್ಷ ಲಕ್ಷ ಕೊಡುಗೆ ಕೊಡುವತ್ತ ಮನಸ್ಸು ಇದೆ , ಪದಾಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸೂಚ್ಯವಾಗಿ ಅರುಹಿದ ನೂತನ ಕಾಂಗ್ರೆಸ್ ಶಾಸಕ ಶ್ರೀ. ಶಿವರಾಮ  ಹೆಬ್ಬಾರ.



ನಿನ್ನೆ ( ಜೂನ್ 17 , 2013  ) ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಹಬ್ಬದ ವಾತವರಣ. ಪ್ರಖರವಾದ ವಿಧ್ಯುದ್ದೀಪಾಲಂಕಾರದ ಜೊತೆಗೆ ಶುಭ್ರ , ಸ್ವಚ್ಚ, ಶ್ವೇತ ಬಣ್ಣದಿಂದ  ಕಂಗೊಳಿಸುವ . ನಮ್ಮ ನಿಮ್ಮೆಲ್ಲರ ಮನದ ಮೂಲೆಯಲ್ಲಿ ಹುದುಗಿರುವ ಸ್ವರ್ಗ ಸೌಂದರ್ಯವನ್ನು ನೆನಪಿಸುವ , ತಂಪು ಸೂಸಿ ಮನವನ್ನು ಪ್ರಫುಲ್ಲಗೊಳಿಸುವ , ಮುದ ನೀಡುವ ಮಾದಕ ಸೌಂದರ್ಯವನ್ನು ಹೊರಸೂಸುವಂತೆ ಶೃಂಗಾರಗೊಂಡ  ಸಭಾವೇದಿಕೆ. ದಾರಿಯುದ್ದಕ್ಕೂ ಬಣ್ಣ ಬಣ್ಣದ ವಸ್ತ್ರವಿನ್ಯಾಸದಿಂದೊಡಗೂಡಿದ ಶೃಂಗಾರ ಸ್ವಾಗತ. ಓಹೋ ಈ ಸಮಾಜದವರೆಲ್ಲಾ ಚಿಂತೆಯಿಂದ ವಿಮುಕ್ತಿ ಹೊಂದಿ ಸಮೃದ್ಧಿಯಲ್ಲಿ ಇಂದು ಬಾಳುತ್ತಿರುವವರೋ ಎಂಬಂತಹ ನಗು, ಕೇಕೆ  ಹೊರಸುಸುತ್ತ , ತಮ್ಮ ತಮ್ಮಲ್ಲಿ ಮಾತಿನ   ಹೊನಲು ಹಾರಿಸುತ್ತ , ಅತಿಥಿ - ಅಭ್ಯಾಗತರಿಗಾಗಿ   ಕಾದಿದ್ದ  ಸಮಯ,  ಆಗ ಸಾಯಂಕಾಲ ನಾಲ್ಕು ಗಂಟೆ.



ಹೌದು, ಹವ್ಯಕ ಸಮಾಜದವರೆಲ್ಲ ಸೇರಿ, ನೂತನ ವಿಧಾನ ಸಭೆ ಗೆ ನಡೆದ ಚುನಾವಣೆಯಲ್ಲಿ  ಆಯ್ಕೆಯಾದ ,  ವಿಪ್ರ ಜನಾಂಗದಲ್ಲಿ ಜನಿಸಿದ ಶಾಸಕರನ್ನು ಆಮಂತ್ರಿಸಿ, ಸನ್ಮಾನಿಸುವ ಈ ಕಾರ್ಯಕ್ರಮ ಅತಿ ವಿಝೃಂಬಣೆಯಿಂದ    ಸಂಪನ್ನವಾಯಿತು.  ಹವ್ಯಕ ಸಭಾಭವನ ಹವ್ಯಕ ಸಮಾಜದ ಹಿರಿಯರಿಂದ, ಗಣ್ಯರಿಂದ , ದಾನಿಗಳಿಂದ , ಚುರುಕು - ಚತುರ ಹವ್ಯಕ ಯುವ ಜನಾಂಗದಿಂದ ತುಂಬಿತ್ತು.



ಹವ್ಯಕ ಪದಾಧಿಕಾರಿಗಳಿಂದ ಪಾರಂಪರಿಕ ಆರಂಭದ   ಮಾತುಗಳು ಮುಗಿದೊಡನೆ, ಅತಿಥಿ - ಅಭ್ಯಾಗತರೆಲ್ಲ ಸೇರಿ ಜ್ಯೋತಿ ಬೆಳಗಿಸುವ ಕಾರ್ಯ ನೆರವೇರಿತು. ಸನ್ಮಾನಿತ ಶಾಸಕ ದಿನೇಶ್ ಗುಂಡುರಾವ್ ರವರು ಮಾತನಾರಂಭಿಸಿ ಈ ಕಾಲದ ಜಾತಿವ್ಯವಸ್ಥೆಯನ್ನು ನಾವು ಎಷ್ಟೇ ಅಲ್ಲಗಳೆದರೂ, ಎಲ್ಲ ನಿರ್ಧಾರಗಳಿಗೂ ಜಾತಿಯೇ ಪ್ರಧಾನವಾಗಿ ಪರಿಗಣಿಸಲ್ಪಡುತ್ತಿದೆ, ಮಂತ್ರಿಯಾಗಲೂ ಬ್ರಾಹ್ಮಣ ಗುಂಪಿನಲ್ಲೇ ಪೈಪೋಟಿ ನಡೆಸಬೇಕಾದುದು ಇಂದಿನ ಸ್ತಿತಿ , ಎಂದು ನೇರ ನುಡಿಯಿಂದ ವಾಸ್ತವಿಕತೆಯನ್ನು ಬಿಚ್ಚಿಟ್ಟರು. ಬ್ರಾಹ್ಮಣರು ಸಂಖ್ಯಾ ಬಲದಿಂದ ಆರಿಸಿಬರುವವರಲ್ಲ, ಎಲ್ಲ ಸಮಾಜದವರೊಡನೆ ಸ್ನೇಹ  ಸಂಪರ್ಕ, ಉತ್ತಮ ಸೇವಾ ಮನೋಭಾವ ಇಟ್ಟು ಮುನ್ನಡೆಯುವದರಿಂದ ಪುನಃ ಪುನಃ ಶಾಸನ ಸಭೆಗೆ ಆಯ್ಕೆಯಾಗಿ  ಬರುತ್ತಾರೆ  , ಈ ರೀತಿ ಆಯ್ಕೆಯಾಗಿ ಬಂದು ಎಲ್ಲ ಸಮಾಜದ ಸೇವೆ ಮಾಡುವದರ ಜೊತೆ , ತನ್ನ ಸಮಾಜದ ಬಗೆಗೂ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದು ತಮ್ಮ ನೇರ , ವಾಸ್ತವಿಕ ನುಡಿಗಳಿಂದ ಸಭಿಕರೆಲ್ಲ ತಲೆದೂಗುವಂತೆ ಮಾಡಿದರು.



ನನ್ನ ಕ್ಷೇತ್ರ ಕಡೂರಿನಲ್ಲಿ ಇರುವದು ಐದು ನೂರು ಬ್ರಾಹ್ಮಣ ಮತದಾರರು ಮಾತ್ರ .  ನಲವತ್ತ್ಮೂರು ಸಾವಿರಕ್ಕೂ ಅಧಿಕ ಮತಗಳಿಂದ ಆಯ್ಕೆಯಾದ , ಬ್ರಾಹ್ಮಣನಾದ ನಾನೇ ನಿಜವಾದ  ಜಾತ್ಯಾತೀತವಾದದ   ಹರಿಕಾರ , ಪ್ರತಿನಿಧಿ ಎಂದು ಅತಿ ಅಭಿಮಾನದಿಂದ ನುಡಿದರು. ಆರಂಭದಲ್ಲಿ ತನ್ನ ಗೋತ್ರ ಪ್ರವರವನ್ನು ಹೇಳಿ ಎಲ್ಲರಿಗೂ ಅಭಿವಾದಯೇ ಎನ್ನುತ್ತಾ  , ಈ ಆರಂಭದ ವಿಶ್ಲೇಷಣೆ ಮಾಡಿದರು. ಅನಂತಕುಮಾರರಾದಿಯಾಗಿ ಎಲ್ಲರು ತಾನು ಬ್ರಾಹ್ಮಣನೆಂದು ಹೇಳಿಕೊಳ್ಳಬೇಕಾಗಿಲ್ಲ , ಪಕ್ಷವೇ ಗುರುತನ್ನು ಪ್ರತಿನಿಧಿಸುವದು ಸಾಮಾನ್ಯರ ಅರಿವು, ಆದರೆ ನಾನೊಬ್ಬ ಬ್ರಾಹ್ಮಣ, ಬ್ರಾಹ್ಮಣವಾದಿ ಅಲ್ಲವೆಂಬ ರೀತಿ ಸಮಾಜದಲ್ಲಿ ತೋರಿಸಿಕೊಂಡಿರುವ  ಪಕ್ಷವೊಂದರಲ್ಲಿದ್ದರೂ ಬ್ರಾಹ್ಮಣನಾಗಿ , ಬ್ರಾಹ್ಮಣ್ಯ ಬಲದಿಂದಲೇ , ಬ್ರಾಹ್ಮಣೇತರರ ಬೆಂಬಲದಿಂದ ಆಯ್ಕೆಯಾಗಿ ಬಂದಿರುವ ಶಾಸಕ.  ನಾನೂ ಯಾವ ಬ್ರಾಹ್ಮಣ ಶಾಸಕರಿಗೂ  ಬ್ರಹ್ಮ ಹಿತ, ಬ್ರಾಹ್ಮಣ ಚೇತೊಹಾರಿಕೆಯಲ್ಲಿ ಕಮ್ಮಿಯಿಲ್ಲ , ನನ್ನ ಬೆಂಬಲ ಸದಾನಿಮ್ಮೊಡನಿರುತ್ತದೆ ಎಂದು, ಸ್ವರ್ಣವಲ್ಲಿ ಗುರುಗಳು , ಆ ಪ್ರದೇಶಗಳೂ ತಮ್ಮೊಡನೆ ಇರುವ ಸಂಭಂದಹಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಜನರ ಅಭಿಮಾನ ಗಳಿಸಿದರು.


ನಮ್ಮ ಕಾಗೇರಿಯವರು ನಮ್ಮ ಹವ್ಯಕ ಭಾಷೆಯಲ್ಲಿ ಮಾತನಾಡಿ ಕೃಷಿಯನ್ನು ಅವಲಂಬಿಸಿ, ಬ್ರಾಹ್ಮಣ್ಯವನ್ನು ಕಾಪಿಟ್ಟು , ಗೋ ಸಂರಕ್ಷಣೆ , ಗೀತಾ ಪಠಣ , ಯಕ್ಷಗಾನ ಕಲೆ ಉಳಿಸುತ್ತ , ಬೆಳೆಸುತ್ತ ಬಂದ ಹವ್ಯಕರು ಬ್ರಾಹ್ಮಣರಲ್ಲೇ   ವೈಶಿಷ್ಠ್ಯತೆ ಹೊಂದಿದವರು,   ಈ ಕಾಲ ಘಟ್ಟದಲ್ಲಿ ಕೈಗೊಳ್ಳುತ್ತಿರುವ ನೂತನ ಕಟ್ಟಡ ಯೋಜನೆಗೆ ತಮ್ಮೆಲ್ಲರಿಂದ ಹೆಚ್ಚಿನ ಧನ ಸಹಾಯ ಅಪೇಕ್ಷಿಸುತ್ತಿದ್ದಾರೆ    ಎಂದು  ಅಹವಾಲನ್ನಿತ್ತರು.


ನಂತರ ಮಾತನಾಡಿದ ಯಲ್ಲಾಪುರದ ಶಾಸಕ ಶ್ರೀ ಶಿವರಾಮ ಹೆಬ್ಬಾರ, ಅರಬೈಲು ಹವ್ಯಕ ಸಮಾಜದ ಈ ಕಾಲಮಾನದ ಸ್ತಿತಿ ಗತಿಗಳನ್ನು ಬಹಳ ಸೂಕ್ಷ್ಮವಾಗಿ ಅಭ್ಯಸಿಸಿದಂತೆ ಕಂಡುಬಂದಿದ್ದು ವಿಶೇಷವಾಗಿ ಉಲ್ಲೇಖನೀಯ. ಹವ್ಯಕ ಸಮಾಜ ಮುಂದುವರಿದ ಸಮಾಜ, ಅವರಿಗೆ ಯಾವುದೇ ಆಸರೆಯ ಅವಶ್ಯಕತೆಗಳಿಲ್ಲ ಎಂಬಂತೆ ಇತರೆ ಸಮಾಜದವರು ಅಭಿಪ್ರಾಯ ಹೊಂದಿದ್ದಾರೆ, ಆದರೆ ಇದು   ವಸ್ತವಿಕತೆಯಿಂದ ಬಹು ದೂರ. ಹವ್ಯಕರಲ್ಲಿ ಅತಿ ಕಡು ಬಡವರಿದ್ದಾರೆ, ಇಂದೂ ಗುಡಿಸಲುಗಳಲ್ಲಿ ಗುಡ್ಡಗಾಡಿನಂತಹ ಪ್ರದೇಶಗಳಲ್ಲಿ ಅತಿ ಹೀನಾಯ ಸ್ತಿತಿಗಳಲ್ಲಿ ಬದುಕುತ್ತಿದ್ದವರಿದ್ದಾರೆ,  " ನಾನು ಮತ್ತು ಕಾಗೇರಿ ಆ ರೀತಿ ಬದುಕುತ್ತಿರುವವರನ್ನು ದತ್ತು ತೆಗೆದುಕೊಂಡು ಐಎಎಸ್, ಐಪಿಎಸ್........  ಇತರೆ ಉದ್ಯೋಗಗಳಿಗೆ ತಯ್ಯಾರು ಮಾಡಬೇಕು " ಎಂಬ   ಮನದಾಳದ ಮಾತುಗಳಿಂದ ಪ್ರತಿಯೊಬ್ಬ ಹವ್ಯಕನ ಹೃದಯ ತಟ್ಟಿದರು.  ಹೆಬ್ಬಾರರು ಮುಂದುವರಿದು, ಸಭೆಯಲ್ಲಿ ಎದುರು ಆಸೀನರಾಗಿದ್ದ  ಶ್ರೀ ಎಂ.ಎನ್ .ಭಟ್ , ಮದ್ಗುಣಿಯವರ ಕಾರ್ಯಶೈಲಿಯನ್ನು ಮೆಚ್ಚುತ್ತ , ಹಿಂದೊಮ್ಮೆ ಬಡವಿಧ್ಯಾರ್ಥಿಗಳ ಆರ್ಥಿಕ ಸಹಾಯಕ್ಕೆ ದೇಣಿಗೆ ಪಡೆಯಲು ಸುಮಾರು ಎರಡು ನೂರು ಸಲ ಬೆಂಬಿಡದೆ ಫೋನ್ ಸಂಪರ್ಕ ಮಾಡಿ ಆ ಕಾಲದಲ್ಲೇ ತನ್ನಿಂದ ಹವ್ಯಕ ಮಹಾಸಭೆಗೆ ಎರಡೂ ವರೆ ಲಕ್ಷ ರೂಪಾಯಿಗಳಷ್ಟು ದೇಣಿಗೆ ಪಡೆದಿದ್ದನ್ನು ಸ್ಮರಿಸಿಕೊಂಡರು.  ಇಲ್ಲೇ ಮಜಾ ಇದ್ದಡ....... ಮತ್ತೆ ,......... ಅಲ್ದಾ ನೋಡಿ.  ಸೂಚ್ಯವಾಗಿ, ಸೂಕ್ಷ್ಮವಾಗಿ ಹೆಬ್ಬಾರರು ನಮ್ಮ ಮಹಾಸಭೆಯ ಈಗಿನ ಪದಾಧಿಕಾರಿಗಳಿಗೆ ನೀಡಿದ ಸಂದೇಶ - "  ಆಗಿನ ಕಾಲದಲ್ಲೇ ಎರಡುವರೆ ಲಕ್ಷದಷ್ಟು ಮೊತ್ತ ನೀಡಿದ ನಾನು ( ಹೆಬ್ಬಾರರು ), ಇಂದು ಶಾಸಕನಾಗಿ, ಆಡಳಿತ ಪಕ್ಷದ ಶಾಸಕನಾಗಿ ನಿಂತಿದ್ದೇನೆ, ದಾನ ನೀಡುವ ಮನಸ್ಸುಳ್ಳವನೆಂಬ ಹಂಬಲವನ್ನು ಆಗಲೇ ಪೂರೈಸಿದ್ದೇನೆ, ಈ ಕಾಲಮಾನದಲ್ಲಿ ನೀವು ( ಮಹಾಸಭೆಯವರು ) ಸಂಪರ್ಕವನ್ನು ಸಮಂಜಸವಾಗಿ ಸಾಧಿಸಿದರೆ ನನ್ನಿಂದ, ನನ್ನ ಸಂಪರ್ಕ ಸಾಧ್ಯತೆಗಳಿಂದ ಲಕ್ಷವೇಕೆ ಕೋಟಿಯನ್ನೇ ಸೇರಿಸಬಹುದು. "  ಇದಲ್ಲವೇ ಸಮಾಜ ಸ್ಪಂದನೆ?


ಕಲಶಕ್ಕೆ ಕಿರೀಟವಿಟ್ಟಂತೆ, ಸಾಂದರ್ಭಿಕವಾಗಿ, ಸಮಯೋಚಿತವಾಗಿ, ಸಾಮಾನ್ಯವಾಗಿ ಸ್ವಲ್ಪ ಜಾಸ್ತಿ ಎಮೋಷನಲ್ ಆಗಿ , ಹಿಯಣ್ಣನಂತೆ, ಹಿತಚಿಂತಕನಂತೆ ಯಾವುದೇ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿರಲಿ , ಎಷ್ಟೇ ಕೆಲಸದ ಭರಾಟೆಯಿರಲಿ ಮುಗ್ಧವಾಗಿ   ಎಲ್ಲರೊಡನೆ ಬೆರೆಯುತ್ತಾ , ಹೊರಸೂಸುವ ನಗುವಿನೊಂದಿಗೆ ಇರುವ ಚೈತನ್ಯಶೀಲ ಅನಂತಕುಮಾರರವರು   ಮಾತನಾಡುತ್ತಾ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಬದುಕುವ ಹವ್ಯಕರ ಬದುಕು ಪಶ್ಚಿಮ ಘಟ್ಟಗಳ ರಕ್ಷಣೆ, ಅಡಿಕೆ ಬೆಳೆಯ ರಕ್ಷಣೆಗಳಲ್ಲಡಗಿದೆ. ಅಡಿಕೆ ಮತ್ತು ತಾಂಬೂಲ ಹಾನಿಕಾರಕ ಎಂಬುದು ಸಂಸ್ಕೃತಿಗೆ ಮಾಡುವ ಅಪಮಾನ, ಗುಟ್ಕಾ ಮತ್ತು ಅಡಿಕೆ ಬೆಳೆಗೆ ಸಂಭಂಧ ಕಲ್ಪಿಸಿ, ಅಡಿಕೆ ಬೆಳೆಗಾರರಿಗಾಗುವ ಹಾನಿ ತಪ್ಪಿಸಲು ಕೇಂದ್ರ ಸರಕಾರ ಮುಂದಾಗಬೇಕು, ಈ ಕುರಿತು ಅಡಿಕೆ ಬೆಳೆಗಾರರ ಒತ್ತಾಸೆಯಾಗಿ ನಿಲ್ಲುವದಾಗಿ ಬರವಸೆ ನೀಡಿದರು. "ಪಶ್ಚಿಮ ಘಟ್ಟ ಉಳಿಸಿ " ಎಂದು ಅಭಿಯಾನ ಹವ್ಯಕ ಮಹಾಸಭೆಯಿಂದ ಆರಂಭವಾಗಬೇಕು, ಈ ದಿಶೆಯಲ್ಲಿ ಮೂರು ದಿವಸದ ಕಮ್ಮಟವೊಂದನ್ನು ಮಾಡಿ ಎಂದು ಸಲಹೆ ನೀಡಿದರು. ಹವ್ಯಕ ಮಹಾಸಭೆ ನನ್ನ ಸಂಸದ  ಕ್ಷೇತ್ರದಲ್ಲಿರದೆ ಇರುವದರಿಂದ ಸಂಸದ ನಿಧಿಯಿಂದ ಹಣ ನೀಡಲಾಗುವದಿಲ್ಲ ಆದರೆ ತನ್ನ ಮಿತ್ರ ರಾಜ್ಯಸಭಾ ಸದಸ್ಯರಿಂದ , ಮಹಾಸಭೆಯ ನೂತನ ಕಟ್ಟಡಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಕೊಡಿಸುವದಾಗಿ ಆಶ್ವಾಸನೆಯಿತ್ತರು .  


ಸಭಾ ಕಾರ್ಯಕ್ರಮದ ಮಧ್ಯೆ ಸ್ಥಳೀಯ  ಶಾಸಕ ಡಾ. ಅಶ್ವತ್ಥನಾರಾಯಣ ರವರಿಂದ ಮಹಾಸಭೆಗೆ ಸಿಗುತ್ತಿರುವ ಪ್ರೋತ್ಸಾಹ, ಸಹಕಾರ ಕುರಿತು ಶ್ಲಾಘಿಸಲಾಯಿತು ಮತ್ತು ಮುಂದೆಯೂ ಇದೇ ರೀತಿ ಸಹಕಾರ ಕೋರಲಾಯಿತು,    


ಮಹಾಸಭೆಯ ಎಲ್ಲ ಕಾರ್ಯಕರ್ತರ ಶ್ರಮ, ಕಾರ್ಯಕ್ಷಮತೆಯಿಂದ ಈ ಕಾರ್ಯಕ್ರಮ ನೆನಪಿನಲ್ಲುಳಿಯುವಂತೆ ಸಂಪನ್ನಗೊಂಡಿತು.



ಹರಿಹರ ಭಟ್, ಬೆಂಗಳೂರು.
www.hariharbhat.blogspot.com
ಜೂನ್ 17 , 2013 .